ನವದೆಹಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಾಮಾಜಿಕ ಹೋರಾಟಗಾರ್ತಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸೂಫ್ ಜೈ ಪ್ರತಿಕ್ರಿಯಿಸಿದ್ದು, ಹಿಜಾಬ್ನಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರಾಕರಿಸುತ್ತಿರುವುದು ಆತಂಕಕಾರಿ ಎಂದು ಹೇಳಿದ್ದಾರೆ.
ಉಡುಪಿಯ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಲಿಲ್ಲ ಎಂಬ ಆರೋಪದ ನಂತರ ಆ ಆರು ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲೇರಿದ ಬಳಿಕ ಆರಂಭವಾದ ಹಿಜಾಬ್ ವಿವಾದವು ಇದೀಗ ರಾಜ್ಯಾದ್ಯಂತ ವ್ಯಾಪಿಸಿದೆ. ಅಲ್ಲದೆ, ಪುದಚೇರಿ ಮತ್ತು ಮಧ್ಯಪ್ರದೇಶಗಳಲ್ಲಿಯೂ ಈ ವಿವಾದ ಕೇಳಿಬರುತ್ತಿದೆ.
ಹಿಜಾಬ್ ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲೂ ಧರಿಸಿ ಬೀದಿಗಿಳಿರುವುದು ಕರ್ನಾಟಕದಲ್ಲಿ ಬಿಗುವಿನ ವಾತಾವರಣವನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೋಮು ಸಂಘರ್ಷಕ್ಕೆ ಕಡಿವಾಣ ಹಾಕಲು ಶಾಲಾ-ಕಾಲೇಜುಗಳಿಗೆ ಮೂರು ದಿನ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಕೋಮು ದಳ್ಳುರಿಯ ಕಿಚ್ಚು ಮಾತ್ರ ಆರಿಲ್ಲ.
ಈ ಆತಂಕಕಾರಿ ಬೆಳವಣಿಗೆಯ ಬಗ್ಗೆ ಟ್ವೀಟ್ ಮೂಲಕ ಮಲಾಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸಲು ನಿರಾಕರಿಸುತ್ತಿರುವುದು ನಿಜಕ್ಕೂ ಆತಂಕಕಾರಿ. ಹೆಚ್ಚು ಧರಿಸಲಿ ಅಥವಾ ಧರಿಸದೇ ಇರಲಿ ಆದರೆ, ಹೆಣ್ಣು ಮಕ್ಕಳನ್ನು ವಿಷಯೀಕರಣಗೊಳಿಸುವ ಕೆಲಸ ಮುಂದುವರಿದಿದೆ. ಭಾರತದ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕೆಂದಿದ್ದಾರೆ.
2012ರಲ್ಲಿ ಆಫ್ಘನ್ ಹೆಣ್ಣುಮಕ್ಕಳ ಪರವಾಗಿ ನಿಂತು, ತಾಲಿಬಾನಿಗಳ ಷರಿಯಾ ಕಾನೂನು ಹೆಸರಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದು ಮಲಾಲ. ಇದೇ ಕಾರಣಕ್ಕೆ 2012ರ ಅಕ್ಟೋಬರ್ನಲ್ಲಿ ತಾಲಿಬಾನ್ ವಕ್ತಾರ ಎಹ್ಸಾನುಲ್ಲಾ ಎಹ್ಸಾನ್, ಮಲಾಲ ಇದ್ದ ಶಾಲಾ ಮಕ್ಕಳ ಬಸ್ಗೆ ಹತ್ತಿದ್ದ. ಸೀದಾ ಮಲಾಲಳ ತಲೆಗೆ ಗುಂಡಿಕ್ಕಿ ಪರಾರಿಯಾಗಿದ್ದ.
ಮಲಾಲ ಮೇಲೆ ಗುಂಡು ಹಾರಿಸಿದವನಿಗೆ ಜೈಲು ಶಿಕ್ಷೆಯಾಗಿತ್ತು. ಆದರೆ ಜೈಲಿನಿಂದ ಬಿಡುಗಡೆಯಾಗುತ್ತಲೇ ಭಯೋತ್ಪಾದಕನಿಂದ ಮಲಾಲಾಗೆ ಮತ್ತೆ ಬೆದರಿಕೆ ಹಾಕಲಾಗಿತ್ತು. ಮಲಾಲಳ ಮುಖದ ನರಗಳು, ಕಿವಿಗೂಡು, ಹಲ್ಲಿನ ದವಡೆಗಳು ಸೀಳಿ ತುಂಡಾಗಿ ಗಂಭೀರ ಸ್ಥಿತಿಯಲ್ಲಿ ನರಳಾಡಿದ್ದಳು. ಆಕೆಗೆ ಮೊದಲು ಪಾಕಿಸ್ತಾನ ಪೇಶಾವರದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಆಕೆ ಸರಿಯಾಗಿ ಚೇತರಿಸಿಕೊಂಡಿರಲಿಲ್ಲ. ನಂತರ ಬರ್ಮಿಂಗ್ಹ್ಯಾಮ್ನ ಕ್ವೀನ್ ಎಲಿಜಬತ್ ಆಸ್ಪತ್ರೆಯಲ್ಲಿ ನೆರವಿನ ಹಸ್ತವಾಗಿ ಆರು ಬಾರಿ ಉಚಿತ ಶಸ್ತ್ರಚಿಕಿತ್ಸೆ ನಡೆಸಿ, ಬದುಕಿಸಲಾಗಿದೆ. (ಏಜೆನ್ಸೀಸ್)
“College is forcing us to choose between studies and the hijab”.
Refusing to let girls go to school in their hijabs is horrifying. Objectification of women persists — for wearing less or more. Indian leaders must stop the marginalisation of Muslim women. https://t.co/UGfuLWAR8I
— Malala (@Malala) February 8, 2022
ಉದ್ಯೋಗದ ಆಮಿಷವೊಡ್ಡಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ
ಇಂದು ವಿಂಡೀಸ್ ವಿರುದ್ಧ 2ನೇ ಏಕದಿನ, ಸರಣಿ ಗೆಲುವಿಗೆ ಸಜ್ಜಾದ ಟೀಮ್ ಇಂಡಿಯಾ