More

    ಸಾಕಷ್ಟು ಅವಮಾನ ಎದುರಿಸಿ 3 ವರ್ಷದಿಂದ ಕೂದಲು ಬೆಳೆಸ್ತಿರೋ ಬಾಲಕನ ಬಗ್ಗೆ ತಿಳಿದ್ರೆ ಶಹಭಾಸ್​ ಅಂತೀರಾ…

    ತ್ರಿಸ್ಸೂರ್​: ಈ ಮೇಲಿನ ಚಿತ್ರದಲ್ಲಿ ನೀವು ನೋಡುತ್ತಿರುವುದು ಬಾಲಕಿಯಲ್ಲ. ಆತ ಬಾಲಕ. ಆತನ ಹೆಸರು ಯದು ಕೃಷ್ಣನ್​. 8ನೇ ತರಗತಿ ವಿದ್ಯಾರ್ಥಿಯಾಗಿರುವ ಯದು ತನ್ನ ಉದ್ದ ಕೂದಲಿನಿಂದಲೇ ಎಲ್ಲರ ಹುಬ್ಬೇರಿಸಿದ್ದಾನೆ. ಅಲ್ಲದೆ, ಆತನನ್ನು ನೋಡುವ ಬಹುತೇಕರು ಹುಡುಗಿ ಎಂದೇ ಭಾವಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಯದು ಕೂದಲು ಬೆಳೆಸುತ್ತಿದ್ದು, ಇದರ ಹಿಂದಿನ ಉದ್ದೇಶವನ್ನು ತಿಳಿದ್ರೆ ಖಂಡಿತ ನೀವು ಯದುವಿಗೆ ಒಮ್ಮೆ ಶಹಭಾಸ್​ ಅಂತೀರಾ…

    ಬಾಲಕ ಯದು, ತ್ರಿಸ್ಸೂರ್​ನ ಮನ್ನುತ್ತಿ ನಿವಾಸಿಗಳಾದ ಕಲಾಮಂದಲಂ ಶ್ರೀಜಾ ಆರ್​ ಕೃಷ್ಣನ್​ ಮತ್ತು ಕಲಾಮಂದಲಂ ಸತ್ಯನಾರಾಯಣನ್ ಅವರ ಸುಪುತ್ರ. ತನ್ನ ತಾಯಿಯ ಮೊಬೈಲ್​ನಲ್ಲಿ ಕ್ಯಾನ್ಸರ್​ ರೋಗಿಗಳ ದೃಶ್ಯವನ್ನು ನೋಡಿದ ಬಳಿಕ ಕೂದಲು ಬೆಳೆಸುವ ಪ್ರತಿಜ್ಞೆ ಮಾಡಿದನು. ವಿಡಿಯೋ ನೋಡಿದ ಯದು, ತನ್ನ ಕೂದಲನ್ನು ರೋಗಿಗಳಿಗೆ ದಾನ ಮಾಡಬಹುದೇ ಎಂದು ತಾಯಿಯನ್ನು ಕೇಳಿದನು. ಆತನ ನಿರ್ಧಾರದಿಂದ ಹೆಮ್ಮೆ ಪಡುತ್ತಿರುವ ಪಾಲಕರು ಯದುವಿಗೆ ಪೂರ್ಣ ಬೆಂಬಲ ನೀಡುತ್ತಿದ್ದಾರೆ.

    ಸದ್ಯ ಯದುವಿನ ಕೂದಲು 36 ಸೆಂಟಿಮೀಟರ್​ ಉದ್ದ ಬೆಳೆದಿದೆ. ಮದ್ರಾಸ್​ ಮೆಡಿಕಲ್​ ಮಿಷನ್​ ಆಸ್ಪತ್ರೆಗೆ ಇನ್ನೊಂದು ವಾರದ ಒಳಗೆ ಕೂದಲು ದಾನ ಮಾಡಲು ಯದು ಮುಂದಾಗಿದ್ದಾನೆ. ನಿಜಕ್ಕೂ ಇದು ಎಲ್ಲರಿಗೂ ಸ್ಫೂರ್ತಿದಾಯಕ. ಯದುವಿನ ದೃಢಸಂಕಲ್ಪ ಮೆಚ್ಚುವಂಥದ್ದು, ಆದರೆ, ಯದುವಿಗೂ ಅವಮಾನ ತಪ್ಪಿಲ್ಲ. ಯಾವಾಗ ಉದ್ದ ಕೂದಲು ಬಿಡಲು ಆರಂಭಿಸಿದನೋ ಆತ ಅವಮಾನಗಳನ್ನೂ ಎದುರಿಸಿದ್ದಾನೆ.

