ಹೈದರಾಬಾದ್: ಗಂಡ ಆತ್ಮಹತ್ಯೆ ಮಾಡಿಕೊಂಡ ಬಳಿಕ ಯುವಕನೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದು ಮದುವೆಯಾಗಿದ್ದ ಮಹಿಳೆಯ ಬಾಳಲ್ಲಿ ಇದೀಗ ಬಿರುಗಾಳಿ ಎದ್ದಿದ್ದು, ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಹೈದರಾಬಾದ್ನ ರೆಹಮತ್ನಗರದ ನಿವಾಸಿ ಎಂ. ಸಂಧ್ಯಾರಾಣಿ (28) ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್. ಈ ಹಿಂದೆಯೇ ಆಕೆಗೆ ಮದುವೆ ಆಗಿದ್ದು, 7 ವರ್ಷದ ಮಗಳಿದ್ದಾಳೆ. ಗಂಡ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಳಿಕ ತನ್ನ ಮಗಳೊಂದಿಗೆ ಸಂಧ್ಯಾರಾಣಿ ವಾಸವಿದ್ದಳು.
ಈ ಸಂದರ್ಭದಲ್ಲಿ ಕರೀಮ್ನಗರ ಜಿಲ್ಲೆಯ ಗೋದಾವರಿಖಣಿ ಏರಿಯಾದ ಚರಣ್ತೇಜ (24) ಎಂಬ ಯುವಕನ ಪರಿಚಯ ಆಗಿದೆ. ಎರಡು ವರ್ಷಗಳ ಹಿಂದೆಯೇ ಪರಿಚಯವಾಗಿ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. ಅದರ ಮುಂದುವರಿದ ಭಾಗವಾಗಿ ಕಳೆದ ನವೆಂಬರ್ 7ರಂದು ಕುಕಟಪಲ್ಲಿಯ ಆರ್ಯ ಸಮಾಜ ಭವನದಲ್ಲಿ ಮದುವೆ ಆಗಿದ್ದರು.
ಈ ವೇಳೆ ಚರಣ್ತೇಜ್ನಿಂದ ಬಾಂಡ್ ಪೇಪರ್ ಸಹ ಬರೆಯಿಸಲಾಗಿತ್ತು. ಏಳು ವರ್ಷದ ಹೆಣ್ಣು ಮಗಳು ಇರುವುದು ಮತ್ತು ಗಂಡ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿಯೂ ಒಪ್ಪಿ ಮದುವೆ ಆಗಿದ್ದೇನೆ ಎಂದು ಬಾಂಡ್ ಬರೆದು ಚರಣ್ತೇಜ್ ಸಹಿ ಸಹ ಹಾಕಿದ್ದಾನೆ.
ಮದುವೆ ಏನೋ ಆದರು. ಆದರೆ, ಕೆಲವೇ ದಿನಗಳಲ್ಲಿ ಇಬ್ಬರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು, ಏನನ್ನೂ ಹೇಳದೆ ನಾಲ್ಕು ದಿನಗಳ ಹಿಂದೆ ಚರಣ್ತೇಜ್ ಮನೆ ಬಿಟ್ಟು ಹೋಗಿದ್ದಾನೆ. ಇತ್ತ ಗಂಡ ಬರದಿದ್ದನ್ನು ನೋಡಿದ ಸಂಧ್ಯಾರಾಣಿ ಭಾನುವಾರ ಜುಬಿಲಿಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಹೇಳದೆ ಮನೆಬಿಟ್ಟು ಹೋಗಿದ್ದು, ಫೋನ್ ಮಾಡಿದರೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಸಂಧ್ಯಾರಾಣಿ ದೂರು ನೀಡಿದ್ದಾರೆ. ದೂರು ನೀಡಿರುವ ವಿಚಾರ ತಿಳಿಯುತ್ತಿದ್ದಂತೆ ಚರಣ್ತೇಜ್ ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಈ ವೇಳೆ ತಮ್ಮನ್ನು ಬಿಟ್ಟು ಹೋಗದಂತೆ ಸಂಧ್ಯಾರಾಣಿ ಆತನ ಬಳಿ ಕೇಳಿಕೊಂಡಿದ್ದಾಳೆ. ಆದರೆ, ಅದಕ್ಕೆ ಆತ ಒಪ್ಪಿಕೊಳ್ಳಲು ತಯಾರಿಲ್ಲ.
