ನವದೆಹಲಿ: ಪ್ರಧಾನಿ ಮೋದಿ ಅವರಿಂದು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಈ ದಿನ (ಸೆ.17) ಮೋದಿ ಅವರು ತುಂಬಾ ಬಿಜಿಯಾಗಿರಲಿದ್ದಾರೆ. ಇಂದು ಒಂದೇ ದಿನ ವನ್ಯಜೀವಿ ಮತ್ತು ಪರಿಸರ, ಮಹಿಳಾ ಸಬಲೀಕರಣ, ಕೌಶಲ್ಯ ಮತ್ತು ಯುವ ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಯ ಮೂಲಸೌಕರ್ಯ ಸಂಬಂಧ ನಾಲ್ಕು ಪ್ರತ್ಯೇಕ ಕಾರ್ಯಕ್ರಮಗಳನ್ನು ಉದ್ದೇಶಿಸಿದ ಪ್ರಧಾನಿ ಮಾತನಾಡಲಿದ್ದಾರೆ.
ನಮೀಬಿಯಾದಿಂದ ಕರೆತರಲಾದ 8 ಚೀತಾಗಳನ್ನು ಇಂದು ಬೆಳಗ್ಗೆ ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಲಿದ್ದಾರೆ. ಬಳಿಕ ಎಂಟು ಚೀತಾಗಳ ಆಗಮನದ ಕುರಿತು ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಇದನ್ನು ನಮಿಬಿಯಾದಲ್ಲಿರುವ ಸವನ್ನಾ ಪ್ರದೇಶದಿಂದ ಕುನ್ನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದೆ.
ಇದಾದ ಬಳಿಕ ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ವಿಶ್ವಕರ್ಮ ಜಯಂತಿಯಂದು ಮೊಟ್ಟಮೊದಲ ಬಾರಿಗೆ ದೀಕ್ಷಾಂತ್ ಸಮಾರೋಹದಲ್ಲಿ ಐಟಿಐ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 40 ಲಕ್ಷ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಇಂದು ಸಂಜೆ ಪ್ರಧಾನಿ ಮೋದಿ ಅವರು ಪ್ರಮುಖ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಉದ್ಘಾಟಿಸುತ್ತಾರೆ. ಒಟ್ಟು ನಾಲ್ಕು ಕಾರ್ಯಕ್ರಮಗಳಲ್ಲಿ ಒಂದು ಕಾರ್ಯಕ್ರಮ ಮಾತ್ರ ಬಹಳ ವಿಶಿಷ್ಟವಾಗಿದೆ. ಏಕೆಂದರೆ, ಹಲವಾರು ವರ್ಷಗಳ ಹಿಂದೆ ಚೀತಾಗಳು ಅಳಿದುಹೋದ ನಂತರ ಭಾರತೀಯ ವನ್ಯಜೀವಿಗಳಿಗೆ ಚೀತಾಗಳ ಮರುಪರಿಚಯವನ್ನು ಪ್ರಧಾನಿ ಮೋದಿ ಅವರ ಜನ್ಮದಿನದಂದು ಮಾಡಲಾಗುತ್ತಿದೆ. ಸುಮಾರು 70 ವರ್ಷಗಳ ಬಳಿಕ ಚೀತಾಗಳು ಭಾರತಕ್ಕೆ ಮರಳಿ ಬರುತ್ತಿವೆ.
ಪ್ರಧಾನಿ ಮೋದಿ ಅವರು ನವದೆಹಲಿಯಿಂದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9.20 ರ ಸುಮಾರಿಗೆ ಆಗಮಿಸುತ್ತಾರೆ. ಬಳಿಕ ಸುಮಾರು 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್ಪಿ) ತೆರಳಲಿದ್ದಾರೆ. ಅಲ್ಲಿ ಅವರು 10.45 ರ ಸುಮಾರಿಗೆ ಚೀತಾಗಳನ್ನು ಕ್ವಾರಂಟೈನ್ ಆವರಣಗಳಿಗೆ ಬಿಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿಯಿಂದ ವಿವಿಧತೆಯಲ್ಲಿ ಏಕತೆ ಉತ್ಸವ
ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮದಿನದ (ಸೆ. 17) ಅಂಗವಾಗಿ ಬಿಜೆಪಿ ದೇಶಾದ್ಯಂತ ಎರಡು ವಾರಗಳ ‘ವಿವಿಧತೆಯಲ್ಲಿ ಏಕತೆ’ ಉತ್ಸವ ಮತ್ತು ಸೇವಾ ಅಭಿಯಾನವನ್ನು ಹಮ್ಮಿಕೊಂಡಿದೆ. ಬಡವರು ಮತ್ತು ಸಮಾಜದಲ್ಲಿ ಅವಕಾಶ ವಂಚಿತ ವರ್ಗಗಳನ್ನು ಭೇಟಿಯಾಗಿ ಅವರ ಜೀವನಮಟ್ಟ ಸುಧಾರಿಸಲು ನೆರವು ನೀಡುವುದು ಸೇವಾ ಅಭಿಯಾನದ ಉದ್ದೇಶ. ಈ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆಯಲಿದ್ದು, ಅ.2ರ ಗಾಂಧಿ ಜಯಂತಿಯಂದು ಅಂತ್ಯವಾಗಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದರೊಟ್ಟಿಗೆ ಬಿಜೆಪಿ ಕಾರ್ಯಕರ್ತರು ‘ವಿವಿಧತೆಯಲ್ಲಿ ಏಕತೆ’ಯ ಉತ್ಸವವನ್ನು ಆಚರಿಸಲಿದ್ದಾರೆ. ‘ಏಕ ಭಾರತ, ಶ್ರೇಷ್ಠ ಭಾರತ’ ಸಂದೇಶವನ್ನು ಪ್ರತಿ ಜಿಲ್ಲೆಯಲ್ಲೂ ಜನರಿಗೆ ತಲುಪಿಸಲಿದ್ದಾರೆ. ತಮ್ಮ ರಾಜ್ಯಕ್ಕಿಂತ ಭಿನ್ನ ಸಂಸ್ಕೃತಿ, ಭಾಷೆಯನ್ನು ಗುರುತಿಸುವ ಕಾರ್ಯಕರ್ತರು, ಒಂದು ದಿನದ ಮಟ್ಟಿಗೆ ಆ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು. ಉತ್ಸವ ಮತ್ತು ಅಭಿಯಾನದ ಭಾಗವಾಗಿ ಸಸಿ ನೆಡುವಿಕೆ, ಸ್ವಚ್ಛತಾ ಕಾರ್ಯಕ್ರಮ, ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಅಂಗವಿಕಲರಿಗೆ ಅಗತ್ಯ ಸಾಧನ-ಸಲಕರಣೆ ವಿತರಣೆ, ಖಾದಿ ವಸ್ತ್ರ ಬಳಕೆಗೆ ಉತ್ತೇಜನ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸ್ಥಳೀಯ ಮಟ್ಟದಲ್ಲಿ ಸಂಘಟಿಸಲಾಗುತ್ತದೆ ಎಂದು ಅರುಣ್ ಸಿಂಗ್ ಹೇಳಿದರು. (ಏಜೆನ್ಸೀಸ್)
ಬ್ರೇಕ್ ಇನ್ಸ್ಪೆಕ್ಟರ್ಗಳಿಗೆ ಕೊನೆಗೂ ಮುಂಬಡ್ತಿ ಭಾಗ್ಯ; 15 ವರ್ಷಗಳ ಕಾನೂನು ಹೋರಾಟಕ್ಕೆ ಜಯ
ಮೃತ ವೈದ್ಯರ ಹೆಸರಲ್ಲಿ ಕ್ಲಿನಿಕ್!; ವಿದೇಶಕ್ಕೆ ಹೋದವರ ಹೆಸರೂ ದುರ್ಬಳಕೆ, ರಿಜಿಸ್ಟ್ರಾರ್ರಿಂದಲೇ ಅಕ್ರಮ..