ಕೊಚ್ಚಿ: ಕೇರಳದ ಮಾಡೆಲ್ಗಳಿಬ್ಬರ ಜೀವ ಕಸಿದ ಕಾರು ಅಪಘಾತ ಪ್ರಕರಣಕ್ಕೆ ಪೊಲೀಸರು ತಾರ್ಕಿಕ ಅಂತ್ಯ ಹಾಡಿದ ಬೆನ್ನಲ್ಲೇ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಮೊದಲಿಂದಲೂ ಈ ಪ್ರಕರಣದ ಮೇಲೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಮಾಡೆಲ್ಗಳು ಪಾಲ್ಗೊಂಡಿದ್ದ ಡಿಜಿ ಪಾರ್ಟಿ ನಡೆದ ಹೋಟೆಲ್ ಮಾಲೀಕ ಹಾಗೂ ಅಪಘಾತಕ್ಕೀಡಾದ ಕಾರನ್ನು ಚೇಸ್ ಮಾಡಿದ್ದ ಆಡಿ ಕಾರು, ಪ್ರಕರಣವನ್ನು ನಿಗೂಢತೆಗೆ ದೂಡಿತ್ತು. ಆದರೆ, ಇದು ಕೊಲೆಯಲ್ಲ, ಮದ್ಯದ ಅಮಲಿನಲ್ಲಿ ನಡೆದ ದುರ್ಘಟನೆ ಎಂದು ನಿಗೂಢತೆಗೆ ತೆರೆ ಎಳೆಯಲು ಪೊಲೀಸರು ಪ್ರಯತ್ನಿಸಿದರೂ, ಅಪಘಾತಕ್ಕೀಡಾದ ಕಾರು ಚಾಲಕನ ಹೇಳಿಕೆ ಹಾಗೂ ಹೋಟೆಲ್ ಮಾಲೀಕನ ನಿಗೂಢ ನಡೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿವೆ.
ನವೆಂಬರ್ 1ರಂದು ಫೋರ್ಟ್ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಹಿಂದಿರುಗುವಾಗ ಕೇರಳದ ವ್ಯಟ್ಟಿಲ-ಪಲರಿವಟ್ಟಮ್ ರಾಷ್ಟ್ರೀಯ ಹೆದ್ದಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಭರವಸೆಯ ಮಾಡೆಲ್ಗಳು ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ 2019ರ ಮಿಸ್ ಕೇರಳ ವಿಜೇತೆ ಅಟ್ಟಿಂಗಲ್ ಮೂಲದ ಅನ್ಸಿ ಕಬೀರ್ (25), ತ್ರಿಸ್ಸೂರ್ ಮೂಲದ ರನ್ನರ್ ಅಪ್ ಅಂಜನಾ ಶಾಜನ್ (24) ಮತ್ತು ಕೆ.ಎ. ಮಹಮ್ಮದ್ ಆಶಿಕ್ (25) ದಾರುಣವಾಗಿ ಮೃತಪಟ್ಟಿದ್ದರು. ಕಾರು ಚಲಾಯಿಸುತ್ತಿದ್ದ ಚಾಲಕ ಅಬ್ದುಲ್ ರೆಹಮಾನ್ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿದೆ.
ತನಿಖೆ ನಡೆಯುತ್ತಿರುವಾಗಲೇ ಮಾಡೆಲ್ ಅನ್ಸಿ ಕಬೀರ್ ಅವರ ಕುಟುಂಬ ವಿವರವಾದ ತನಿಖೆ ನಡೆಸಬೇಕೆಂದು ದೂರು ನೀಡಿದ್ದಾರೆ. ಹೀಗಾಗಿ ಆದಷ್ಟು ಬೇಗ ಅಪಘಾತದ ಹಿಂದಿರುವ ನಿಗೂಢವನ್ನು ಭೇದಿಸುವಂತೆ ಘಟನೆ ನಡೆದ ವ್ಯಾಪ್ತಿಯ ಪಲವರಿವಟ್ಟಂ ಪೊಲೀಸ್ ಠಾಣೆಯ ಮೇಲೆ ಒತ್ತಡ ಹೆಚ್ಚಾಗಿದೆ.
ಪ್ರಕರಣದದ ತನಿಖೆ ಸಮಾಧಾನಕರವಾಗಿದೆ. ಆದರೆ, ಆರೋಪಿಗಳ ಮೇಲೆ ಪೊಲೀಸರು ಗಮನಾರ್ಹವಾದ ಕ್ರಮ ಕೈಗೊಂಡಿಲ್ಲ. ಅದರಲ್ಲೂ ಹೋಟೆಲ್ ಮಾಲೀಕ ರಾಯ್ ಸಿಸಿಟಿವಿ ಸಾಕ್ಷ್ಯಗಳನ್ನು ನಾಶ ಮಾಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಅನ್ಸಿ ಮತ್ತು ಅವರ ಆಪ್ತರು ಇದ್ದ ಕಾರನ್ನು ಆಡಿ ಕಾರು ಯಾಕೆ ಹಿಂಬಾಲಿಸಿತು ಎಂಬುದನ್ನು ಪತ್ತೆ ಮಾಡುವಂತೆ ಕುಟುಂಬ ಒತ್ತಾಯಿಸಿದೆ.
ಅಪಘಾತಕ್ಕೀಡಾದ ಕಾರಿನ ಚಾಲಕ ಅಬ್ದುಲ್ ರೆಹಮಾನ್ ಆಡಿ ಕಾರೊಂದು ನಮ್ಮ ಕಾರನ್ನು ಹಿಂಬಾಲಿಸಿತು ಎಂದು ಹೇಳಿಕೆ ನೀಡಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ. ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ಇಂದು ರೆಹಮಾನ್ಗೆ ಜಾಮೀನು ದೊರೆತಿದ್ದು, ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಹೋಟೆಲ್ನಲ್ಲಿದ್ದ ಸಿಸಿಟಿವಿ ಸಾಕ್ಷಿಗಳನ್ನು ಮಾಲೀಕ ರಾಯ್ ನಾಶಪಡಿಸಿರುವುದಾಗಿ ಪೊಲೀಸರು ಸಹ ಒಪ್ಪಿಕೊಂಡಿದ್ದಾರೆ. ಇದೀಗ ಇಡೀ ಪ್ರಕರಣ ರಾಯ್ ಮೇಲೆ ಕೇಂದ್ರಿಕೃತವಾಗಿದ್ದು, ಹೋಟೆಲ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಇನ್ನು ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್ ನಂಬರ್ 18 ಮಾಲೀಕ ರಾಯ್ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್ರನ್ನು ಸಂಪರ್ಕಿಸಿದ್ದಾರೆ. ರಾಯ್ ಮತ್ತು ಸೈಜು ಸ್ನೇಹಿತರು ಎಂದು ತಿಳಿದುಬಂದಿದೆ. ಅಪಘಾತದ ಬೆನ್ನಲ್ಲೇ ಸೈಜು, ರಾಯ್ ಮತ್ತು ಹೋಟೆಲ್ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ.
ಆದರೆ, ಸೈಜು ಹೇಳಿರುವ ಪ್ರಕಾರ ಹೋಟೆಲ್ನಿಂದ ಹೊರಟ ಮಾಡೆಲ್ಗಳು ಮತ್ತು ಕಾರಿನ ಚಾಲಕ ಅಬ್ದುಲ್ ರೆಹಮಾನ್ ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲು ಮತ್ತು ಚಾಲನೆ ಮಾಡದಂತೆ ಹೇಳಲು ಹಿಂಬಾಲಿಸಿದೆ ಎಂದು ಹೇಳಿದ್ದಾರೆ. ಆದರೆ, ಇದನ್ನು ಒಪ್ಪಲು ಪೊಲೀಸರು ತಯಾರಿಲ್ಲ.
ಅಪಘಾತ ಸಂಭವಿಸಿದ ನಂತರ ವ್ಯಕ್ತಿಯೊಬ್ಬ ಆಡಿ ಕಾರಿನಿಂದ ಇಳಿದು ಪರಿಸ್ಥಿತಿಯನ್ನು ಅವಲೋಕಿಸಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಇದಲ್ಲದೆ, ಅವರ ಸ್ನೇಹಿತರು ಬೇರೆ ವಾಹನಗಳಲ್ಲಿ ಬಂದಿದ್ದಾರೆ ಎಂದು ಶಂಕಿಸಲಾಗಿದೆ. ಅಪಘಾತ ಘಟನಾ ಸ್ಥಳದಲ್ಲಿ ನಿಗಾ ವಹಿಸಿ ಹಿಂತಿರುಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಆಡಿ ಕಾರಿನಲ್ಲಿದ್ದವರು ಕೂಡ ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿರುವುದು ಪೊಲೀಸರು ಮತ್ತೆ ಪ್ರಕರಣದ ಮೇಲೆ ಅನುಮಾನ ಮೂಡಿದ್ದು, ಪ್ರಕರಣ ಇನ್ನುಷ್ಟು ನಿಗೂಢವಾಗುತ್ತಿದೆ. ಸದ್ಯ ತನಿಖೆ ಮುಂದುವರಿದಿದ್ದು, ಪ್ರಕರಣ ಯಾವು ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)
ಮಾಡೆಲ್ಗಳಿಬ್ಬರ ದುರ್ಮರಣ: ಕೇಸ್ ಕ್ಲೋಸ್ ಆಯ್ತು ಅನ್ನುವಷ್ಟರಲ್ಲಿ ಪ್ರಕರಣಕ್ಕೆ ಹೊಸ ತಿರುವು!
ಮಾಡೆಲ್ಗಳಿಬ್ಬರ ದುರ್ಮರಣ: ನಿಗೂಢ ಸಾವಿಗೆ ಕೊನೆಗೂ ಕಾರಣ ಪತ್ತೆಹಚ್ಚಿದ ಪೊಲೀಸರು!
ಮಾಡೆಲ್ಗಳಿಬ್ಬರ ದುರ್ಮರಣ: ಆಡಿ ಕಾರು, ಹೋಟೆಲ್ ಮಾಲೀಕ… ಪೊಲೀಸರಿಗೆ ಸಿಕ್ತು ಸ್ಫೋಟಕ ಸುಳಿವು
ಕೇರಳ ಮಾಡೆಲ್ಗಳಿಬ್ಬರ ದುರ್ಮರಣ: ಮಧ್ಯರಾತ್ರಿಯ ಡಿಜೆ ಪಾರ್ಟಿ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ!
ಮಾಡೆಲ್ಗಳಿಬ್ಬರ ದುರ್ಮರಣ: ರಹಸ್ಯ ಮಾಹಿತಿ ಇರೋ ಸಿಸಿಟಿವಿ ಡಿವಿಆರ್ನೊಂದಿಗೆ ಹೋಟೆಲ್ ಮಾಲೀಕ ನಾಪತ್ತೆ