ನವದೆಹಲಿ: ನಮೀಬಿಯಾದಿಂದ ವಿಶೇಷ ವಿಮಾನ ಮೂಲಕ ಕರೆತರಲಾದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮ ದಿನ (ಸೆ.17)ದ ವಿಶೇಷ ದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದಾರೆ. ಈ ಐತಿಹಾಸಿಕ ದಿನಕ್ಕೆ ಇಡೀ ಭಾರತೀಯರು ಸಾಕ್ಷಿಯಾಗಿದ್ದಾರೆ.
ನಮೀಬಿಯಾ ರಾಜಧಾನಿ ವಿಂಡ್ಹೋಕ್ನಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಿ747 ಜಂಬೋ ಜೆಟ್ನಿಂದ 8 ಚೀತಾಗಳನ್ನು ಕರೆತರಲಾಯಿತು. 8ರಲ್ಲಿ 5 ಚೀತಾ ಹೆಣ್ಣು ಮತ್ತು 3 ಚೀತಾ ಗಂಡು. ಭಾರತಕ್ಕೆ ಆಗಮಿಸಿದ ಈ ವಿಶೇಷ ಅತಿಥಿಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಹುಟ್ಟುಹಬ್ಬದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಅರ್ಪಿಸಿದ್ದಾರೆ. ಅವುಗಳು ನಮ್ಮ ಪರಿಸರಕ್ಕೆ ಒಗ್ಗಿಕೊಳ್ಳಲು ಅವಕಾಶ ನೀಡಬೇಕೆಂದು ಪ್ರಧಾನಿ ಮೋದಿ ಜನತೆಯ ಬಳಿ ಮನವಿ ಮಾಡಿದ್ದಾರೆ.
ಇದೀಗ ಚೀತಾಗಳನ್ನು ಕರೆತಂದ ವಿಮಾನದ ಒಳಗಿನ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟಿ ರವಿನಾ ಟಂಡನ್ ಅವರು ವಿಡಿಯೋವನ್ನು ಶೇರ್ ಮಾಡಿದ್ದು, ಜನ್ಮ ದಿನದಂದು ದೇಶಕ್ಕೆ ಸುಂದರವಾದ ಉಡುಗೊರೆ ನೀಡಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ವಿಡಿಯೋದಲ್ಲಿ ಚೀತಾಗಳನ್ನು ಇರಿಸಲಾದ ಬೋನ್ಗಳನ್ನು ಪ್ರಯಾಣಿಸುತ್ತಿರುವ ವಿಮಾನದ ಒಳಗೆ ಇಟ್ಟಿರುವುದನ್ನು ಕಾಣಬಹುದಾಗಿದೆ. ವಿಮಾನವು ಭಾರತದಲ್ಲಿ ಲ್ಯಾಂಡ್ ಆಗುವ ಸ್ವಲ್ಪ ಸಮಯದ ಮುನ್ನು ಚಿತ್ರೀಕರಿಸಲಾದ ವಿಡಿಯೋ ಎಂದು ವ್ಯಕ್ತಿಯೊಬ್ಬರು ಮಾತನಾಡಿರುವ ಆಡಿಯೋ ವಿಡಿಯೋದಲ್ಲಿದೆ.
Inside view of Boeing 747 used for bringing Cheetahs from Namibia to India . Thank you @narendramodi sir for giving US this beautiful gift on your Birthday !!!! pic.twitter.com/9lPIyitC5T
— Raveena Tandon (@TandonRaveena) September 17, 2022
ಹುಲಿಯ ಮುಖವನ್ನು ಚಿತ್ರಿಸಿದ ವಿಮಾನವು ಶನಿವಾರ ಬೆಳಿಗ್ಗೆ 8 ಗಂಟೆಗೂ ಮೊದಲು ಭಾರತೀಯ ವಾಯುಪಡೆ (IAF) ನಿರ್ವಹಿಸುವ ಗ್ವಾಲಿಯರ್ನ ಮಹಾರಾಜಪುರ ವಾಯುನೆಲೆಗೆ ಚಿರತೆಗಳನ್ನು ಸಾಗಿಸಿತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮುಂದಾಳತ್ವದಲ್ಲಿ ಏರ್ ಫೋರ್ಸ್ ಹೆಲಿಕಾಪ್ಟರ್ಗೆ ಚಿರತೆಗಳನ್ನು ಸಾಗಿಸಿ, ಅವುಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಯಿತು. ಇದಾದ ಬಳಿಕ ಪ್ರಧಾನಿ ಮೋದಿ ಅವರು ಚಿರತೆಗಳನ್ನು ಉದ್ಯಾನವನಕ್ಕೆ ಅರ್ಪಿಸಿದರು.
ಹಿನ್ನೆಲೆ: ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ನಮೀಬಿಯಾ ದೇಶದಿಂದ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ನಮೀಬಿಯಾ ದೇಶದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಲಾಗಿತ್ತು. ಈ ಪ್ರಯತ್ನದ ಫಲವಾಗಿ ಇದೀಗ ಭಾರತಕ್ಕೆ ಮೊದಲ ಹಂತದಲ್ಲಿ 8 ಚೀತಾಗಳು ಬಂದಿವೆ. (ಏಜೆನ್ಸೀಸ್)
ತಮನ್ನಾ ಮುಂದೆಯೇ ಬೌನ್ಸರ್ಸ್ಗಳ ಅನುಚಿತ ವರ್ತನೆ! ಮುಜುಗರಕ್ಕೀಡಾದ ಮಿಲ್ಕಿ ಬ್ಯೂಟಿ
ಶಾಲೆಯ ಲಿಫ್ಟ್ ಬಾಗಿಲುಗಳ ಮಧ್ಯೆ ಸಿಲುಕಿ ಶಿಕ್ಷಕಿ ಸಾವು: ಮಟ ಮಟ ಮಧ್ಯಾಹ್ನವೇ ನಡೆಯಿತು ಭಯಾನಕ ಘಟನೆ