ಮುಂಬೈ: ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬಳಿಯಿರುವ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ (ಸೆ.4) ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತಿಮ ಕ್ರಿಯೆ ಮುಂಬೈನ ವೊರ್ಲಿಯಲ್ಲಿರುವ ಸ್ಮಶಾನದಲ್ಲಿಂದು ನಡೆದಿದೆ. ಈ ಘಟನೆಯ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಮಿಸ್ತ್ರಿ ಅವರು ಮರಣೋತ್ತರ ಪರೀಕ್ಷಾ ವರದಿ ಅವರ ಕೈ ಸೇರಿದೆ.
ಅಪಘಾತಕ್ಕೀಡಾದ ಮರ್ಸಿಡಿಸ್ ಕಾರನ್ನು ಮುಂಬೈನ ಖ್ಯಾತ ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ ಚಲಾಯಿಸುತ್ತಿದ್ದರು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. ಎದುರಿಗೆ ಹೋಗುತ್ತಿದ್ದ ಇನ್ನೊಂದು ವಾಹನವನ್ನು ಎಡಭಾಗದಿಂದ ಓವರ್ಟೇಕ್ ಮಾಡಲು ಹೋಗಿ ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ವೇಗದ ಹೊರತಾಗಿ, ಅಪಘಾತಕ್ಕೆ ಚಾಲಕನ ಆ ಕ್ಷಣದ ವಿವೇಚನಾ ಕೊರತೆಯೂ ಕಾರಣ ಎನ್ನಲಾಗಿದೆ. ರಸ್ತೆಯು ಮೂರು ಲೇನ್ಗಳಿಂದ ಎರಡು ಲೇನ್ಗೆ ಕಿರಿದಾಗಿದ್ದು, ಚಾಲಕನಿಗೆ ಸರಿಹೊಂದಿಸಲು ಸಾಧ್ಯವಾಗದೆ ಕಾರನ್ನು ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಮಾಧ್ಯಮ ವರದಿಗಳ ಪ್ರಕಾರ ಮಿಸ್ತ್ರಿ ಅವರು ಪ್ರಯಾಣಿಸುತ್ತಿದ್ದ ಹೆದ್ದಾರಿಯಲ್ಲಿ ವೇಗದ ಮಿತಿ ಗಂಟೆಗೆ 80 ಕಿ.ಮೀ ಇರಬೇಕಿತ್ತು. ಆದರೆ, ಅವರ ಮರ್ಸಿಡೆಸ್ ಬೆಂಜ್ ಕಾರು ಗಂಟೆಗೆ 130 ರಿಂದ 140 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ತಿಳಿದುಬಂದಿದೆ.
ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಮಿಸ್ತ್ರಿ ಮತ್ತು ಅವರ ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಅಪಘಾತದ ಸಂಭವಿಸಿದ ವೇಳೆ ಮುಂದಿನ ಸೀಟ್ಗೆ ಡಿಕ್ಕಿ ಹೊಡೆದಿದ್ದಾರೆ. ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿ ಪ್ರಕಾರ ಮಿಸ್ತ್ರಿ ಅವರ ಎದೆ, ತಲೆ, ತೊಡೆ ಮತ್ತು ಕುತ್ತಿಗೆಯಲ್ಲಿ ಬಹು ಮುರಿತಗಳು ಆಗಿವೆ. ಅಲ್ಲದೆ, ಅವರ ಪ್ರಮುಖ ಅಂಗಗಳಿಗೂ ಕೂಡ ಅನೇಕ ಗಾಯಗಳಾಗಿದ್ದು, ಆಂತರಿಕ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.
ಅಪಘಾತ ಪೀಡಿತ ಪ್ರದೇಶ ಎಂದು ತನಿಖೆಯಿಂದ ತಿಳಿದುಬಂದರೆ ಆ ರಸ್ತೆಯನ್ನು ಕಪ್ಪು ಚುಕ್ಕೆ (ಬ್ಲ್ಯಾಕ್ಸ್ಪಾಟ್) ಎಂದು ಘೋಷಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಬ್ಲ್ಯಾಕ್ ಸ್ಪಾಟ್ ಅಂದರೆ ಆ ಪ್ರದೇಶದ ರಸ್ತೆಯು ವಿನ್ಯಾಸ ದೋಷ ಹೊಂದಿದೆ ಎಂದರ್ಥ.
ಇದನ್ನೂ ಓದಿ: ಏನೂ ಕೆಲಸ ಮಾಡದೇ, ಸತತ ನಿದ್ದೆ ಮಾಡಿಕೊಂಡೇ ಐದು ಲಕ್ಷ ರೂ. ಬಹುಮಾನ ಗೆದ್ದ ಯುವತಿ!
ಅಪಘಾತಕ್ಕೀಡಾದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಅಹಮದಾಬಾದ್ನಿಂದ ಮುಂಬೈಗೆ ಬರುತ್ತಿದ್ದಾಗ ಡಿವೈಡರ್ಗೆ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಕಾರಿನಲ್ಲಿ ವೈದ್ಯೆ ಅನಾಹಿತಾ ಜತೆ ಅವರ ಪತಿ ಡೇರಿಯಸ್ ಪಾಂಡೋಲೆ ಹಾಗೂ ಡೇರಿಯಸ್ ಅವರ ಸಹೋದರ ಜಹಾಂಗೀರ್ ಪಾಂಡೋಲೆ ಪ್ರಯಾಣಿಸುತ್ತಿದ್ದರು. ದುರ್ಘಟನೆಯಲ್ಲಿ ಮಿಸ್ತ್ರಿ ಹಾಗೂ ಜಹಾಂಗೀರ್ ಪಾಂಡೋಲೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಕಾರು ಅಪಘಾತವಾಗಿದ್ದು ಹೇಗೆ? ತನಿಖೆಯಿಂದ ಸತ್ಯ ಬಯಲು…
ಭಾರಿ ಮಳೆಗೆ ಸಿಲಿಕಾನ್ ಸಿಟಿ ತತ್ತರ: ಬೆಂಗಳೂರು ಪ್ರವಾಹ ಕುರಿತು ತೆಲಂಗಾಣ ಸಚಿವ ಮಾಡಿದ ಟ್ವೀಟ್ ವೈರಲ್