ಮಂಡ್ಯ: ಪ್ರೀತಿ ನಿರಾಕರಿಸಿ, ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಪಾಗಲ್ ಪ್ರೇಮಿಯನ್ನು ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಸಕ್ಕರೆ ನಾಡು ಮಂಡ್ಯದ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿನಿ ವೈ.ಯರಹಳ್ಳಿ ಗ್ರಾಮದ ನಿವಾಸಿ. ಪ್ಯಾರಾ ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಸಂಪತ್ ಕುಮಾರ್ ಎಂಬಾತ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ.
ಸಂತ್ರಸ್ತೆ ಮತ್ತು ಸಂಪತ್ ಕುಮಾರ್ ಇಬ್ಬರು ಒಂದೇ ಗ್ರಾಮದ ನಿವಾಸಿಗಳು. ಎರಡು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಯ ವಿಚಾರ ತಿಳಿದಾಗ ಸಂತ್ರಸ್ತೆ ತಂದೆ ಪರಮೇಶ್, ಮಗಳಿಗೆ ಬುದ್ಧಿಮಾತು ಹೇಳಿದ್ದರು. ಪ್ರೀತಿ-ಪ್ರೇಮ ಬಿಟ್ಟು ಓದಿನ ಕಡೆ ಗಮನ ನೀಡುವಂತೆ ಸಲಹೆ ನೀಡಿದ್ದರು.
ತಂದೆ ಬುದ್ಧಿಮಾತು ಹೇಳಿದ ಬಳಿಕ ಸಂತ್ರಸ್ತೆ, ಸಂಪತ್ ಕುಮಾರ್ ಜತೆ ಅಂತರ ಕಾಯ್ದುಕೊಂಡಿದ್ದಳು. ಆದರೆ, ಸಂಪತ್ ಪ್ರೀತಿಸುವಂತೆ ಪದೇ ಪದೇ ಆಕೆಯನ್ನು ಪೀಡಿಸುತ್ತಿದ್ದ. ಮೊನ್ನೆಯಷ್ಟೆ ಸಂತ್ರಸ್ತೆ ಮನೆಗೆ ಹೋಗಿ ಮದುವೆ ಮಾಡಿಕೊಂಡುವಂತೆ ಗಲಾಟೆ ಸಹ ಮಾಡಿದ್ದ. ಮದುವೆ ಮಾಡಿಕೊಡದಿದ್ರೆ ಇಬ್ಬರು ಜತೆಯಲ್ಲಿರುವ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇಷ್ಟೆಲ್ಲ ಆದರೂ ಕೂಡ ಸಂತ್ರಸ್ತೆ ತಂದೆ ಸಂಪತ್ಗೆ ಬೈದು ಬುದ್ಧಿ ಮಾತು ಹೇಳಿ ಕಳುಹಿಸಿದ್ದರು.
ಗುರುವಾರ ಬೆಳಗ್ಗೆಯಿಂದಲೂ ಕಾಲೇಜು ಬಳಿಯೇ ಹೊಂಚು ಹಾಕಿದ್ದ ಸಂಪತ್, ಸಂಜೆ ಕಾಲೇಜಿನಿಂದ ಸಂತ್ರಸ್ತೆ, ಹೊರಗೆ ಬರುತ್ತಿದ್ದಂತೆ ಜತೆಯಲ್ಲೇ ತಂದಿದ್ದ ರೀಪೀಸ್ ಪಟ್ಟಿಯಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಆಕೆಯ ಸ್ನೇಹಿತೆ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಇತ್ತ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ, ಸಂಪತ್ನನ್ನು ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಸಂಬಂಧ ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಕೊನೆಗೂ ಪ್ರಭಾಸ್ ಮದುವೆಗೆ ಕೂಡಿ ಬಂತು ಕಾಲ! ವಧು ಫಿಕ್ಸ್, ಈ ವರ್ಷವೇ ಅದ್ಧೂರಿ ವಿವಾಹ
ಇನ್ನೆರಡು ದಿನದಲ್ಲಿ ಈ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಮತ್ತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