ನವದೆಹಲಿ: ಲಾಯರ್ ವೇಷದಲ್ಲಿದ್ದ ಬಂದೂಕುಧಾರಿಗಳು ದೆಹಲಿ ನ್ಯಾಯಾಲಯದಲ್ಲಿ ನಡೆಸಿದ ಗುಂಡಿನ ದಾಳಿಯಿಂದಾಗಿ ಓರ್ವ ಗ್ಯಾಂಗ್ಸ್ಟರ್ ಸೇರಿದಂತೆ ಮೂವರು ಹತರಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.
ಗ್ಯಾಂಗ್ಸ್ಟರ್ ಜೀತೇಂದರ್ ಗೊಗಿಯನ್ನು ಎದುರಾಳಿ ಗುಂಪಿನವರು ಉತ್ತರ ದೆಹಲಿಯ ರೋಹಿಣಿ ಏರಿಯಾದಲ್ಲಿರುವ ನ್ಯಾಯಾಲಯ ಸಂಕೀರ್ಣದಲ್ಲಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಆರೋಪಿಗಳು ಲಾಯರ್ ವೇಷ ಧರಿಸಿ ಕೋರ್ಟ್ ಆವರಣಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಎದುರಾಳಿ ಗುಂಪಿನ ಇಬ್ಬರು ಸದಸ್ಯರು ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಜೀತೇಂದರ್ ಗೊಗಿ ಓರ್ವ ನಟೋರಿಯಸ್ ಗ್ಯಾಂಗ್ಸ್ಟರ್. ಅನೇಕ ಅಪರಾಧ ಪ್ರಕರಣಗಳು ಆತನ ಮೇಲಿವೆ. ತಿಹಾರ್ ಜೈಲಿನಲ್ಲಿದ್ದ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ವೇಳೆ ಎದುರಾಳಿ “ಟಿಲ್ಲು ಗ್ಯಾಂಗ್” ಸದಸ್ಯರು ಲಾಯರ್ ವೇಷದಲ್ಲಿ ಬಂದು ಜೀತೇಂದರ್ ಗೊಗಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇದೇ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದ್ದು, ಟಿಲ್ಲು ಗ್ಯಾಂಗ್ನ ಇಬ್ಬರು ಸದಸ್ಯರು ಮೃತರಾಗಿದ್ದಾರೆಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾ ಮಾಹಿತಿ ನೀಡಿದ್ದಾರೆ. ಪೊಲೀಸರು ಬಹುಬೇಗನೇ ಪ್ರತಿಕ್ರಿಯಿಸಿ ಇಬ್ಬರನ್ನು ಹೊಡೆದುರುಳಿಸಿದರು. ಒಟ್ಟು ಮೂವರು ಸಾವಿಗೀಡಾಗಿದ್ದಾರೆಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಕೋರ್ಟ್ ಆವರಣದಲ್ಲಿಯೇ ಗುಂಡಿನ ದಾಳಿ ನಡೆದಿದ್ದು, ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನು ಜೀತೇಂದ್ರ ಗೊಗಿ ಗ್ಯಾಂಗ್ ಮತ್ತು ಟಿಲ್ಲು ಗ್ಯಾಂಗ್ ನಡುವೆ ಅನೇಕ ವರ್ಷಕ್ಕಿಂತ ಹೆಚ್ಚಿನ ಕಾಲದಿಂದಲೂ ಸಂಘರ್ಷ ನಡೆದುಕೊಂಡು ಬಂದಿದ್ದು, ಇದುವರೆಗೂ ಎರಡು ಗ್ಯಾಂಗ್ನಿಂದ 25ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ.
ಜೀತೇಂದರ್ ಗೊಗಿಯನ್ನು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬಂಧಿಸಲಾಗಿತ್ತು. ದೆಹಲಿ ಪೊಲೀಸ್ ಪಾಲಿಗೆ ದೊಡ್ಡ ಮಿಕಾ ಎಂದು ಭಾವಿಸಲಾಗಿತ್ತು. ಆತನನ್ನು ಇಂದು ಕೋರ್ಟ್ಗೆ ಹಾಜರುಪಡಿಸುವುದನ್ನೇ ಕಾದು ಕುಳಿತಿದ್ದ ಎದುರಾಳಿ ಗ್ಯಾಂಗ್ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ. (ಏಜೆನ್ಸೀಸ್)
PHOTOS| ಹಗಲು-ರಾತ್ರಿ ಪ್ರಯಾಣ, 18 ಪಾರಂಪರಿಕ ತಾಣ, 33 ಸಾವಿರ ಕಿ.ಮೀ: ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ!
ದೇವೇಗೌಡರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ: ನಿಖಿಲ್-ರೇವತಿ ದಂಪತಿಗೆ ಗಂಡು ಮಗು ಜನನ
ದೇವೇಗೌಡರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ: ನಿಖಿಲ್-ರೇವತಿ ದಂಪತಿಗೆ ಗಂಡು ಮಗು ಜನನ