ಹೈದರಾಬಾದ್: ಖ್ಯಾತ ತೆಲಗು ನಟ ಸಾಯಿ ಧರಮ್ ತೇಜ್ ಅವರು ಹೈದರಾಬಾದ್ನ ಮಾದಾಪುರದ ಬಳಿ ಅಪಘಾತಕ್ಕಿಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ (ಸೆ.10) ಸಂಜೆ ಈ ಘಟನೆ ನಡೆದಿದೆ. ಭೀಕರ ಅಪಘಾತವಾದರೂ ಪ್ರಾಣಕ್ಕೆ ಯಾವುದೇ ಕುತ್ತಾಗಿಲ್ಲ ಎಂದು ವೈದ್ಯರು ಹೆಲ್ತ್ ಬುಲೆಟಿನ್ನಲ್ಲಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಧರಮ್ ತೇಜ್ ಹೆಲ್ಮೆಟ್ ಧರಿಸಿದ್ದರಿಂದ ಬದುಕುಳಿದಿದ್ದಾರೆಂದು ತಿಳಿಸಿದ್ದಾರೆ.
ಇದರ ನಡುವೆ ಸಾಯಿ ಧರಮ್ ತೇಜ್ ಅವರ ಅಪಘಾತದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದಕ್ಕೆ ಸಂಬಂಧಿ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ಬೈಕ್ ಇದ್ದಕ್ಕಿದ್ದಂತೆ ಸ್ಕಿಡ್ ಆಗುವ ದೃಶ್ಯ ಅದರಲ್ಲಿದೆ. ಪಕ್ಕದಲ್ಲೇ ಆಟೋ ಒಂದು ಹಾದುಹೋಗಿದ್ದು, ಸ್ವಲ್ಪದರಲ್ಲೇ ಅದಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿದೆ.
ಈ ಘಟನೆ ದುರ್ಗಂ ಪಾಂಡ್ ಏರಿಯಾದಲ್ಲಿ ನಡೆದಿದೆ. ನಿನ್ನೆ ಗಣೇಶ ಹಬ್ಬವಾದ್ದರಿಂದ ಟ್ರಾಫಿಕ್ ಇರಲಿಲ್ಲ. ರಸ್ತೆಗಳು ಖಾಲಿಯಿದ್ದದ್ದರಿಂದ ಧರಮ್ ತೇಜ್ ವೇಗವಾಗಿ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹೈದರಾಬಾದ್ ಪೊಲೀಸರು, ಹೆಲ್ಮೆಟ್ ಧರಿಸಿದ್ದರಿಂದ ಧರಮ್ ತೇಜ್ಗೆ ಹೆಚ್ಚಿನ ಅನಾಹುತ ಆಗಿಲ್ಲ. ಒಂದು ವೇಳೆ ಹಲ್ಮೆಟ್ ಇರದೇ ಹೋಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇತ್ತು. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ತಕ್ಷಣ ವಾಹನವನ್ನು ನಿಯಂತ್ರಿಸಲಾಗದೇ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಸದ್ಯ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಹೇಗೆ ಅಪಘಾತ ಸಂಭವಿಸಿತು ಎಂಬುದನ್ನು ಪರಿಶೀಲನೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಮರಳು ಇದ್ದಿದ್ದರಿಂದ ಬೈಕ್ ಸ್ಕಿಡ್ ಆಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಪೊಲೀಸರ ಪ್ರಕಾರ ವೇಗವನ್ನು ನಿಯಂತ್ರಿಸಲಾಗದೆ ಅಪಘಾತ ಸಂಭವಿಸಿದೆ ಎನ್ನುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
CCTV Footage #SaiDharamTej pic.twitter.com/Tnvq90vSro
— 𝐓𝐞𝐚𝐦 𝐕𝐚𝐢𝐬𝐡𝐧𝐚𝐯𝐓𝐞𝐣 ™ (@TeamVaishnavTej) September 10, 2021
ಅಪಘಾತದಲ್ಲಿ ತೀವ್ರ ಗಾಯಗಳು ಆಗಿರುವುದರಿಂದ ಧರಮ್ ತೇಜ್ ಅವರನ್ನು ಮೊದಲು ಮೆಡಿ ಕವರ್ ಆಸ್ಪತ್ರೆಗೆ ತೆರಳಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ ಧರಮ್ ತೇಜ್, ಮೆಗಾಸ್ಟಾರ್ ಚಿರಂಜೀವಿ ಅವರ ತಂಗಿಯ ಮಗ.
ಶುಕ್ರವಾರ ಸಂಜೆ ಧರಮ್ ತೇಜ್ ಅವರು ತನ್ನ Triumph Sports ಬೈಕ್ನಲ್ಲಿ ಜುಬ್ಲಿ ಹಿಲ್ಸ್ನಿಂದ ಗಾಚಿಬೌಲಿ ಕಡೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಧರಮ್ ತೇಜ್ ಅವರಿಗೆ ಕ್ಲಾವಿಕಲ್ ಮೂಳೆ ಮುರಿತ ಮತ್ತು ತಲೆ ಹಾಗೂ ಎದೆಗೆ ತೀವ್ರ ಗಾಯಗಳು ಆಗಿದ್ದರೂ, ಪ್ರಾಣಕ್ಕೆ ಯಾವುದೇ ಕುತ್ತು ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ನಟ ಸಾಯಿ ಅವರನ್ನು ನೋಡಲು ನಟ ಚಿರಂಜೀವಿ, ನಟ ಪವನ್ ಕಲ್ಯಾಣ್, ನಟ ವೈಷ್ಣವ ತೇಜ್, ಅಲ್ಲು ಅರವಿಂದ್ ಮತ್ತು ಇತರ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. (ಏಜೆನ್ಸೀಸ್)
ಭೀಕರ ಅಪಘಾತದಿಂದ ನಟ ಸಾಯಿ ಧರಮ್ ತೇಜ್ ಬಚಾವ್ ಆಗಿದ್ಹೇಗೆ? ಅದೊಂದಿಲ್ಲದಿದ್ದರೆ ಬದುಕುತ್ತಿರಲಿಲ್ಲವಂತೆ!
ಗಣೇಶ ಹಬ್ಬದಂದೇ ಮೆಗಾಸ್ಟಾರ್ ಕುಟುಂಬಕ್ಕೆ ಶಾಕ್: ಭೀಕರ ಅಪಘಾತದಿಂದ ನಟ ಸಾಯಿ ಧರಮ್ ತೇಜ್ ಸ್ಥಿತಿ ಗಂಭೀರ
ರಾಜ್ಯವೇ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: ಪೊಲೀಸ್ ಚಾರ್ಜ್ಶೀಟ್ನಲ್ಲಿ ಗಂಡನ ಕರಾಳ ಮುಖ ಬಯಲು!