ನವದೆಹಲಿ: ರಾಮಾಯಣದ ದೈವಿಕ ಪಕ್ಷಿಯಾದ ‘ಜಟಾಯು’ ಇತ್ತೀಚೆಗೆ ಕೇರಳದ ಕೊಲ್ಲಂ ಜಿಲ್ಲೆಯ ಸದಯಮಂಗಲಂ ಅರಣ್ಯದಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ವಿಡಿಯೋ ನೋಡಿದ ಬಹುತೇಕರು ಹುಬ್ಬೇರಿಸಿದ್ದಾರೆ. ಇದರ ಜತೆಗೆ ಇನ್ನು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಇದು ನಿಜಾನ ಎಂದು ಪ್ರಶ್ನೆ ಮಾಡಿದ್ದು, ಅದಕ್ಕೆ ಉತ್ತರ ಇಲ್ಲಿದೆ.
ವೈರಲ್ ಫೋಟೋ ಹಾಗೂ ವಿಡಿಯೋಗಳ ಸತ್ಯಾನ್ವೇಷಣೆ ಮಾಡುವ ಫ್ಯಾಕ್ಟ್ಚೆಕ್ ವೆಬ್ಸೈಟ್ಗಳ ಪ್ರಕಾರ ಜಟಾಯು ಪಕ್ಷಿ ಎಂದು ಹೇಳಿ ವೈರಲ್ ಮಾಡಿರುವ ವಿಡಿಯೋಗೂ ಕೇರಳಕ್ಕೂ ಸಂಬಂಧವಿಲ್ಲ ಎಂದು ತಿಳುದುಬಂದಿದೆ.
ರಾಮಾಯಣದ ದೈವಿಕ ಪಕ್ಷಿಯಾದ ಜಟಾಯು ಬಹಳ ವಿರಳವಾಗಿ ಕಂಡುಬರುತ್ತದೆ. ಜಟಾಯು ಪಾರ್ಕ್ ಇರುವ ಕೇರಳದ ಸದಯಮಂಗಲಂ ಅರಣ್ಯದಲ್ಲಿ ಇತ್ತೀಚೆಗೆ ಈ ಪಕ್ಷಿ ಕಾಣಿಸಿಕೊಂಡಿದೆ. ನಮ್ಮ ಜೀವಿತಾವಧಿಯಲ್ಲಿ ನಮ್ಮಲ್ಲಿ ಯಾರೂ ಈ ಭವ್ಯವಾದ ಪಕ್ಷಿಯನ್ನು ನೋಡಿರಲಿಲ್ಲ, ಅದರ ಸುಂದರವಾದ ರೆಕ್ಕೆಗಳನ್ನು ನೋಡಿ ಆನಂದಿಸಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದು, ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸದ್ಯ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹಾಗೇ ವಿಡಿಯೋ ಖಚಿತತೆ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ವಿಡಿಯೋದ ಅಸಲಿಯತ್ತು ತಿಳಿಯಲು ವಿಡಿಯೋದಲ್ಲಿರುವ ಪ್ರಮುಖ ಫ್ರೇಮ್ಗಳನ್ನು ಗೂಗಲ್ನ ರಿವರ್ಸ್ ಇಮೇಜ್ ಸರ್ಚ್ ಇಂಜಿನ್ನಲ್ಲಿ ಹಾಕಿ ನೋಡಿದಾಗ 2014ರಲ್ಲಿ ಶೇರ್ ಮಾಡಲಾದ ಅನೇಕ ನ್ಯೂಸ್ ಲಿಂಕ್ಗಳು ವೆಬ್ನ ಪುಟದಲ್ಲಿ ತೆರೆದುಕೊಳ್ಳುತ್ತದೆ. ಯೂಟ್ಯೂಬ್ ಲಿಂಕ್ ಒಂದರಲ್ಲಿ ಈಗ ಹರಿದಾಡುತ್ತಿರುವ ಅದೇ ವಿಡಿಯೋ ಪತ್ತೆಯಾಗುತ್ತದೆ. ಅದರ ಪ್ರಕಾರ ಪಕ್ಷಿಯ ಹೆಸರು ಆಂಡಿಯನ್ ಕಾಂಡೊರ್.
