More

    ಕಳೆದ ವರ್ಷ 12 ಕೋಟಿ ರೂ. ಬಹುಮಾನ ಗೆದ್ರೂ ಇಂದಿಗೂ ಆಟೋ ಚಾಲಕ ಬದುಕುತ್ತಿರುವ ರೀತಿ ಎಲ್ಲರಿಗೂ ಸ್ಫೂರ್ತಿ!

    ಕೊಚ್ಚಿ: ಎಷ್ಟೇ ಶ್ರೀಮಂತಿಕೆ ಇದ್ದರೂ ಅಥವಾ ಕೆಲವೊಮ್ಮೆ ಅದೃಷ್ಟ ಖುಲಾಯಿಸಿ ದಿಢೀರ್​ ಶ್ರೀಮಂತನಾದರೂ ನಾವು ನಡೆದುಬಂದ ಹಾದಿಯನ್ನು ಮರೆಯಬಾರದು ಎಂದು ತಿಳಿದವರು ಹೇಳುತ್ತಾರೆ. ಆದರೆ, ಬಹುತೇಕರು ಇದಕ್ಕೆ ತದ್ವಿರುದ್ಧವಾಗಿಯೇ ನಡೆದುಕೊಂಡರೆ, ಬೆರಳಣಿಕೆಯಷ್ಟು ಮಂದಿ ಇದನ್ನು ಅನುಸರಿಸುತ್ತಾರೆ. ಆ ಸಾಲಿಗೆ ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ವ್ಯಕ್ತಿ ತಾಜಾ ಉದಾಹರಣೆಯಾಗಿದ್ದಾರೆ.

    ಕೇರಳದ ಅತಿ ದೊಡ್ಡ ಹಬ್ಬ ಓಣಂ ವಿಶೇಷವಾಗಿ ಪ್ರತಿ ವರ್ಷ ಸರ್ಕಾರ ಬಂಪರ್​ ಲಾಟರಿಯನ್ನು ಆಯೋಜಿಸುತ್ತದೆ. ಈ ಬಾರಿ ಬಂಪರ್​ ಲಾಟರಿಯ ಬಹುಮಾನ ಮೊತ್ತವಾಗಿ 25 ಕೋಟಿ ರೂಪಾಯಿಯನ್ನು ಸರ್ಕಾರ ನಿಗದಿ ಮಾಡಿದೆ. ಈ ವಿಚಾರ ಕೇರಳದಲ್ಲಿ ಭಾರೀ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಕಳೆದ ವರ್ಷದ ಓಣಂ ಬಂಪರ್​ ಲಾಟರಿ ವಿಜೇತ ಪಿ.ಆರ್​. ಜಯಪಲಾನ್​ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇವರ ಕುರಿತಾದ ಈ ಒಂದು ಸ್ಟೋರಿ ಒಳ್ಳೆಯ ಸಂದೇಶವನ್ನೂ ಸಾರುತ್ತದೆ.

    ಕಳೆದ ವರ್ಷ ಓಣಂ ಬಂಪರ್​ ಲಾಟರಿಯಲ್ಲಿ 12 ಕೋಟಿ ರೂ. ಗೆದ್ದಿರುವ ಪಿ. ಆರ್​. ಜಯಪಾಲನ್​, ಓರ್ವ ಸಾಮಾನ್ಯ ಆಟೋ ಚಾಲಕ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯುವ ಈ ಕಾಲದಲ್ಲಿ ಜಯಪಾಲನ್​ ಇಂದಿಗೂ ಮೊದಲಿನಂತೆಯೇ ಆಟೋ ಚಲಾಯಿಸುತ್ತಿದ್ದಾರೆ ಅಂದರೆ, ಅಚ್ಚರಿಯ ವಿಷಯವೇ ಸರಿ. ಜಯಪಾಲನ್​ ಪತ್ನಿ ಮಿನಿ ಅವರು ಛೋಟನಿಕರಾದಲ್ಲಿರುವ ಡಾ. ಪಡಿಯ್ಯಾರ್​ ಮೊಮೆರಿಯಲ್​ ಮೆಡಿಕಲ್​ ಕಾಲೇಜಿನಲ್ಲಿ ಸ್ವೀಪರ್ (ಕಸ ಗುಡಿಸುವ)​ ಆಗಿ ಕೆಲಸ ಮಾಡುತ್ತಿದ್ದಾರೆ. ಓಣಂ ಲಾಟರಿಯಲ್ಲಿ ಅದೃಷ್ಟ ಕೈಹಿಡಿದರೂ ಜಯಪಾಲನ್​ ಅವರ ಹವ್ಯಾಸದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಈಗಾಗಲೂ ಎಂದಿನಂತೆಯೇ ತಮ್ಮ ಸರಳ ಜೀವನವನ್ನು ನಡೆಸುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಜಯಪಾಲನ್​, ಲಾಟರಿಯಲ್ಲಿ ಬಂದ ಹಣದಿಂದ ಒಂದು ಕಾರು ಮತ್ತು ತ್ರಿಪುಣಿತುರಾ ಹಾಗೂ ಪಚಲತ್​ನಲ್ಲಿ 11 ಸೆಂಟ್​ ಜಮೀನು ಖರೀದಿಸಿದ್ದೇನೆ. ಕೆಲವೊಂದಿಷ್ಟು ಸಾಲ ಇತ್ತು. ಅದನ್ನು ತೀರಿಸಿದ್ದೇನೆ. ಒಂದಿಷ್ಟು ಹಣವನ್ನು ಒಡಹುಟ್ಟಿದವರು ಮತ್ತು ಆಪ್ತ ಸಂಬಂಧಿಕರಿಗೆ ನೀಡಿದ್ದೇನೆ. ಒಂದು ಭಾಗದ ಹಣದಲ್ಲಿ ಬಡವರಿಗೆ ಸಹಾಯ ಮಾಡಿದ್ದೇನೆ. ಉಳಿದ ಹಣವನ್ನು ನನ್ನ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇನೆ. ಆ ಹಣವನ್ನು ಕುಟುಂಬದ ವೆಚ್ಚಕ್ಕಾಗಿ ಬಳಸುತ್ತಿಲ್ಲ ಎಂದು ಜಯಪಾಲನ್​ ಹೇಳಿದ್ದಾರೆ.

