ವಿಜಯವಾಡ: ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 13 ಮಂದಿ ಯೋಧರ ಪೈಕಿ ಆಂಧ್ರಪ್ರದೇಶದ ಲ್ಯಾನ್ಸ್ ನಾಯ್ಕ ಸಾಯಿತೇಜ್ ಕೂಡ ಒಬ್ಬರು. ಇವರ ನಿಧನ ಭಾರತೀಯ ಸೇನೆಗೆ ತುಂಬಲಾರದ ನಷ್ಟವಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿದ್ದ ಸಾಯಿತೇಜ್ ಅವರ ಸಾಧನೆ ಇತಿಹಾಸದ ಪುಟಗಳಲ್ಲಿ ಸೇರಿದ್ದು, ಅವರ ಹೆಸರನ್ನು ಅಜರಾಮರಗೊಳಿಸಲು ಇದೀಗ ಸ್ಥಳೀಯ ಆಡಳಿತ ನಿರ್ಧಾರವೊಂದನ್ನು ಮಾಡಿದೆ.
ಸಾಯಿತೇಜ್ ಅವರ ತವರು ಗ್ರಾಮಕ್ಕೆ ಅವರ ಹೆಸರನ್ನಿಡಲು ಸ್ಥಳೀಯ ನಾಯಕರು ಮತ್ತು ಅಧಿಕಾರಿಗಳು ಪ್ರಸ್ತಾಪ ಮಾಡಿದ್ದಾರೆ. ಸಮಗ್ರ ಅಧಿವೇಶನದ ಮುಂದೆ ಸ್ಥಳೀಯ ನಾಯಕರು ಪ್ರಸ್ತಾಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಂಡಲ ಪರಿಷತ್ ಅಭಿವೃದ್ಧಿ ಅಧಿಕಾರಿ (ಎಂಪಿಡಿಒ) ದಿಲೀಪ್ ಕುಮಾರ್ ನಾಯಕ್, ಚಿತ್ತೂರು ಜಿಲ್ಲೆಯ ಕುರಬಲಕೋಟ ಮಂಡಲದ ಎರ್ರಬಲ್ಲಿ ಪಂಚಾಯಿತಿಯ ಎಗುವರೆಗಡ ಹೆಸರನ್ನು ಸಾಯಿತೇಜ್ ನಗರವನ್ನಾಗಿ ಬದಲಾಯಿಸುವ ಪ್ರಸ್ತಾಪವನ್ನು ಸರ್ಕಾರಕ್ಕೆ ಮಂಗಳವಾರ ಕಳುಹಿಸಲಾಗಿದೆ. ಹಲವು ಸ್ಥಳೀಯ ನಾಯಕರು ಕೂಡ ಇದಕ್ಕೆ ಸಮ್ಮತಿಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಡಿಗ್ರಿ ಮುಗಿಸಿದ ಬೆನ್ನಲ್ಲೇ 2012ರಲ್ಲಿ ಗುಂಟೂರಿನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಭಾಗವಹಿಸಿದ್ದ ಸಾಯಿತೇಜ್ ಆಯ್ಕೆಯಾದರು. ಇದಾದ ಬಳಿಕ ಪ್ಯಾರಾ ಕಮ್ಯಾಂಡೋ ಪರೀಕ್ಷೆಯನ್ನು ಸಹ ಪಾಸ್ ಮಾಡಿದ ಅವರು 11ನೇ ಪ್ಯಾರಾ ಲ್ಯಾನ್ಸ್ ನಾಯಕರಾದರು. ಸೇನಾ ಮುಖ್ಯಸ್ಥರ ಸಿಬ್ಬಂದಿ ರಚನೆಯಾದಾಗ ಬಿಪಿನ್ ರಾವತ್ ಅವರ ವೈಯಕ್ತಿಕ ರಕ್ಷಣಾಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ.
ಡಿ. 8ರಂದು ಬಿಪಿನ್ ರಾವತ್ ಜತೆ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಹವಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್ ಪತನಗೊಂಡು ಬಿಪಿನ್ ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)
ಹುತಾತ್ಮ ಸಾಯಿತೇಜ ಸಾಮಾನ್ಯ ಯೋಧರಲ್ಲ: ಮಾಜಿ ಸೇನಾಧಿಕಾರಿ ಹೇಳಿದ್ದನ್ನು ಕೇಳಿದ್ರೆ ಮೈನವಿರೇಳುತ್ತೆ
ಮಗಳೇ ನೀನಿನ್ನೂ ಚಿಕ್ಕವಳು, ಬೇಡ ಕಣವ್ವಾ ಅಂದ್ರೂ ಕೇಳಲಿಲ್ಲ… ಬಾಳಿ ಬದುಕಬೇಕಿದ್ದವರ ಬಾಳಲ್ಲಿ ನಡೆಯಿತು ಘೋರ ದುರಂತ
ಮಾಡೆಲ್ಗಳಿಬ್ಬರ ದುರಂತ ಸಾವು: ಸ್ಫೋಟಕ ಆರೋಪ ಮಾಡಿದ ಸಂಸದ ಸುರೇಶ್ ಗೋಪಿ