ಹೈದರಾಬಾದ್: ಭಾರೀ ಪ್ರಮಾಣದ ಮದ್ಯದೊಂದಿಗೆ ನಿದ್ದೆ ಮಾತ್ರೆ ಬೆರೆಸಿ ಸೇವಿಸುವ ಮೂಲಕ ಟಾಲಿವುಡ್ನ ಕಿರುತೆರೆ ಕಲಾವಿದೆ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡಿರುವ ನಟಿ ಮೈಥಿಲಿ ರೆಡ್ಡಿ ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮೈಥಿಲಿ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆಕೆಯ ಫೋನ್ ಸಿಗ್ನಲ್ ಜಾಡು ಹಿಡಿದು ಪಂಜಗುಟ್ಟ ಠಾಣಾ ಪೊಲೀಸರು ಆಕೆಯ ಮನೆಗೆ ಧಾವಿಸಿದ್ದಾರೆ. ಈ ವೇಳೆ ಮೈಥಿಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಪೊಲೀಸರು ನೋಡುತ್ತಾರೆ. ಇದಲ್ಲದೆ, ಆಕೆಯ ಪಕ್ಕದಲ್ಲೇ 8 ಮದ್ಯದ ಬಾಟಲ್ ಮತ್ತು ನಿದ್ದೆ ಮಾತ್ರೆಗಳು ಇದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
8 ಬಾಟಲ್ ಮದ್ಯದ ಜತೆ ನಿದ್ದೆ ಮಾತ್ರೆ ಬೆರೆಸಿ ಕುಡಿದಿರುವುದು ಮನೆಯಲ್ಲಿ ಸಿಕ್ಕ ಸಾಕ್ಷಿಗಳಿಂದ ತಿಳಿದುಬಂದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಮೈಥಿಲಿಯನ್ನು ಸಮೀಪದ ಆಸ್ಪತ್ರೆಗೆ ಪೊಲೀಸರು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅಲ್ಲದೆ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, 2021ರ ಸೆಪ್ಟೆಂಬರ್ 27ರಂದು ಮೈಥಿಲಿ ತನ್ನ ಗಂಡ ಶ್ರೀಧರ್ ರೆಡ್ಡಿ ಮತ್ತು ಇತರೆ ನಾಲ್ವರ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕಿರುಕುಳದ ದೂರು ನೀಡಿದ್ದರು. ಈ ಪ್ರಕರಣದ ಪ್ರಾಥಮಿಕ ತನಿಖೆ ಪೂರ್ಣಗೊಂಡಿದೆ. ಅದೇ ರೀತಿ ಮೈಥಿಲಿ ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ ಸೂರ್ಯಪೇಟ್ ಜಿಲ್ಲೆಯ ಮೋತಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ.
ಇದರ ನಡುವೆ ಗಂಡನ ವಿರುದ್ಧ ಮೈಥಿಲಿ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಪತಿ ಶ್ರೀಧರ್ ರೆಡ್ಡಿ ಮದುವೆಗೂ ಮುನ್ನ ರಜಿತಾ ಎಂಬ ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರದಲ್ಲಿ ನನ್ನ ಪತಿ ಆಗಾಗ ನನಗೆ ಕಿರುಕುಳ ನೀಡುತ್ತಿದ್ದ. ನನಗೆ ಮೋಸ ಮಾಡಿರುವ ಪತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೈಥಿಲಿ ಆಗ್ರಹಿಸಿದ್ದಾರೆ.
ನಮ್ಮದು ಅರೆಂಜ್ ಮ್ಯಾರೇಜ್. ಪತಿ ಶ್ರೀಧರ್ ರೆಡ್ಡಿ ಟಿವಿ ಕಾರ್ಯಕ್ರಮ ನಿರ್ದೇಶಕರು. ಇಬ್ಬರಿಗೂ ಇದು ಎರಡನೇ ಮದುವೆ. ಮದುವೆಗೂ ಮುನ್ನ ಒಳ್ಳೆಯವರಂತೆ ವರ್ತಿಸುತ್ತಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ತನ್ನ ಬಣ್ಣ ಬದಲಾಯಿಸಿದನು. ವರದಕ್ಷಿಣೆಗೆ ಬೇಡಿಕೆ ಇಟ್ಟರು. ನಮ್ಮ ಮನೆಯಿಂದ ಚಿನ್ನಾಭರಣ ಕದ್ದಿದ್ದಾರೆ. ಆತನಿಗೆ ಮದುವೆಗೂ ಮುನ್ನ ರಜಿತಾ ಎಂಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಅವಳು ನನ್ನ ಸ್ನೇಹಿತೆ ಎಂದು ಹೇಳಿಕೊಂಡಿದ್ದ. ಆದರೆ, ಇಬ್ಬರ ನಡುವಿನ ಅಸಲಿ ಸಂಬಂಧ ನನಗೆ ಗೊತ್ತಾಯಿತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳಗಳು ಕೂಡ ನಡೆದಿವೆ. ನನಗೆ ಹಿಂಸೆ ನೀಡುತ್ತಿದ್ದ ಎಂದು ಮೈಥಿಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪಂಜಗುಟ್ಟ ಠಾಣಾ ಪೊಲೀಸರು ನಟಿಯ ಆತ್ಮಹತ್ಯೆ ಯತ್ನಕ್ಕೆ ಆಕೆಯ ಪತಿ ಮತ್ತು ಆತನ ಕುಟುಂಬಕ್ಕೆ ನಂಟು ಇದೆಯೇ ಅಥವಾ ಆಕೆ ಈ ಕೃತ್ಯ ಎಸಗಲು ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ನಾನು ವಾಟ್ಸ್ಆ್ಯಪ್ನಲ್ಲೇ ಹೇಳಿದ್ದೆ…ಅನಂತರಾಜು ಸಾವಿನ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಆಡಿಯೋ ಲೀಕ್!
ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆಗೆ ಎದುರಾಯ್ತು ಭಾರೀ ಸಂಕಷ್ಟ!
ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ಡಿಮ್ಯಾಂಡ್ ಕೇಳಿ ಶಾಕ್ ಆದ ಟಾಲಿವುಡ್ ಮಂದಿ!