ನವದೆಹಲಿ: ಸೋಮವಾರ (ಏಪ್ರಿಲ್ 26) ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್), ಬಳಸಿದ ವಿವಾದಾತ್ಮಕ “ಕೋಡ್ ವರ್ಡ್” ತಂತ್ರದ ವಿರುದ್ಧ ಟೀಂ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಅಮಸಧಾನ ಹೊರಹಾಕಿದ್ದಾರೆ.
ಡಗೌಟ್ನಲ್ಲಿರುವ ವಿಶ್ಲೇಶಕರು ಆಟವನ್ನು ನಿರ್ದೇಶಿಸಲು ಅನುಮತಿ ಮಾಡಿಕೊಟ್ಟರೆ, ಮೈದಾನದಲ್ಲಿ ಯಾರು ಬೇಕಾದರೂ ನಾಯಕತ್ವವನ್ನು ನಿಭಾಯಿಸಬಹುದು ಎಂದು ಸೆಹ್ವಾಗ್ ಟೀಕಿಸಿದರು.
ಕೆಕೆಆರ್ ತಂಡದ ವಿಶ್ಲೇಷಕ ನ್ಯಾಥನ್ ಲೇಮನ್ ಅವರು 54 ಎಂದು ಬರೆದಿದ್ದ ಒಂದು ರಹಸ್ಯ ಫಲಕವನ್ನು ಎದುರಾಳಿ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುವ ಪಂದ್ಯದ ನಡುವೆಯೇ ಡಗೌಟ್ನಲ್ಲಿ ಹಿಡಿದುಕೊಂಡಿದ್ದರು. ಇದನ್ನು ನೋಡಿದ ಕಾಮೆಂಟೇಟರ್ಸ್ ಮತ್ತು ಕ್ರೀಡಾಭಿಮಾನಿಗಳು ಕೋರ್ಡ್ ವರ್ಡ್ ಏನಿರಬಹುದು ಎಂದು ಬಿಡಿಸುವ ಪ್ರಯತ್ನ ಮಾಡಿದಾದರೂ ಯಾರಿದಂಲೂ ಅದರ ಹಿಂದಿರುವ ಅರ್ಥ ಏನೆಂಬುದನ್ನು ತಿಳಿಯಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ಕ್ರಿಕ್ಬುಜ್ ವೆಬ್ಸೈಟ್ ಜತೆ ಮಾತನಾಡಿರುವ ಸೆಹ್ವಾಗ್, ಡಗೌಟ್ ಸಹಾಯ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಇದು ನಾಯಕನ ಪಾತ್ರವನ್ನು ಹಾಳು ಮಾಡುತ್ತದೆ ಎಂದು ಟೀಕಿಸಿದ್ದಾರೆ.
ಸೇನೆಯಲ್ಲಿ ಮಾತ್ರ ಇಂತಹ ಕೋಡ್ ವರ್ಡ್ಗಳನ್ನು ನಾವು ಬಳಸುತ್ತೇವೆ. ’54’ ಎಂಬುದು ಅವರ ಯೋಜನೆಯ ಹೆಸರು ಎಂದು ನಾನು ಭಾವಿಸುತ್ತೇನೆ, ಅದು ಒಂದು ನಿರ್ದಿಷ್ಟ ಬೌಲರ್ ಅನ್ನು ನಿರ್ದಿಷ್ಟ ಸಮಯದಲ್ಲಿ ಬೌಲಿಂಗ್ ಮಾಡುವ ಬಗ್ಗೆ ಆಗಿರಬಹುದು. ಮ್ಯಾನೇಜ್ಮೆಂಟ್ ಮತ್ತು ತರಬೇತುದಾರರು ಡಗೌಟ್ನಿಂದ ನಾಯಕನಿಗೆ ನೀಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈ ರೀತಿ ಹೊರಗಡೆಯಿಂದ ನಿರ್ದೇಶಿಸಿದರೆ, ಯಾರು ಬೇಕಾದರು ನಾಯಕರಾಗಬಹುದಲ್ಲವೇ? ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಇಯಾನ್ ಮೊರ್ಗಾನ್ ಪಾತ್ರ ಏನು ಇಲ್ಲ ಎಂಬಂತಾಗುತ್ತದೆ ಎಂದು ಜರಿದರು.
ಹೀಗಾಗಿ ಈ ರೀತಿಯ ಕೋರ್ಡ್ ವರ್ಡ್ ಉಪಯೋಗಿಸಲು ಬಿಡಬಾರದು. ಮೈದಾನದಲ್ಲಿ ಎಲ್ಲವನ್ನು ನಾಯಕನೆ ನಿರ್ಧರಿಸುತ್ತಾನೆ. ಬೇಕಿದ್ದರೆ, ಸಲಹೆ ನೀಡಬಹುದು. ಆದರೆ, ಮೈದಾನದಿಂದ ಹೊರಗಡೆ ಆಟವನ್ನು ನಿರ್ದೇಶಿಸುವುದು ಸರಿಯಲ್ಲ ಎಂಬುದು ಸೆಹ್ವಾಗ್ ಅಭಿಪ್ರಾಯವಾಗಿದೆ.
ಪಂದ್ಯದ ವಿಚಾರಕ್ಕೆ ಬಂದಾಗ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಕನ್ನಡಿಗ ಪ್ರಸಿದ್ಧ ಕೃಷ್ಣ (30ಕ್ಕೆ 3), ಪ್ಯಾಟ್ ಕಮ್ಮಿನ್ಸ್ (31ಕ್ಕೆ 2) ಹಾಗೂ ಸುನೀಲ್ ನಾರಾಯಣ್ (22ಕ್ಕೆ 2) ತ್ರಿಮೂರ್ತಿಗಳ ದಾಳಿಗೆ ನಲುಗಿ 9 ವಿಕೆಟ್ಗೆ 123 ರನ್ ಪೇರಿಸಲಷ್ಟೆ ಶಕ್ತವಾಯಿತು. ಪ್ರತಿಯಾಗಿ ಆರಂಭಿಕ ಆಘಾತದ ನಡುವೆಯೂ ಕೆಕೆಆರ್ ತಂಡ, ರಾಹುಲ್ ತ್ರಿಪಾಠಿ (41ರನ್, 32 ಎಸೆತ, 7 ಬೌಂಡರಿ) ಹಾಗೂ ನಾಯಕ ಇವೊಯಿನ್ ಮಾರ್ಗನ್ (47*ರನ್, 40 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ನಿರ್ವಹಣೆ ಫಲವಾಗಿ 16.4 ಓವರ್ಗಳಲ್ಲಿ 5 ವಿಕೆಟ್ಗೆ 126 ರನ್ಗಳಿಸಿ ಜಯದ ನಗೆ ಬೀರಿತು. (ಏಜೆನ್ಸೀಸ್)
ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ
ಚೆನ್ನೈ ವಿರುದ್ಧ ಸೋತ ಬೆನ್ನಲ್ಲೇ ಆರ್ಸಿಬಿ ಅಭಿಮಾನಗಳಿಗೆ ಮತ್ತೊಂದು ಶಾಕ್! ಈ ಇಬ್ಬರು ಆಟಗಾರರು ತಂಡದಿಂದ ಔಟ್!
ಮೊಟೆರಾದಲ್ಲಿ ಕೆಕೆಆರ್ ಜಯದ ನಗೆ; ಪಂಜಾಬ್ ಕಿಂಗ್ಸ್ ಎದುರು 5 ವಿಕೆಟ್ ಜಯ