ನ್ಯೂಯಾರ್ಕ್: ಇಲ್ಲಿನ ಬ್ರೂಕ್ಲಿನ್ ಸಬ್ವೇ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 17 ಮಂದಿ ಗಂಭೀರ ಗಾಯಗೊಂಡಿರುವುದಾಗಿ ಅಮೆರಿಕದ ಕಾನೂನು ನಿರ್ದೇಶನಾಲಯ ತಿಳಿಸಿದೆ. ಗಾಯಾಳುಗಳನ್ನು ಸಮೀಪದ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಒಂಟಿ ತೋಳದ ದಾಳಿ (ಒಬ್ಬನೇ ವ್ಯಕ್ತಿ ನಡೆಸಿದ ಕೃತ್ಯ) ಎಂದು ಮಾಹಿತಿ ನೀಡಿರುವ ಅಮೆರಿಕ ಪೊಲೀಸರು ಉಗ್ರ ಕೃತ್ಯವನ್ನು ತಳ್ಳಿಹಾಕಿದ್ದಾರೆ.
ಗುಂಡಿನ ಮಳೆಗೆರದ ವ್ಯಕ್ತಿಯ ಎತ್ತರ ಅಂದಾಜು 5 ಅಡಿ 5 ಇಂಚು ಎತ್ತರ ಹಾಗೂ 180 ಪೌಂಡ್ ತೂಕವಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಒಂಟಿಯಾಗಿ ಸಬ್ವೇ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಆರೋಪಿ ಗುಂಡಿನ ದಾಳಿ ನಡೆಸಿದ್ದಾನೆ. ಈ ಕೃತ್ಯಕ್ಕೆ ಪ್ರಚೋದನೆ ಏನು ಎಂಬುದರ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ಅದಕ್ಕೂ ಮುನ್ನ ದಾಳಿ ಮಾಡಿದ ಗನ್ ಮ್ಯಾನ್, ತನಿಖಾಧಿಕಾರಿಗಳ ಮೊದಲ ಆದ್ಯತೆಯಾಗಿದೆ.
ಶಂಕಿತ ಗನ್ ಮ್ಯಾನ್ ಕಟ್ಟಡ ನಿರ್ಮಾಣ ಕಾರ್ಮಿಕರು ಅಥವಾ ರಸ್ತೆ ದುರಸ್ಥಿ ಹಾಗೂ ಸಂಚಾರಿ ಪೊಲೀಸರು ಕೆಲವೊಮ್ಮೆ ಧರಿಸುವ ಕಿತ್ತಳೆ ಬಣ್ಣದ ನಡುವಂಗಿಯ ಜತೆಗೆ ಗ್ಯಾಸ್ ಮಾಸ್ಕ್ ಧರಿಸಿದ್ದ ಎಂದು ತಿಳಿದುಬಂದಿದೆ. ಆತನಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕಾಗೋಷ್ಠಿ ನಡೆಸಿದ ನ್ಯೂಯಾರ್ಕ್ ಪೊಲೀಸ್ ಇಲಾಖೆ, ಬ್ರೂಕ್ಲಿನ್ ಗುಂಡಿನ ದಾಳಿಯ ಹಿಂದೆ “ಭಯೋತ್ಪಾದನೆಯ ಕೃತ್ಯ” ಇದೆಯಾ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಅದೃಷ್ಟವಶಾತ್ ಈ ಕೃತ್ಯದ ವೇಳೆ ಯಾವುದೇ “ಮಾರಣಾಂತಿಕ ಗಾಯಗಳು” ವರದಿಯಾಗಿಲ್ಲ ಎಂದು ತಿಳಿಸಿದೆ.
ಇನ್ನು ಘಟನೆ ಸಂಬಂಧಿಸಿದ ಕೆಲವೊಂದು ದೃಶ್ಯಗಳು ಲಭ್ಯವಾಗಿದ್ದು, ನೋಡಲು ತುಂಬಾ ಭಯಾನಕವಾಗಿವೆ. ರಕ್ತ ಮಡುವಿನಲ್ಲಿ ಒದ್ದಾಡುತ್ತಾ ಗಾಯಾಳುಗಳು ನೆಲದ ಮೇಲೆ ಬಿದ್ದಿರುವ ಭೀಭತ್ಸ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಮುಂಜಾನೆ ವೇಳೆಯೇ ಈ ಘಟನೆ ಸಂಭವಿಸಿದೆ.
25ನೇ ಸೇಂಟ್ ನಿಲ್ದಾಣದಿಂದ ಪ್ರಾರಂಭವಾಗುವ ದಕ್ಷಿಣ ಭಾಗದ ಆರ್ ರೈಲಿನಲ್ಲಿ ದಾಳಿ ಸಂಭವಿಸಿದೆ. ಬಾಗಿಲು ಮುಚ್ಚುತ್ತಿದ್ದಂತೆಯೇ ಶಂಕಿತ ಉಗ್ರ ಹೊಗೆ ಬಾಂಬ್ ಎಸೆದು ಮನಬಂದತೆ ಗುಂಡು ಹಾರಿಸಿದ್ದಾನೆ. ಬಳಿಕ ಸಂತ್ರಸ್ತರು ನಂತರ 36 ನೇ ಸೇಂಟ್ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದಾರೆ. ಈ ವೇಳೆ ಶಂಕಿತನು ಕೂಡ ಪರಾರಿಯಾಗಿದ್ದಾನೆ.
ಗುಂಡಿನ ದಾಳಿಯ ಬಗ್ಗೆ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಶ್ವೇತಭವನದ ಹಿರಿಯ ಸಿಬ್ಬಂದಿ, ಮೇಯರ್ ಆಡಮ್ಸ್ ಮತ್ತು ಪೊಲೀಸ್ ಕಮಿಷನರ್ ಸೆವೆಲ್ ಅವರೊಂದಿಗೆ ಮಾತನಾಡಿದ್ದು, ಅಗತ್ಯವಿರುವ ಸಹಾಯವನ್ನು ನೀಡಲು ಸಂಪರ್ಕದಲ್ಲಿದ್ದಾರೆ ಎಂದು ಅವರು ಜೆನ್ ಪಾಕ್ಸಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ಲವರ್ ಜತೆ ನಿರ್ಜನ ಪ್ರದೇಶಕ್ಕೆ ತೆರಳಿದ ಹುಡುಗಿಗೆ ಕಾದಿತ್ತು ಶಾಕ್!
ಸಂತೋಷ್ ಪಾಟೀಲ್ ಸಾವು ಪ್ರಕರಣ: ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲು, ದೂರಿನಲ್ಲಿ ಏನಿದೆ?
ಸಾಲದ ಸುಳಿಯಲ್ಲಿ ಶ್ರೀಲಂಕಾ; ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ ದ್ವೀಪರಾಷ್ಟ್ರ