    ಜಯಪಾಲನ್​ ಅವರ ಹಿರಿಯ ಮಗ ವೈಶಾಕ್​ ಎಲೆಕ್ಟ್ರಿಷಿಯನ್​. ಸೊಸೆ ಕಾರ್ತಿಕಾ ಪೋಸ್ಟ್​ವುಮನ್​. ಕಿರಿಯ ಮಗ ವಿಷ್ಣು ಹೋಮಿಯೋ ಡಾಕ್ಟರ್​. ಈಗ ಎಂಬಿಬಿಎಸ್​ಗೆ ಸೇರಿದ್ದಾನೆ. ಆಟೋಗಾಗಿ ತೆಗೆದುಕೊಂಡಿದ್ದ ಸಾಲವನ್ನು ಜಯಪಾಲನ್​ ಇನ್ನೂ ಪಾವತಿಸಬೇಕಿದೆ.

    ಇದೀಗ ಕೇರಳ ಸರ್ಕಾರ ಓಣಂ ಬಂಪರ್​ ಲಾಟರಿ ಬಹುಮಾನವಾಗಿ 25 ಕೋಟಿ ರೂಪಾಯಿ ಹಣವನ್ನು ನಿಗದಿ ಮಾಡಿದೆ. ದ್ವಿತೀಯ ಬಹುಮಾನ 5 ಕೋಟಿ ಹಾಗೂ 10 ತೃತೀಯ ಬಹುಮಾನ ತಲಾ 1 ಕೋಟಿ ರೂಪಾಯಿಗಳ ಲಾಟರಿ ಯೋಜನೆ ಇದಾಗಿದೆ. ಇದರಲ್ಲಿ ವಿಜೇತರಾಗುವವರಿಗೆ ಜಯಪಾಲನ್​ ಅವರು ಸಂದೇಶವನ್ನು ರವಾನಿಸಿದ್ದು, ಹಣ ವ್ಯರ್ಥ ಮಾಡಬೇಡಿ ಎಂದು ಹೇಳಿದ್ದಾರೆ. ಎಲ್ಲವೂ ಕೂಡ ವಿಷ್ಣುವಿನ ಮಹಿಮೆ. ನಾನು ಒಂದು ತೋಟವನ್ನು ಖರೀದಿ ಮಾಡಿ 10 ಮಂದಿಗೆ ಉದ್ಯೋಗ ನೀಡಲು ಬಯಸಿದ್ದೇನೆ ಎಂದು ಜಯಪಾಲನ್​ ಹೇಳಿದ್ದಾರೆ. (ಏಜೆನ್ಸೀಸ್​)

    ಯಾರಿಗುಂಟು, ಯಾರಿಗಿಲ್ಲ 25 ಕೋಟಿ ರೂಪಾಯಿ ಗೆಲ್ಲುವ ಅದೃಷ್ಟ: ಓಣಂ ನಿಮಿತ್ತ ಹಣದ ಹೊಳೆ

    ವಿಜಯ್​-ರಶ್ಮಿಕಾ ನಡುವಿನ ಲವ್​ ಲೈಫ್​ ಬಗ್ಗೆ ಬಹಿರಂಗವಾಗಿ ಮಾತನಾಡಿದ ಸಾರಾ ಅಲಿ ಖಾನ್​!

    ಉನ್ನತ ಹುದ್ದೆ ಆಸೆ ತೋರಿಸಿ ಕೋಟಿ ಕೋಟಿ ಹಣ ಗುಳುಂ: ಸ್ಯಾಂಡಲ್​ವುಡ್​ ನಟ ಅರೆಸ್ಟ್​- ಕೇಸ್​ಗಳು ಒಂದಲ್ಲಾ… ಎರಡಲ್ಲಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts