ನವದೆಹಲಿ: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಕ್ಕೆ ಮೋಡ ಕವಿದ ವಾತಾವರಣದಲ್ಲಿ ಪೈಲಟ್ ದೋಷವೇ ಕಾರಣ ಎಂದು ವಾಯುಸೇನೆಯ ತನಿಖಾಧಿಕಾರಿಗಳ ತಂಡ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಡಿಸೆಂಬರ್ 8ರಂದು ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿತ್ತು. ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಬದುಕುಳಿದಿದ್ದ ಪೈಲಟ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಸೇನಾ ಹೆಲಿಕಾಪ್ಟರ್ ಪತನಕ್ಕೆ ಕಾರಣವೇನು ಎಂಬ ಪ್ರಶ್ನೆ ಇದುವರೆಗೂ ಪ್ರಶ್ನೆಯಾಗಿಯೇ ಉಳಿದಿತ್ತು. ಇದೀಗ ಸೇನಾಧಿಕಾರಿಗಳು ನಡೆಸಿರುವ ತನಿಖೆಯಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಪೈಲಟ್ ದೋಷವೇ ಹೆಲಿಕಾಪ್ಟರ್ ಪತನಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೋಡ ಕವಿದ ವಾತಾವರಣಕ್ಕೆ ಹೆಲಿಕಾಪ್ಟರ್ ಪ್ರವೇಶಿಸುತ್ತಿದ್ದಂತೆ ಕಣಿವೆಯಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆಯಿಂದಾಗಿ ಪೈಲಟ್ ದಿಗ್ಭ್ರಾಂತಗೊಂಡಿದ್ದಾರೆ. ದಾರಿ ಸ್ಪಷ್ಟವಾಗಿ ಗೋಚರಿಸದೇ ಭಯಭೀತರಾದ ಪೈಲಟ್, ಚಾಪರ್ ಅನ್ನು ಭೂಪ್ರದೇಶಕ್ಕೆ ನುಗ್ಗಿಸಿದಾಗ ಪತನ ಸಂಭವಿಸಿದೆ ಎಂದು ಹೇಳಲಾಗಿದೆ.
ಹೆಲಿಕಾಪ್ಟರ್ನಲ್ಲಿದ್ದ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ವಿಶ್ಲೇಷಿಸಿದ ನಂತರ ತನಿಖಾ ತಂಡವು ಅಪಘಾತದ ಅತ್ಯಂತ ಸಂಭವನೀಯ ಕಾರಣವನ್ನು ನಿರ್ಧರಿಸಲು ಲಭ್ಯವಿರುವ ಎಲ್ಲಾ ಸಾಕ್ಷಿಗಳನ್ನು ಪ್ರಶ್ನಿಸಿ, ಅಂತಿಮ ತೀರ್ಮಾನಕ್ಕೆ ಬಂದಿದೆ.
ಐಎಟಿಎ (ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ಸ್ ಅಸೋಸಿಯೇಷನ್) ಪ್ರಕಾರ, ಭೂಪ್ರದೇಶ, ನೀರು ಅಥವಾ ಇತರೆ ಅಡಚಣೆಯೊಂದಿಗೆ ಸಂಭವಿಸುವ ಅಪಘಾತಗಳು ನಿಯಂತ್ರಣ ಕಳೆದುಕೊಂಡ ಸೂಚನೆಯಿಲ್ಲದೇ ನಡೆದೇ ಹೋಗುತ್ತದೆ. ಯುನೈಟೆಡ್ ಸ್ಟೇಟ್ಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ ವಿಮಾನವು ಸರಿಯಾದ ನಿಯಂತ್ರಣದಲ್ಲಿರುವಾಗ ಭೂಪ್ರದೇಶದೊಂದಿಗೆ (ನೆಲ, ಪರ್ವತ, ನೀರಿನ ದೇಹ, ಅಥವಾ ಅಡಚಣೆ) ಉದ್ದೇಶಪೂರ್ವಕವಲ್ಲದ ಘರ್ಷಣೆ ಸಂಭವಿಸುತ್ತದೆ. ಅಂತಹ ಘಟನೆಗಳಲ್ಲಿನ ನಿರ್ಣಾಯಕ ವ್ಯತ್ಯಾಸವೆಂದರೆ ವಿಮಾನವು ವಿಮಾನ ಸಿಬ್ಬಂದಿಯ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ಪೈಲಟ್ ದೋಷವೂ ಕೂಡ ಸ್ಪಷ್ಟವಾಗಿ ಗೋಚರಿಸುತ್ತದೆ.
ನಡೆದಿದ್ದೇನು?
ಡಿಸೆಂಬರ್ 8ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿರುವ ವೆಲ್ಲಿಂಗ್ಟನ್ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್ಗೆಂದು ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್, ಹವಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್ ಪತನಗೊಂಡು ಸ್ಥಳದಲ್ಲೇ ಬಿಪಿನ್ ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದರು. ಅಪಘಾತದಲ್ಲಿ ಬದುಕಿ ಉಳಿದಿದ್ದ ಏಕೈಕ ಯೋಧ ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ತಮಿಳುನಾಡಿನ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನುರಿತ ವೈದ್ಯರ ತಂಡ ವರುಣ್ ಸಿಂಗ್ರನ್ನು ಬದುಕಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತಾದರೂ ಚಿಕಿತ್ಸೆ ಫಲಿಸದೆ ಡಿಸೆಂಬರ್ 15ರಂದು ಕೊನೆಯುಸಿರೆಳೆದರು. (ಏಜೆನ್ಸೀಸ್)
ಆಕ್ಸಿಡೆಂಟ್ನಲ್ಲಿ ಕುಡುಕರ ಸಾವಿನ ಸಂಖ್ಯೆ ಏರಿಕೆ: 2021ರಲ್ಲಿ ಅಪಘಾತಗಳು ಗಣನೀಯ ಇಳಿಕೆ
ಗಾಳಿಯಲ್ಲಿನ ಕರೊನಾ ವೈರಸ್ 20 ನಿಮಿಷದಲ್ಲಿ ದುರ್ಬಲ!: ಲಸಿಕೆ ಪಡೆಯುವುದಕ್ಕೆ ಮೊದಲೇ ಒಮಿಕ್ರಾನ್ ತಗುಲಿದರೆ ಅಪಾಯ
ಪಂಜಾಬಲ್ಲಿ ಆಪ್ ಮ್ಯಾಜಿಕ್?: ದೆಹಲಿ ಮಾದರಿ ಆಡಳಿತ ಭರವಸೆ; ಗಮನ ಸೆಳೆದ ಹೊಸ ಪ್ರಯೋಗ