ಬೆಂಗಳೂರು: ಜೇಮ್ಸ್ ಚಿತ್ರವು ಕನ್ನಡಿಗರ ಪಾಲಿಗೆ ಕೇವಲ ಒಂದು ಚಿತ್ರವಲ್ಲ, ಅದೊಂದು ಭಾವನೆ. ಅಕಾಲಿಕವಾಗಿ ಅಗಲಿದ ನಟ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ. ಹೀಗಾಗಿ ಜೇಮ್ಸ್ ಜತೆಗೆ ಪ್ರತಿಯೊಬ್ಬ ಕನ್ನಡಿಗನು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾನೆ. ಈ ಕಾರಣದಿಂದಲೇ ಜೇಮ್ಸ್ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ, ಇದೀಗ ಈ ಚಿತ್ರಕ್ಕೆ ಪರಭಾಷ ಸಿನಿಮಾಗಳ ಕಂಟಕ ಶುರುವಾಗಿದೆ.
ಚಿತ್ರಮಂದಿರದಿಂದ ಜೇಮ್ಸ್ ಚಿತ್ರ ಎತ್ತಂಗಡಿ ಮಾಡಲು ಸಂಚು ರೂಪಿಸಲಾಗಿದೆ. ಥಿಯೇಟರ್ ಹೌಸ್ಫುಲ್ ಆಗ್ತಿದ್ರೂ, ಥಿಯೇಟರ್ನಿಂದ ಜೇಮ್ಸ್ ತೆಗೆದುಹಾಕಲು ಹುನ್ನಾರ ನಡೆಯುತ್ತಿದೆ. ಎರಡೇ ವಾರಕ್ಕೆ ಚಿತ್ರಮಂದಿರದಿಂದ ಜೇಮ್ಸ್ ತೆರವು ಮಾಡಲು ಕಾಣದ ಕೈಗಳು ಯತ್ನಿಸುತ್ತಿದ್ದು, ಅವರಿಗೆ ಸೆಡ್ಡು ಹೊಡೆದು ಜೇಮ್ಸ್ ಉಳಿಸಿಕೊಳ್ಳಲು ಕನ್ನಡಿಗರು ಸಿಡಿದೆದಿದ್ದಾರೆ. ಜೇಮ್ಸ್ ತಂಟೆಗೆ ಬಂದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಇದರ ನಡುವೆ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಇಂದು ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 11.30 ಕ್ಕೆ ಬೃಹತ್ ಪ್ರತಿಭಟನೆ ನಡೆಯಲಿದೆ.
ಜೇಮ್ಸ್ ಸಿನಿಮಾ ಉಳಿಸಿಕೊಳ್ಳೋದು ನಮ್ಮ ಕರ್ತವ್ಯ ಉಳಿಸಿಕೊಳ್ತೀವಿ. ಚಿತ್ರಮಂದಿರದ ಮಾಲೀಕರ ಜತೆ ಮಾತನಾಡ್ತೀವಿ. ಸಿಎಂ ಕೂಡ ಕರೆ ಮಾಡಿ ಜೇಮ್ಸ್ ಸಿನಿಮಾಗೆ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂದಿದ್ದಾರೆ. ಸಿಎಂ ಸೂಚನೆಯ ಮೇರೆಗೆ ನಾವೀಗಾಗ್ಲೇ ಚಿತ್ರಮಂದಿರದ ಮಾಲೀಕರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ರಿಲೀಸ್ ಆಗಿರೋ ಎಲ್ಲಾ ಚಿತ್ರಮಂದಿರದಲ್ಲೂ ಜೇಮ್ಸ್ನ ಉಳಿಸಿ ಕೊಳ್ಳಲು ಆಗಲ್ಲ. ಯಾಕಂದ್ರೆ, ಕೆಲವು ಚಿತ್ರಮಂದಿರಗಳಲ್ಲಿ ಒಂದು ವಾರದ ಮಟ್ಟಿಗೆ ಅಗ್ರಿಮೆಂಟ್ ಹಾಕಿಕೊಂಡಿದೆ ಚಿತ್ರತಂಡ. ಜತೆಗೆ ಕೆಲವು ಥಿಯೇಟರ್ನಲ್ಲಿ ಕಲೆಕ್ಷನ್ ಕಡಿಮೆ ಆಗಿದೆ. ಅಂತಹ ಥಿಯೇಟರ್ಗಳಲ್ಲಿ ಅನಿವಾರ್ಯವಾಗಿ ಸಿನಿಮಾ ತೆರವು ಮಾಡ್ತಾರೆ. ಎಲ್ಲೆಲ್ಲಿ ಕಲೆಕ್ಷನ್ ಚೆನ್ನಾಗಿದೆಯೋ ಅಲ್ಲೆಲ್ಲ ಜೇಮ್ಸ್ ಸಿನಿಮಾ ಎತ್ತಂಗಡಿ ಮಾಡದಂತೆ ಸೂಚನೆ ನೀಡ್ತೇವೆ ಎಂದು ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕ್ಕರ್ ದಿಗ್ವಿಜಯ ನ್ಯೂಸ್ಗೆ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)
ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಟ್ವೀಟ್ ಮಾಡಿದ ಐಎಎಸ್ ಅಧಿಕಾರಿಗೆ ಶಾಕ್ ಕೊಟ್ಟ ಸರ್ಕಾರ!
ಪತ್ನಿ ಜತೆ ಬಲವಂತವೂ ಅತ್ಯಾಚಾರ; ಹೈಕೋರ್ಟ್ ಏಕಸದಸ್ಯ ಪೀಠದ ಮಹತ್ವದ ತೀರ್ಪು