ಚೆನ್ನೈ: ಕಾಲಿವುಡ್ ದಿಗ್ಗಜ ನಟ ಹಾಗೂ ಸಕಲಕಲಾವಲ್ಲಭ ಕಮಲ್ ಹಾಸನ್ ವಿರುದ್ಧ ಪ್ರಖ್ಯಾತ ಕಿರುತೆರೆ ಕಲಾವಿದೆ ಒಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಗೀತ ರಚನೆಕಾರ ಸ್ನೇಹನ್ ವಂಚನೆ ಆರೋಪ ಸಂಬಂಧ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದ ಸಮಯದಲ್ಲಿ ಕಮಲ್ ಹಾಸನ್ ವಿರುದ್ಧ ಆರೋಪ ಮಾಡಿದ್ದಾರೆ.
ಖ್ಯಾತ ಕಿರುತೆರೆ ಕಲಾವಿದೆ ಜಯಲಕ್ಷ್ಮೀ ವಿರುದ್ಧ ಸ್ನೇಹನ್ ಕೆಲವು ದಿನಗಳ ಹಿಂದೆ ದೂರು ದಾಖಲಿಸಿದ್ದರು. ಸ್ನೇಹಂ ಹೆಸರಿನ ತನ್ನ ಫೌಂಡೇಶನ್ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದೂರು ನೀಡುವುದು ಗೊತ್ತಾದ ಬಳಿಕ ನನ್ನನ್ನು ಕಾಫಿಶಾಪ್ಗೆ ಕರೆದು ಕಾನೂನು ಕ್ರಮ ಎಲ್ಲ ಬೇಡ, ರಾಜಿ ಮಾಡಿಕೊಳ್ಳೋಣ ಎಂದರು ಎಂದು ಸ್ನೇಹನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ, ಜಯಲಕ್ಷ್ಮೀ ತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ. ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ ಜಯಲಕ್ಷ್ಮೀ, ಬಡ ಜನರಿಗೆ ನೆರವಾಗಲೆಂದು ಸ್ನೇಹಂ ಫೌಂಡೇಶನ್ ಹೆಸರಿನ ಸಾಮಾಜಿಕ ಸಂಸ್ಥೆಯನ್ನು ನಡೆಸುತ್ತಿದ್ದೇನೆ. ಚೆನ್ನೈ ಪ್ರವಾಹ ಹಾಗೂ ಕರೊನಾ ಸಾಂಕ್ರಮಿಕ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳು ಸೇರಿದಂತೆ ಸಾಕಷ್ಟು ನೆರವು ನೀಡಿರುವುದಾಗಿ ತಿಳಿಸಿದರು.
ನಾನು ಸ್ನೇಹನ್ ಎಂಬ ವ್ಯಕ್ತಿಯನ್ನು ಎಂದಿಗೂ ಭೇಟಿಯಾಗಿಲ್ಲ ಅಥವಾ ಆತನೊಂದಿಗೆ ಎಂದಿಗೂ ಮಾತುಕತೆ ನಡೆಸಿಲ್ಲ. ಫೋನ್ ಮೂಲಕವೂ ಸಂಪರ್ಕ ಮಾಡಿಲ್ಲ. ನಾನು ಆತನೊಂದಿಗೆ ಸಂಪರ್ಕದಲ್ಲಿರುವುದನ್ನು ಸಾಬೀತು ಮಾಡಿದರೆ, ನಾನು ಸಾರ್ವಜನಿಕ ಜೀವನವನ್ನು ತೊರೆಯಲು ಸಿದ್ಧವಾಗಿದ್ದೇನೆ. ನಾನು ಅವನ ಹೆಸರನ್ನು ಬಳಸಿದ್ದರೆ ಕಂಪನಿಗಳ ರಿಜಿಸ್ಟ್ರಾರ್ ನನ್ನ ಹೆಸರನ್ನು ಬಳಸಲು ಹೇಗೆ ಅವಕಾಶ ಮಾಡಿಕೊಟ್ಟಿತು ಎಂದು ಪ್ರಶ್ನಿಸಿದ ಜಯಲಕ್ಷ್ಮೀ, ನಾನು ಕೂಡ ಸ್ನೇಹನ್ಗೆ ಲೀಗಲ್ ನೋಟಿಸ್ ಕಳುಹಿಸಿದ್ದೇನೆ ಎಂದರು.
