ನವದೆಹಲಿ/ಲಖನೌ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾತ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಸಚಿವರಾಗಿದ್ದ ವಿಜಯ್ ಕಶ್ಯಪ್ ಅವರು ಮಹಾಮಾರಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕಶ್ಯಪ್ (56) ಅವರು ಮುಜಾಫರ್ನಗರದ ಛರ್ಥವಾಲ್ ಕ್ಷೇತ್ರದ ಜನಪ್ರತಿನಿಧಿ. ಮಂಗಳವಾರ ಗುರಗಾಂವ್ನ ಮೆದಂತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಶ್ಯಪ್ ಅವರು ಕರೊನಾದಿಂದ ಮೃತಪಟ್ಟ ಉತ್ತರ ಪ್ರದೇಶದ ಮೂರನೇ ಸಚಿವರು. ಕಳೆದ ವರ್ಷ ಸಚಿವರಾದ ಕಮಲ್ ರಾಣಿ ವರುಣ್ ಮತ್ತು ಚೇತನ್ ಚೌಹಾಣ್ ಮಹಾಮಾರಿಗೆ ಬಲಿಯಾಗಿದ್ದಾರೆ.
ಕಶ್ಯಪ್ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಕಶ್ಯಪ್ ಅವರು ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದ್ದಾರೆ.
ಬಿಜೆಪಿ ನಾಯಕ ಮತ್ತು ಉತ್ತರ ಪ್ರದೇಶದ ಸಚಿವ ವಿಜಯ್ ಕಶ್ಯಪ್ ಅವರು ಮೃತಪಟ್ಟರೆಂಬ ಸುದ್ದಿ ಕೇಳಿ ದುಃಖವಾಯಿತು. ಅವರು ತಳಮಟ್ಟಕ್ಕೆ ಸಂಪರ್ಕ ಹೊಂದಿದ್ದ ನಾಯಕರಾಗಿದ್ದರು ಮತ್ತು ಯಾವಾಗಲೂ ಸಾರ್ವಜನಿಕ ಹಿತಾಸಕ್ತಿ ಕೆಲಸಗಳಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ಈ ದುಃಖದಲ್ಲಿ ನಾನೂ ಕೂಡ ಕುಟುಂಬದ ಭಾಗವಾಗಿದ್ದೇನೆ. ಸಾವಿಗೆ ಸಂತಾಪ ತಿಳಿಸುತ್ತಾ, ದುಃಖ ಭರಿಸುವ ಶಕ್ತಿ ನೀಡಲೆಂದು ಕೋರುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮಾತ್ರವಲ್ಲದೆ, ಉತ್ತರ ಪ್ರದೇಶದ ಸಿಎಂ ಯೋಗಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕೂಡ ಕಶ್ಯಪ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)
ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್ಟೇಬಲ್ಗೆ ಕಾದಿತ್ತು ಬಿಗ್ ಶಾಕ್!
ಕೇಳುವವರಿಲ್ಲ ‘ಮೂಕ’ ರೋದನ: ಮನೆಯಲ್ಲಿರುವವರೇ ನಾಲ್ವರು, ಎಲ್ಲರೂ ಮೂಕರೇ..!!!