ಈ ಮಧ್ಯೆ ಚರಣ್ತೇಜ್ ಸೋಮವಾರ ಶಮ್ಶಾಬಾದ್ ಡಿಸಿಪಿಗೆ ಈಮೇಲ್ ಮೂಲಕ ದೂರು ನೀಡಿದ್ದಾನೆ. ಪತ್ನಿ ನನಗೆ ಮೋಸ ಮಾಡಿದ್ದಾಳೆ. ಆಕೆ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ಈಗಾಗಲೇ ಎರಡು ಮದುವೆ ಆಗಿರುವುದನ್ನು ಮುಚ್ಚಿದ್ದಾಳೆ. ನನ್ನನ್ನು ಬಲೆಗೆ ಬೀಳಿಸಿ ಮದುವೆ ಮಾಡಿಕೊಂಡಿದ್ದಾಳೆ. ಅಂದಿನಿಂದ ನನಗೆ ಕಿರುಕುಳ ನೀಡುತ್ತಿದ್ದಾಳೆ. ನನ್ನ ಪಾಲಕರು ಮತ್ತು ಸ್ನೇಹಿತರು ಮನೆಗೆ ಬಂದರೆ ಸೇರಿಸುವುದಿಲ್ಲ. ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ದೂರು ನೀಡಿದ್ದಾರೆ.
ಸಂಧ್ಯಾರಾಣಿ ದೂರಿನ ಬಗ್ಗೆ ಮಾತನಾಡಿರುವ ಜುಬಿಲಿ ಹಿಲ್ಸ್ ಇನ್ಸ್ಪೆಕ್ಟರ್ ರಾಜಶೇಖರ್ ರೆಡ್ಡಿ, ದೂರಿನ ಆಧಾರದ ಮೇಲೆ ಚರಣ್ತೇಜ್ನನ್ನು ಕರೆದು ವಿಚಾರಣೆ ಮಾಡಿದ್ದೇವೆ. ನನ್ನ ಬಗ್ಗೆ ಎಲ್ಲವೂ ಗೊತ್ತಿದ್ದೇ ಚರಣ್ ನನ್ನನ್ನು ಮದುವೆ ಆಗಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರನ್ನು ಕರೆಸಿ ಆಪ್ತ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು. (ಏಜೆನ್ಸೀಸ್)
ತೌಕ್ತೆ ಅಬ್ಬರಕ್ಕೆ ಕಾರುಗಳ ಮೇಲೆ ಕುಸಿದುಬಿದ್ದ ಬಾಲ್ಕನಿ? ಭಯಾನಕ ವಿಡಿಯೋ ಹಿಂದಿನ ಸತ್ಯಾಂಶವೇ ಬೇರೆ!
ಕರೊನಾ ಮುಕ್ತ ಗ್ರಾಮಕ್ಕೆ 25 ಸಾವಿರ ನಗದು ಬಹುಮಾನ: ರೋಹಿಣಿ ಸಿಂಧೂರಿ ಘೋಷಣೆ
ತೌಕ್ತೆ ಅಬ್ಬರಕ್ಕೆ ಕಾರುಗಳ ಮೇಲೆ ಕುಸಿದುಬಿದ್ದ ಬಾಲ್ಕನಿ? ಭಯಾನಕ ವಿಡಿಯೋ ಹಿಂದಿನ ಸತ್ಯಾಂಶವೇ ಬೇರೆ!