ಜಕಾರ್ತ: ಮೋಟರ್ ಬೈಕ್ ಟೈರ್ ಕೊರಳಿಗೆ ಸಿಲುಕಿ ಕಳೆದ ಆರು ವರ್ಷಗಳಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದ ಉಪ್ಪು ನೀರಿನ ಮೊಸಳೆಯನ್ನು ಕೊನೆಗೂ ಟೈರ್ನಿಂದ ಮುಕ್ತಗೊಳಿಸಲಾಗಿದೆ. ಇಂಡೋನೇಷ್ಯಾದ ದಿಟ್ಟ ಗ್ರಾಮಸ್ಥನೊಬ್ಬ ಸಾಹಸ ಮೆರೆದು ಮೊಸಳೆಯ ಕತ್ತಿನಲ್ಲಿದ್ದ ಟೈರ್ ಅನ್ನು ತೆಗೆದಿದ್ದಾನೆ.
ಕೋಳಿಯ ಮೂಲಕ ಮೊಸಳೆಗೆ ಬಲೆ ಬೀಸಿ, ಅದನ್ನು ಸೆರೆಹಿಡಿದು ಕತ್ತಿನಲ್ಲಿದ್ದ ಟೈರ್ ಅನ್ನು ತೆಗೆಯುವಲ್ಲಿ ಗ್ರಾಮಸ್ಥ ಯಶಸ್ವಿಯಾಗಿದ್ದಾನೆ. ಈ ವಿಚಾರವನ್ನು ಸ್ಥಳೀಯ ಅಧಿಕಾರಿಗಳು ಮತ್ತು ನಿವಾಸಿಗಳು ಮಂಗಳವಾರ ಖಚಿತಪಡಿಸಿದ್ದಾರೆ. ಟೈರ್ ಅನ್ನು ತೆಗೆದು ಮೊಸಳೆಯನ್ನು ಮತ್ತೆ ನೀರಿಗೆ ಬಿಡಲಾಗಿದೆ.
ಸುಲಾವೆಸಿ ದ್ವೀಪದ ಪಲು ನಗರದ ನಿವಾಸಿಗಳು 2016ರಲ್ಲಿ ಬೈಕ್ ಟೈರ್ ಕತ್ತಿಗೆ ಸಿಲುಕಿಕೊಂಡಿದ್ದ ಮೊಸಳೆಯನ್ನು ನೋಡಿದ್ದರು. ಅಂದಿನಿಂದಲೂ ಇಂಡೋನೇಷ್ಯಾದ ಸಂರಕ್ಷಣಾ ಕಾರ್ಯಕರ್ತರು ಟೈರ್ ಬಿಡಿಸಲು ಸತತ ಪ್ರಯತ್ನ ನಡೆಸುತ್ತಿದ್ದರು. ಅದು ಈವರೆಗೂ ಸಫಲವಾಗಿರಲಿಲ್ಲ. ಆದರೆ, ಸ್ಥಳೀಯ ನಿವಾಸಿಯೊಬ್ಬರು 17 ಅಡಿ ಉದ್ದದ ಸರೀಸೃಪವನ್ನು ತಮ್ಮ ಬುದ್ಧಿವಂತಿಕೆ ಉಪಯೋಗಿಸಿ ಬಲೆಗೆ ಬೀಳಿಸಿದ್ದಾರೆ. ಮೊಸಳೆಯು ಮಧ್ಯ ಸುಲವೆಸಿಯ ಪಲು ನದಿಯಲ್ಲಿ ನಿತ್ಯವು ಸೂರ್ಯನ ಸ್ನಾನ ಮಾಡಲು ಬರುತ್ತಿತ್ತು. ಈ ವೇಳೆ ಅದರ ಚಿತ್ರವನ್ನು ಸೆರೆಹಿಡಿದ ಬಳಿಕ ಫೋಟೋಗಳು ವೈರಲ್ ಆಗಿದ್ದವು. ಸೋಮವಾರ ತಡರಾತ್ರಿ ಮೊಸಳೆಯನ್ನು ಸೆರೆಹಿಡಿದು ರಕ್ಷಣೆ ಮಾಡಲಾಗಿದೆ.
34 ವರ್ಷದ ಪಕ್ಷಿ ಮಾರಾಟಗಾರ ಟಿಲಿ ಎಂಬಾತ ಕೋಳಿಯನ್ನು ರೋಪ್ ಒಂದರ ಹುಕ್ಕಿನಲ್ಲಿ ಸಿಗಿಸಿ ಮೊಸಳೆಗೆ ಬಲೆ ಬೀಸಿದ್ದ. ಕೋಳಿ ತಿನ್ನುವ ಆಸೆಯಿಂದ ಬಾಯಿ ಹಾಕಿದ ಮೊಸಳೆ ಹುಕ್ಕಿಗೆ ಸಿಲುಕಿತ್ತು ಅದನ್ನು ಸ್ಥಳೀಯರ ನೆರವಿನಿಂದ ಟಿಲಿ ದಡಕ್ಕೆ ಎಳೆದು ಅದರ ಕತ್ತಿನಲ್ಲಿದ್ದ ಟೈರ್ ಅನ್ನು ಕತ್ತರಿಸಿ ರಕ್ಷಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥ ನಾನು ಸಹಾಯ ಮಾಡಲು ಬಯಸುತ್ತೇನೆ. ಪ್ರಾಣಿಗಳು ಸಿಕ್ಕಿಬಿದ್ದು, ಬಳಲುತ್ತಿರುವುದನ್ನು ನಾನು ದ್ವೇಷಿಸುತ್ತೇನೆಂದು ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಆರಂಭದಲ್ಲಿ ಎರಡು ಬಾರಿ ಪ್ರಯತ್ನ ವಿಫಲವಾಗಿತ್ತು. ಹಗ್ಗ ಬಲವಾಗಿ ಇಲ್ಲದಿದ್ದರಿಂದ ಎರಡು ಪ್ರಯತ್ನ ಕೈಕೊಟ್ಟಿತ್ತು. ಬಳಿಕ ನೈಲಾನ್ ಹಗ್ಗವನ್ನು ದೋಣಿಗೆ ಅಳವಡಿಸಿ ಮೊಸಳೆಯನ್ನು ಸೆರೆಹಿಡಿದಿದ್ದಾರೆ.
ಮೊಸಳೆಯನ್ನು ರಕ್ಷಿಸಿದವರಿಗೆ ಒಳ್ಳೆಯ ಬಹುಮಾನ ನೀಡುವುದಾಗಿ ಇಂಡೋನೇಷ್ಯಾ ಸರ್ಕಾರ ಈ ಹಿಂದೆಯೇ ಘೋಷಿಸಿತ್ತು. ಸ್ಥಳೀಯ ಅಧಿಕಾರಿಗಳು ಟೈರ್ ತೆಗೆಯುವ ಸಾಕಷ್ಟು ಪ್ರಯತ್ನಗಳನ್ನು ಮಾಡಿ ವಿಫಲವಾಗಿದ್ದರು. ಅನೇಕ ವರ್ಷದಿಂದ ಮೊಸಳೆ ಈ ಸಮಸ್ಯೆಯನ್ನು ಎದುರಿಸುತ್ತಿತ್ತು. ಆದರೆ ಇತ್ತೀಚೆಗೆ ಮೊಸಳೆಯು ಬಾಯಿ ತೆರೆದು ಉಸಿರಾಡಲು ಶ್ರಮಪಡುತ್ತಿದ್ದ ವಿಡಿಯೋವೊಂದು ಬೆಳಕಿಗೆ ಬಂದ ಮೇಲೆ ಎಚ್ಚೆತ್ತ ಅಧಿಕಾರಿಗಳು ಹೀಗೆ ಬಿಟ್ಟರೆ ಟೈರ್ ನಿಧಾನವಾಗಿ ಪ್ರಾಣಿಯನ್ನು ಕೊಂದು ಬಿಡುತ್ತದೆ ಎಂಬುದನ್ನು ಮನಗಂಡು, ಹೇಗಾದರೂ ಮಾಡಿ ಟೈರ್ ತೆಗೆಯಲೇಬೇಕೆಂಬ ನಿರ್ಧಾರಕ್ಕೆ ಬಂದು ಬಹುಮಾನ ಘೋಷಣೆ ಮಾಡಿದ್ದರು.
ಇದೀಗ ಮೊಸಳೆಯನ್ನು ರಕ್ಷಣೆ ಮಾಡಿರುವ ಟಿಲಿಗೆ ಇಂಡೋನೇಷ್ಯಾ ಸರ್ಕಾರ ಒಳ್ಳೆಯ ಬಹುಮಾನ ನೀಡಲಿದೆ. (ಏಜೆನ್ಸೀಸ್)
ಮೊಸಳೆ ಕೊರಳಲ್ಲಿ ಸಿಲುಕಿರೋ ಬೈಕ್ ಟೈರ್ ತೆಗೆದವರಿಗೆ ಸಿಗಲಿದೆ ಭಾರಿ ಬಹುಮಾನ: ಅದಕ್ಕೆ ಬೇಕಾಗಿರೋದಿಷ್ಟೇ…
ಕೋಲಾರದಲ್ಲಿ ಆರತಕ್ಷತೆ ವೇಳೆ ಕುಸಿದುಬಿದ್ದು ವಧುವಿನ ಬ್ರೈನ್ ಡೆಡ್: ಸಂಕಷ್ಟದಲ್ಲೂ ಮಾನವೀಯತೆ ಮೆರೆದ ಪಾಲಕರು
ಬಟ್ಟೆ ಮೇಲಿಂದ ಮುಟ್ಟಿದ್ರೆ ಲೈಂಗಿಕ ದೌರ್ಜನ್ಯವಲ್ಲ: ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿ ರಾಜೀನಾಮೆ
ಹಿಜಾಬ್ ವಿವಾದ: ಕರ್ನಾಟಕದ ನಡೆಯನ್ನು ಟೀಕಿಸಿದ ಅಮೆರಿಕ ಹೇಳಿದ್ದು ಹೀಗೆ…