ದಾಡೋ ಹೆಸರಿನ ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನವು ವೀಡಿಯೊದಲ್ಲಿ ಕಂಡುಬರುವ ಪಕ್ಷಿಯನ್ನು ಆಂಡಿಯನ್ ಕಾಂಡೋರ್ ಎಂದು ಗುರುತಿಸಿದೆ. ಸಯಾನಿ ಎಂಬ ಹೆಸರಿನ ಈ ನಿರ್ದಿಷ್ಟ ಪಕ್ಷಿಗೆ 2012ರಲ್ಲಿ ಅರ್ಜೆಂಟೀನಾದ ಕ್ಯಾಟಮಾರ್ಕಾದಲ್ಲಿ ವಿಷಪ್ರಾಶನಗೊಂಡು ಸಾವಿಗೆ ಹತ್ತಿರವಾಗಿತ್ತು. ಈ ವೇಳೆ ಅದನ್ನು ರಕ್ಷಣೆ ಮಾಡಿ ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್ನಲ್ಲಿರುವ ಮೃಗಾಲಯಕ್ಕೆ ಚಿಕಿತ್ಸೆಗೆಂದು ಕಳುಹಿಸಲಾಯಿತು. ಸುಮಾರು 16 ತಿಂಗಳ ನಿರಂತರ ಚಿಕಿತ್ಸೆಯಿಂದ ಪಕ್ಷಿ ಸಂಪೂರ್ಣ ಗುಣವಾಯಿತು. ಚೇತರಿಸಿಕೊಂಡ ಬಳಿಕ ಅಧಿಕಾರಿಗಳು ಸಯಾನಿ ಪಕ್ಷಿಯನ್ನು ಬಿಡುಗಡೆ ಮಾಡಿರುವುದೇ ನೀವು ಈಗ ನೋಡುತ್ತಿರುವ ವೈರಲ್ ವಿಡಿಯೋ ಆಗಿದೆ.
ಸದ್ಯ ವೈರಲ್ ಆಗಿರುವ ವಿಡಿಯೋಗೂ ಕೇರಳಕ್ಕೂ ಸಂಬಂಧವಿಲ್ಲ. ಅರ್ಜೆಂಟೀನಾದಲ್ಲಿ ನಡೆದ ಒಂದು ಘಟನೆಯಾಗಿದೆ. ವಿಡಿಯೋವನ್ನು ಶೇರ್ ಮಾಡಿ ಅದಕ್ಕೆ ಜಟಾಯು ಎಂದು ಹೇಳಿ ತಪ್ಪು ಸಂದೇಶ ಹರಿಬಿಡಲಾಗಿದೆ ಅಷ್ಟೇ.
ಇನ್ನು ಜಟಾಯು ಪಕ್ಷಿ ವಿಚಾರಕ್ಕೆ ಬರುವುದಾದರೆ, ಜಟಾಯು ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖಿಸಲಾದ ಪೌರಾಣಿಕ ಪಕ್ಷಿ. ರಾಮಾಯಣ ಪ್ರಕಾರ ಲಂಕಾಸುರ ರಾವಣ, ಸೀತೆಯನ್ನು ಅಪಹರಿಸುವಾಗ ಅದನ್ನು ನೋಡಿದ ಜಟಾಯು ಅಪಹರಣವನ್ನು ತಡೆಯಲು ಪ್ರಯತ್ನಿಸುತ್ತದೆ. ಪಕ್ಷಿಯು ತನ್ನ ರೆಕ್ಕೆಗಳನ್ನು ಹರಡಿ ರಾವಣನ ಮುಂದೆ ನಿಲ್ಲುತ್ತದೆ. ಆದರೆ, ರಾವಣ ಜಟಾಯು ಪಕ್ಷಿಯ ರೆಕ್ಕೆಯನ್ನು ಕತ್ತರಿಸುತ್ತಾನೆ. (ಏಜೆನ್ಸೀಸ್)
ಕೆಜಿಎಫ್-2 ಚಿತ್ರತಂಡಕ್ಕೆ ಕೃತಜ್ಞತೆ ಇಲ್ಲವೇ? ನೀವು ಮಾಡಿದ್ದು ಸರಿನಾ ಎಂಬುದು ಕೆಜಿಎಫ್ ಜನರ ಪ್ರಶ್ನೆ!
ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ನಟ ವಿಶಾಲ್? ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಈ ಒಂದು ಟ್ವೀಟ್!