ಚಂಡೀಗಢ: ಪಂಜಾಬ್ನ ಖ್ಯಾತ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆ ಮಾಡಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಗ್ಯಾಂಗ್ಸ್ಟರ್ ದೀಪಕ್ ಟಿನು, ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಘಟನೆ ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಮೊತ್ತೊಂದು ಪ್ರಕರಣದಡಿಯಲ್ಲಿ ಪ್ರೊಡಕ್ಷನ್ ವಾರೆಂಟ್ ಪಡೆದು, ಗೋಯಿಂಡ್ವಾಲ್ ಸಾಹಿಬ್ ಜೈಲಿನಿಂದ ಮಾನ್ಸಾ ಪೊಲೀಸರು ಶನಿವಾರ ರಾತ್ರಿ ಕರೆತರುವಾಗ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಟಿನು, ಪ್ರಕರಣದ ಮುಖ್ಯ ಆರೋಪಿ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಎಂಬಾತನ ಆಪ್ತ ಸಹಾಯಕ.
ಆರೋಪಿ ಪರಾರಿಯಾಗಿರುವ ಬಗ್ಗೆ ಮಾತನಾಡಿರುವ ಬಟಿಂಡಾ ರೇಂಜ್ನ ಇನ್ಸ್ಪೆಕ್ಟರ್ ಜನರಲ್ ಮುಖ್ವಿಂದರ್ ಸಿಂಗ್, ನಾವು ಕಾರ್ಯಪ್ರವೃತ್ತರಾಗಿದ್ದೇವೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ ಏನು?
ಮೇ 29ರಂದು ಮಾನಸ ಜಿಲ್ಲೆಯ ಜವಹರ್ಕೆಯ ಗ್ರಾಮದಲ್ಲಿ ಪಂಜಾಬ್ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಮೂಸೆವಾಲಾ ಅವರು ಚಲಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಹಲವು ಸುತ್ತಿನ ಗುಂಡು ಹಾರಿಸಿ ಹತ್ಯೆ ಮಾಡಿದರು. ಇದಾದ ಬಳಿಕ ದಾಳಿಯ ಹೊಣೆಯನ್ನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೊತ್ತುಕೊಂಡಿದ್ದ. ಬಳಿಕ ಆತನನ್ನು ಬಂಧಿಸಲಾಯಿತು.
ಈ ಕೊಲೆ ಪ್ರಕರಣದಲ್ಲಿ ದಾಖಲಾಗಿರುವ ಚಾರ್ಜ್ ಶೀಟ್ನಲ್ಲಿರುವ 24 ಆರೋಪಿಗಳಲ್ಲಿ ದೀಪಕ್ ಟಿನು ಕೂಡ ಒಬ್ಬ. (ಏಜೆನ್ಸೀಸ್)
ಮೊಸಳೆ ಜಿಗಿಯುವುದನ್ನು ಎಂದಾದ್ರೂ ನೋಡಿದ್ದೀರಾ? ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ
ಭಾರತ್ ಜೋಡೋ ಯಾತ್ರೆಗೆ ನಾಳೆ ಸೋನಿಯಾ ಆಗಮನ: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಬ್ಬರ
ನಾನು ಊಟ ಮಾಡ್ಬೇಕು ಹೊರ ಹೋಗಿ: ಪ್ರಯಾಣಿಕರನ್ನು ಬಸ್ನಿಂದ ಕೆಳಗಿಳಿಸಿದ ಲೇಡಿ ಕಂಡಕ್ಟರ್