    ಯದು ಬಟ್ಟೆ ಅಥವಾ ಚಪ್ಪಲಿ ಅಂಗಡಿಗಳಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಆತನಿಗೆ ಹೆಣ್ಣು ಮಕ್ಕಳ ಬಟ್ಟೆಯನ್ನು ತೋರಿಸಿದ್ದಾರೆ. ಇದಲ್ಲದೆ, ನೋಡಲು ಹುಡುಗಿಯ ರೀತಿ ಇದೀಯಾ ಎಂದು ಶಾಲೆಯಲ್ಲಿ ಆತನ ಸಹಪಾಠಿಗಳು ಅಣುಕಿಸಿದ್ದಾರೆ. ಅಲ್ಲದೆ, ರೈಲಿನಲ್ಲಿ ಆತನನ್ನು ಒಂಟಿಯಾಗಿ ಬಾತ್​ರೂಮ್​ಗೆ ಕಳುಹಿಸಲು ಹೆದರುತ್ತಿದೆವು ಎಂದು ಯದು ಪಾಲಕರು ತಿಳಿಸಿದ್ದಾರೆ.

    ಶಾಲೆಯಿಂದ ಮನೆಗೆ ಬರುವಾಗ ಅನೇಕ ಬಾರಿ ಕಣ್ಣೀರಾಕುತ್ತಾ ಬಂದಿದ್ದಾನೆ. ಆವಾಗಲೆಲ್ಲ ನಾವು ಆತನನ್ನು ಸಮಾಧಾನ ಮಾಡಿ, ಧೈರ್ಯ ತುಂಬಿದೆವು. ಒಮ್ಮೆ ಅವಮಾನವನ್ನು ಸಹಿಸದೇ ಕೂದಲು ಕತ್ತಿರಿಸಿಕೊಳ್ಳಲು ತೀರ್ಮಾನಿಸಿದ್ದ. ಆದರೆ, ನಿರ್ಧಾರ ಬದಲಿಸಿಕೊಳ್ಳುವಂತೆ ನಾವು ತಿಳಿಹೇಳಿದೆವು. ಆತನ ಪ್ರಯತ್ನ ವ್ಯರ್ಥವಾಗಿ ಬಿಡುತ್ತದೆ ಎಂಬ ಚಿಂತೆ ಕಾಡುತ್ತಿತ್ತು. ಆದರೆ, ಈಗ ಎಲ್ಲವೂ ಆತನಿಗೆ ತಿಳಿದಿದೆ. ತಾನೂ ಒಂದೊಳ್ಳೆ ಕೆಲಸ ಮಾಡುತ್ತಿರುವುದಾಗಿ ಆತನಿಗೆ ತಿಳಿದಿದೆ. ನಾವು ಕೂಡ ನಮ್ಮ ಮಗನ ಬಗ್ಗೆ ಹೆಮ್ಮೆ ಪಡುತ್ತೇವೆ ಎನ್ನುತ್ತಾರೆ ಯದು ತಾಯಿ ಶ್ರೀಜಾ.

    ಕಳೆದ ಒಂದು ತಿಂಗಳಿಂದ ಯದು ಶಾಲೆಗೆ ಹಾಜರಾಗಿಲ್ಲ. ಶಾಲೆಗೆ ಬರುವುದಾದರೆ, ಕೂದಲು ಕತ್ತರಿಸಿಕೊಂಡು ಬಾ ಎಂದು ಶಾಲಾ ಪ್ರಾಂಶುಪಾಲರು ಹೇಳಿದ್ದಾರೆ. ಆದರೂ, ಆತನ ಉದ್ದೇಶ ತಿಳಿದು ಆನ್​ಲೈನ್​ ಕ್ಲಾಸ್​ಗೆ ಹಾಜರಾಗಲು ಶಾಲಾ ಆಡಳಿತ ಮಂಡಳಿ ಅನುಮತಿ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಕೂದಲು ದಾನ ಮಾಡಿದ ಬಳಿಕ ಎಂದಿನಂತೆ ಭೌತಿಕ ತರಗತಿಗೆ ಯದು ಹಾಜರಾಗಲಿದ್ದಾನೆ ಎಂದು ಪಾಲಕರು ಹೇಳಿದ್ದಾರೆ. (ಏಜೆನ್ಸೀಸ್​)

    ಪುಷ್ಪ ಸಿನಿಮಾ ಮಾದರಿಯಲ್ಲೇ ಗಂಡನ ಕತ್ತು ಸೀಳಿದ ಪತ್ನಿಯ ಹೇಳಿಕೆ ಕೇಳಿ ಶಾಕ್​ ಆದ ಪೊಲೀಸರು!

    ತಲೆಗೆ ಮುತ್ತಿಟ್ಟು ಅತಿರೇಕ ವರ್ತನೆ ತೋರಿದ ಕೃನಾಲ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ ಹಿರಿಯ ಆಟಗಾರರು!

    ಏಕಕಾಲದಲ್ಲಿ ಇಬ್ಬರು ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ಬಂದಿದೆ: ಶಿವರಾಮೇಗೌಡರಿಂದ ದಳಪತಿಗಳಿಗೆ ಸೆಡ್ಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts