ತಿರುವನಂತಪುರಂ: ಒಂದು ದಿನದ ಅಂತರದಲ್ಲೇ ಇಬ್ಬರು ರಾಜಕೀಯ ನಾಯಕರ ಬರ್ಬರ ಹತ್ಯೆಯಾಗಿದ್ದು, ಈ ಘಟನೆ ಕೇರಳದ ಆಲಪ್ಪುಳ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಬಿಜೆಪಿ ಮತ್ತು ಎಸ್ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಪಕ್ಷಕ್ಕೆ ಸೇರಿದ ನಾಯಕರನ್ನು ಹತ್ಯೆ ಮಾಡಲಾಗಿದೆ.
ಆಲುಪ್ಪುಳ ನಗದಲ್ಲಿ ಸದ್ಯ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಘಟನೆಯನ್ನು ಖಂಡಿಸಿರುವ ಸಿಎಂ ಪಿಣರಾಯಿ ವಿಜಯನ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
ನಿನ್ನೆ (ಡಿ.18) ಸಂಜೆ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್. ಶಾನ್ ಮನೆಗೆ ಹೋಗುವಾಗ ಕೊಲೆಯಾಗಿದ್ದಾರೆ. ಶಾನ್ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವಾಗ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಾನ್ ಚಿಕಿತ್ಸೆ ಫಲಕಾರಿಯಾಗದೇ ಕೊಚ್ಚಿ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರ್ಎಸ್ಎಸ್ನ ಕಾರ್ಯಕರ್ತರು ಈ ದಾಳಿಯನ್ನು ಮಾಡಿದ್ದಾರೆಂದು ಎಸ್ಡಿಪಿಐ ಆರೋಪಿಸಿದೆ.
ಇದಾದ 12 ಗಂಟೆ ಬಳಿಕ ಕೆಲ ಅಪರಿಚಿತ ವ್ಯಕ್ತಿಗಳು ಬಿಜೆಪಿ ನಾಯಕ ರೆಂಜಿತ್ ಶ್ರೀನಿವಾಸನ್ ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ. ರೆಂಜಿತ್ ಅವರು ಪಕ್ಷದ ಒಬಿಸಿ ಘಟಕದ ಮುಖ್ಯಸ್ಥರಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡು ಘಟನೆಗಳ ಮೇಲೆ ತನಿಖೆ ಕೈಗೊಂಡಿದ್ದಾರೆ.
ಇಂತಹ ಹೀನ ಮತ್ತು ಅಮಾನವೀಯ ಕೃತ್ಯಗಳಂತಹ ಹಿಂಸಾತ್ಮಕ ಘಟನೆಗಳು ರಾಜ್ಯಕ್ಕೆ ಅಪಾಯಕಾರಿ. ಈ ಕೃತ್ಯಗಳನ್ನು ಎಸಗಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಸಿಎಂ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)
ಭಾಷೆ, ಸ್ವಾತಂತ್ರ್ಯ ವೀರರಿಗೆ ಅವಮಾನಿಸೋ ಷಡ್ಯಂತ್ರ ರೂಪುಗೊಂಡಿದ್ದು ಕಾಂಗ್ರೆಸ್ ವಾರ್ ರೂಮಿನಲ್ಲೇ? ಬಿಜೆಪಿ ಆರೋಪ
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ: ಸರ್ಕಾರಿ ಶಾಲೆ ಟಿಸಿ ಪಡೆದು ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ ತಂದೆ
ಮೊಬೈಲ್ ಆಸೆಗೆ ಬಿದ್ದ ಬಾಗಲಕೋಟೆ ಯುವಕನಿಗೆ ಮಹಾ ವಂಚನೆ: ನಿಮಗೂ ಈ ರೀತಿ ಆಗಬಹುದು ಎಚ್ಚರ!