More

    ನಟ ಧರಮ್​ ತೇಜ್ ಬೈಕ್​ ಅಪಘಾತ ಪ್ರಕರಣ: ಟಾಲಿವುಡ್​ ನಟನ ವಿರುದ್ಧವೇ ದಾಖಲಾಯ್ತು ದೂರು!

    ಹೈದರಾಬಾದ್​: ಖ್ಯಾತ ತೆಲುಗು ನಟ ಸಾಯಿ ಧರಮ್ ತೇಜ್ ಅವರು ಹೈದರಾಬಾದ್​ನ ಐಕಿಯಾ ಕೇಬಲ್​ ಬ್ರಿಡ್ಜ್​ ಬಳಿ ಅಪಘಾತಕ್ಕಿಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ (ಸೆ.10) ರಾತ್ರಿ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಭೀಕರ ಅಪಘಾತವಾದರೂ ಪ್ರಾಣಕ್ಕೆ ಯಾವುದೇ ಕುತ್ತಾಗಿಲ್ಲ ಎಂದು ವೈದ್ಯರು ಹೆಲ್ತ್ ಬುಲೆಟಿನ್​ನಲ್ಲಿ ಮಾಹಿತಿ ನೀಡಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ ಧರಮ್​ ತೇಜ್​ ಹೆಲ್ಮೆಟ್​ ಧರಿಸಿದ್ದರಿಂದ ಬದುಕುಳಿದಿದ್ದಾರೆಂದು ತಿಳಿಸಿದ್ದಾರೆ. ಹೀಗಿದ್ದರೂ ನಟ ಧರಮ್​ ತೇಜ್​ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

    ಅತಿಯಾದ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿರುವುದರಿಂದ ಭಾರತೀಯ ದಂಡಸಂಹಿತೆ 336 ಮತ್ತು 184 ಸೆಕ್ಷನ್​ಗಳ ಅಡಿಯಲ್ಲಿ ರಾಯದುರ್ಗ ಠಾಣಾ ಪೊಲೀಸರು ಧರಮ್​ ತೇಜ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಧರಮ್​ ತೇಜ್​ ಅವರ ಅಪಘಾತದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದಕ್ಕೆ ಸಂಬಂಧಿ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್​ ಆಗಿದೆ. ವೇಗವಾಗಿ ಬರುತ್ತಿದ್ದ ಬೈಕ್​ ಇದ್ದಕ್ಕಿದ್ದಂತೆ ಸ್ಕಿಡ್​ ಆಗುವ ದೃಶ್ಯ ಅದರಲ್ಲಿದೆ. ಪಕ್ಕದಲ್ಲೇ ಆಟೋ ಒಂದು ಹಾದುಹೋಗಿದ್ದು, ಸ್ವಲ್ಪದರಲ್ಲೇ ಅದಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿದೆ.

    ನಿನ್ನೆ ಗಣೇಶ ಹಬ್ಬವಾದ್ದರಿಂದ ಐಕಿಯಾ ಕೇಬಲ್​ ಬ್ರಿಡ್ಜ್​ನಲ್ಲಿ ಟ್ರಾಫಿಕ್​ ಇರಲಿಲ್ಲ. ರಸ್ತೆಗಳು ಖಾಲಿಯಿದ್ದದ್ದರಿಂದ ಧರಮ್ ತೇಜ್​ ವೇಗವಾಗಿ ಬೈಕ್​ನಲ್ಲಿ ಬರುತ್ತಿದ್ದರು ಎಂಬ ಮಾಹಿತಿ ಇದೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್​ ಸ್ಕಿಡ್​ ಆಗಿ ಬಿದ್ದಿದ್ದಾರೆಂದು ತಿಳಿದುಬಂದಿದೆ.

    ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹೈದರಾಬಾದ್​ ಪೊಲೀಸರು, ಹೆಲ್ಮೆಟ್​ ಧರಿಸಿದ್ದರಿಂದ ಧರಮ್​ ತೇಜ್​ಗೆ ಹೆಚ್ಚಿನ ಅನಾಹುತ ಆಗಿಲ್ಲ. ಒಂದು ವೇಳೆ ಹಲ್ಮೆಟ್​ ಇರದೇ ಹೋಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇತ್ತು. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ತಕ್ಷಣ ವಾಹನವನ್ನು ನಿಯಂತ್ರಿಸಲಾಗದೇ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

    ಸದ್ಯ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಹೇಗೆ ಅಪಘಾತ ಸಂಭವಿಸಿತು ಎಂಬುದನ್ನು ಪರಿಶೀಲನೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಮರಳು ಇದ್ದಿದ್ದರಿಂದ ಬೈಕ್​ ಸ್ಕಿಡ್​ ಆಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಪೊಲೀಸರ ಪ್ರಕಾರ ವೇಗವನ್ನು ನಿಯಂತ್ರಿಸಲಾಗದೆ ಅಪಘಾತ ಸಂಭವಿಸಿದೆ ಎನ್ನುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಅಪಘಾತದಲ್ಲಿ ತೀವ್ರ ಗಾಯಗಳು ಆಗಿರುವುದರಿಂದ ಧರಮ್​ ತೇಜ್​ ಅವರನ್ನು ಮೊದಲು ಮೆಡಿ ಕವರ್ ಆಸ್ಪತ್ರೆಗೆ ತೆರಳಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ ಧರಮ್​ ತೇಜ್​, ಮೆಗಾಸ್ಟಾರ್ ಚಿರಂಜೀವಿ ಅವರ ತಂಗಿಯ ಮಗ.

    ನಟ ಸಾಯಿ ಅವರನ್ನು ನೋಡಲು ನಟ ಚಿರಂಜೀವಿ, ನಟ ಪವನ್ ಕಲ್ಯಾಣ್, ನಟ ವೈಷ್ಣವ ತೇಜ್, ಅಲ್ಲು ಅರವಿಂದ್ ಮತ್ತು ಇತರ ಕುಟುಂಬಸ್ಥರು ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. (ಏಜೆನ್ಸೀಸ್​)

    ನಟ ಧರಮ್ ತೇಜ್​ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್​ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

    VIDEO| ಅಪಘಾತದಲ್ಲಿ ನಟ ಧರಮ್​ ತೇಜ್​ ಸ್ಥಿತಿ ಗಂಭೀರ: ಬೈಕ್​ ಸ್ಕಿಡ್​ ಆದ ಭಯಾನಕ ವಿಡಿಯೋ ವೈರಲ್​..!

    ಭೀಕರ ಅಪಘಾತದಿಂದ ನಟ ಸಾಯಿ ಧರಮ್​ ತೇಜ್ ಬಚಾವ್​ ಆಗಿದ್ಹೇಗೆ? ಅದೊಂದಿಲ್ಲದಿದ್ದರೆ ಬದುಕುತ್ತಿರಲಿಲ್ಲವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts