ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ “ವಿಕ್ರಾಂತ್ ರೋಣ” ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, 2022ರ ಫೆ.24 ರಂದು ಇಡೀ ವಿಶ್ವದಾದ್ಯಂತ ವಿಕ್ರಾಂತ್ ರೋಣ ಅಬ್ಬರಿಸಲಿದ್ದಾನೆ.
ಕರೊನಾ ಎರಡನೇ ಅಲೆ ಬರದೇ ಹೋಗಿದ್ದರೆ, ಆಗಸ್ಟ್ 19 ರಂದೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಲಾಕ್ಡೌನ್ ಮತ್ತು ಕರೊನಾ ನಂತರದ ಚಿತ್ರಮಂದಿರದ ಮೇಲಿನ ನಿರ್ಬಂಧದಿಂದಾಗಿ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮುಂದೂಡಿತ್ತು. ಅಂದಿನಿಂದ ಚಿತ್ರತಂಡದಿಂದ ಯಾವುದೇ ಅಪ್ಡೇಟ್ ಇಲ್ಲದೆ ಅಭಿಮಾನಿಗಳು ನಿರಾಶೆಯಾಗಿದ್ದರು. ಹೀಗಿರುವಾಗ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ಡಿ. 5ರಂದು ಚಿತ್ರತಂಡ ಘೋಷಣೆ ಮಾಡಿತ್ತು. ಅವರು ಹೇಳಿದಂತೆ ಡಿ.7ರ ಮಧ್ಯಾಹ್ನ 12.45ಕ್ಕೆ ವಿಕ್ರಾಂತ್ ರೋಣ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಈ ಮೂಲಕ ಅಭಿಮಾನಿಗಳ ಇಷ್ಟು ದಿನದ ಕಾಯುವಿಕೆಗೆ ಚಿತ್ರತಂಡ ವಿರಾಮ ಹೇಳಿದ್ದು, ಮುಂದೆ ಚಿತ್ರದ ಅದ್ಧೂರಿ ಸ್ವಾಗತಕ್ಕೆ ದಿನಗಣನೆ ಎಣಿಸುವಂತೆ ಮಾಡಿದೆ.
ಟ್ವಿಟರ್ನಲ್ಲಿ ಟ್ರೆಂಡಿಂಗ್
ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ವಿಕ್ರಾಂತ್ ರೋಣ ಹಾಗೂ ಕಿಚ್ಚ ಸುದೀಪ್ ಎಂಬ ಹ್ಯಾಸ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಫೆ.24 ಎಷ್ಟು ಬೇಗ ಬರುತ್ತದೋ ಎಂದು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೆ, ವಿಕ್ರಾಂತ್ ರೋಣ ಚಿತ್ರ ತಂಡದ ಪ್ರಚಾರ ಕಾರ್ಯ ಹೇಗಿರುತ್ತದೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.
ವಿಕ್ರಾಂತ್ ರೋಣ ಸಿನಿಮಾ ನಟ ಸುದೀಪ್ ಸಿನಿ ಕೆರಿಯರ್ನಲ್ಲೇ ವಿಭಿನ್ನ ಸಿನಿಮಾ ಆಗಿರಲಿದೆ. ಭಾರತ ಮಾತ್ರವಲ್ಲದೇ ವಿದೇಶಿ ಭಾಷೆಗಳಲ್ಲೂ ಚಿತ್ರ ತೆರೆಕಾಣಲಿದ್ದು, ಇದನ್ನು ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಪರಿಗಣಿಸಲಾಗಿದೆ. ಈಗಾಗಲೇ ಚಿತ್ರದ ಬಗ್ಗೆ ಅನೇಕ ಘಟಾನುಘಟಿಯರು ಧನಾತ್ಮಕವಾಗಿ ಮಾತನಾಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ನೂರ್ಮಡಿಯಾಗಿದೆ. ಚಿತ್ರವನ್ನು ರಂಗಿತರಂಗ ಖ್ಯಾತಿ ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳವನ್ನು ಹೂಡಿದ್ದಾರೆ. ಇತ್ತೀಚೆಗೆ ದುಬೈನ ಬುರ್ಜ್ ಖಲೀಫಾ ಮೇಲೆಯೂ ಶೀರ್ಷಿಕೆ ಅನಾವರಣ ಮಾಡಿ ಸ್ಯಾಂಡಲ್ವುಡ್ನಲ್ಲಿ ಯಾರೂ ಮಾಡದ ದಾಖಲೆಯೊಂದನ್ನು ಬರೆದಿದೆ.
ಕೋರ್ಟ್ ಮೆಟ್ಟಿಲೇರಿದ ‘ಸೋಜುಗಾದ ಸೂಜು ಮಲ್ಲಿಗೆ’ ವಿವಾದ: ಜಿಜಿವಿವಿ ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ
ಮಾಡಬಾರದ್ದನ್ನು ಮಾಡಿ ಕೊನೆಗೆ 8ರ ಬಾಲಕಿಯ ಮುಂದೆ ಮಂಡಿಯೂರಿದ ಮಹಿಳಾ ಪೊಲೀಸ್ ಅಧಿಕಾರಿ!