ಇನ್ನಷ್ಟು ಆರೋಪಗಳನ್ನು ಮಾಡಿರುವ ಜಯಲಕ್ಷ್ಮೀ, ನಾನು ಬಿಜೆಪಿಗೆ ಸೇರಿದಾಗಿನಿಂದ ಮಕ್ಕಳ್ ನೀಧಿ ಮೈಯಂ ಪಕ್ಷದ ಕಾರ್ಯಕಾರಿಯಾಗಿರುವ ಸ್ನೇಹನ್ ರಾಜಕೀಯ ದ್ವೇಷ ಕಾರುತ್ತಿದ್ದಾರೆ ಎಂದಿದ್ದಾರೆ. ಡಿಎಂಕೆ ಮತ್ತು ಎಂಎನ್ಎಂ ಒಂದಾಗಿವೆ ಮತ್ತು ಈ ದ್ರಾವಿಡ ಪಕ್ಷವು ಕಮಲ್ ಹಾಸನ್ ಅವರ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಹಣದಿಂದ ಅವರನ್ನು ಖರೀದಿಸಿದೆ ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೆ, ಕಮಲ್ ಅವರನ್ನು ದಕ್ಷಿಣ ಚೆನ್ನೈ ಕ್ಷೇತ್ರದಿಂದ ಸಂಸದರನ್ನಾಗಿ ಮಾಡಲು ಡಿಎಂಕೆ ಮುಂದಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ ಎಂಬ ವಿಚಾರವನ್ನು ಜಯಲಕ್ಷ್ಮೀ ಮುಂದಿಟ್ಟರು.
ಜಯಲಕ್ಷ್ಮೀ ಅವರ ಈ ಆರೋಪಗಳು ಕಮಲ್ ಹಾಸನ್, ಅವರ ಚಿತ್ರರಂಗ ಮತ್ತು ರಾಜಕೀಯ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಆದರೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಮಲ್ ಅವರನ್ನು ಬೆಂಬಲಿಸುತ್ತಿದ್ದಾರೆ. ವಿಕ್ರಮ್ ಸಿನಿಮಾ ಬಿಡುಗಡೆ ಮತ್ತು ಇಂಡಿಯನ್ 2 ಪುನರಾರಂಭದ ಹಿಂದೆ ಇರುವ ಉದಯನಿಧಿ ಸ್ಟಾಲಿನ್ ಅವರೊಂದಿಗೆ ಉಳಗನಾಯಕನ್ ವ್ಯವಹಾರ ಸಂಬಂಧವನ್ನು ಹೊಂದಿದ್ದಾರೆ. ಆದಾಗ್ಯೂ ಅವರು ಡಿಎಂಕೆಯನ್ನು ವಿವಿಧ ವಿಷಯಗಳಲ್ಲಿ ಟೀಕಿಸಿದ್ದಾರೆ ಎಂದು ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)
ಧನಂಜಯ್ ನಿಜಕ್ಕೂ ನಟರಾಕ್ಷಸ!; ‘ಮಾನ್ಸೂನ್ ರಾಗ’ ಟ್ರೇಲರ್ ಲಾಂಚ್ನಲ್ಲಿ ರಚಿತಾ ಮಾತು
ಕಡಿಮೆ ದರದಲ್ಲಿ ವಿಕ್ರಾಂತ್ ರೋಣ: ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡದಿಂದ ಹೊಸ ಪ್ರಯತ್ನ..