ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಸಿಗದಿದ್ದಕ್ಕೆ ಮನನೊಂದ ಸಮಾಜವಾದಿ ಪಕ್ಷ(ಎಸ್ಪಿ)ದ ಕಾರ್ಯಕರ್ತನೊಬ್ಬ ಲಖನೌದಲ್ಲಿರುವ ಪಕ್ಷದ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆದಿತ್ಯ ಠಾಕೂರ್ ಆತ್ಮಹತ್ಯೆಗೆ ಯತ್ನಿಸಿದ ಎಸ್ಪಿ ಕಾರ್ಯಕರ್ತ. ಈತ ಆಲಿಗಢ ಕ್ಷೇತ್ರದ ನಿವಾಸಿ. ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಹೊಂದಿದ್ದ. ಆದರೆ, ಪಕ್ಷದಿಂದ ಟಿಕೆಟ್ ಸಿಗದಿದ್ದಕ್ಕೆ ಮನನೊಂ ಠಾಕೂರ್ ಲಖನೌದ ವಿಕ್ರಮಾದಿತ್ಯ ಮಾರ್ಗದಲ್ಲಿರುವ ಪಾರ್ಟಿಯ ಮುಖ್ಯ ಕಚೇರಿಯ ಮುಂಭಾಗದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ. ಈ ವೇಳೆ ಪಾದಾಚಾರಿಗಳು ಮತ್ತು ಸ್ಥಳದಲ್ಲಿದ್ದ ಪೊಲೀಸರು ತಡೆದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏನೇ ಬರಲಿ ನಾನಿಂದು ಇಲ್ಲಿಯೇ ನನ್ನ ಪ್ರಾಣವನ್ನು ತೆಗೆದುಕೊಳ್ಳುತ್ತೇನೆ. ಜೈಲಿಗೆ ಹಾಕಿದರೂ ಕೂಡ ನನ್ನನ್ನು ತಡೆಯಲು ಸಾಧ್ಯವಿಲ್ಲ. ನನಗೆ ನ್ಯಾಯ ಬೇಕಿದೆ ಎಂದು ಮಾಧ್ಯಮಗಳ ಮುಂದೆ ಠಾಕೂರ್ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಟಿಕೆಟ್ ಅನ್ನು ಪಕ್ಷವು ದೋಚಿಕೊಂಡು ಅದನ್ನು “ಹೊರಗಿನವರಿಗೆ” ನೀಡಿದೆ ಎಂದು ಠಾಕೂರ್ ಅವರು ಆರೋಪಿಸಿದ್ದಾರೆ. ನನ್ನ ವಿರುದ್ಧ ಯಾವುದೇ ಕ್ರಮಿನಲ್ ದಾಖಲೆಗಳಿಲ್ಲ. ಆದರೂ ನನಗೆ ಟಿಕೆಟ್ ಅನ್ನು ಪಕ್ಷವೂ ನಿರಾಕರಿಸಿದೆ ಎಂದು ಹೇಳಿದ್ದಾರೆ. ಠಾಕೂರ್ ಅವರು ಅಲಿಗಢದ ಛಾರಾ ಕ್ಷೇತ್ರದಿಂದ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ, ಪಕ್ಷದಿಂದ ಟಿಕೆಟ್ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ ಮೈತ್ರಿಕೂಟವು ಜನವರಿ 13 ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 29 ಸ್ಥಾನಗಳ ಪೈಕಿ ಎಸ್ಪಿ 10 ಮತ್ತು ಆರ್ಎಲ್ಡಿ 19 ಅಭ್ಯರ್ಥಿಗಳನ್ನು ಪಟ್ಟಿ ಮಾಡಿದೆ. ಎರಡು ಪಕ್ಷಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಉತ್ತರಪ್ರದೇಶದಲ್ಲಿ ಫೆ.10ರಿಂದ ಮಾ. 7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜ. 15ರ ವರೆಗೂ ರಾಜಕೀಯ ಪಕ್ಷಗಳಿಗೆ ಭೌತಿಕ ಪ್ರಚಾರ, ರೋಡ್ಶೋಗಳಿಗೆ ಅವಕಾಶ ಇರುವುದಿಲ್ಲ. ನಂತರ ಆ ಸಮಯದ ಪರಿಸ್ಥಿತಿಗೆ ಅನುಗಣವಾಗಿ ಹೊಸ ಸೂಚನೆಗಳನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. (ಏಜೆನ್ಸೀಸ್)
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಗೋರಖ್ಪುರ್ ಕ್ಷೇತ್ರದಿಂದ ಸಿಎಂ ಯೋಗಿ ಸ್ಪರ್ಧೆ
ಜನರೇ ಎಚ್ಚರ ನಿಮಗೂ ಹೀಗಾಗಬಹುದು…ಪಿಜ್ಜಾ ತಿನ್ನುವ ಆಸೆಯಿಂದ 11 ಲಕ್ಷ ರೂ. ಕಳೆದುಕೊಂಡು ವೃದ್ಧೆ!
ಇದು ಅತ್ಯಾಚಾರಿಗಳನ್ನು ಪ್ರೀತಿಸೋ ಸಮಾಜ: ನಟಿ ಪಾರ್ವತಿ ನೋವಿಗೆ ಗಾಯಕಿ ಚಿನ್ಮಯಿ ಸಾಂತ್ವಾನ