ಗಜಪತಿ: ಒಡಿಶಾದ ಪರಲಖೆಮುಂಡಿಯ ಅರಣ್ಯ ಸಹಾಯಕ ಸಂರಕ್ಷಕ (ಎಸಿಎಫ್) ಅಧಿಕಾರಿ ಸೌಮ್ಯ ರಂಜನ್ ಮೊಹಪಾತ್ರ ನಿಗೂಢ ಸಾವು ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಒಡಿಶಾದ ಅಪರಾಧ ವಿಭಾಗದ ಪೊಲೀಸರು ಸೌಮ್ಯ ರಂಜನ್ ಪತ್ನಿ ಬಿದ್ಯಾಭಾರತಿ ಪಾಂಡಾ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದು, ಸ್ಫೋಟಕ ಸಂಗತಿಗಳು ಬಯಲಾಗಿವೆ.
ಮೃತ ಸೌಮ್ಯ ರಂಜನ್ ಬೆಂಕಿಯಲ್ಲಿ ಉರಿಯುತ್ತಿರುವಾಗ ಪತಿಯನ್ನು ರಕ್ಷಣೆ ಮಾಡಲು ಬಿದ್ಯಾ ಭಾರತಿ ಪಾಂಡಾ ಸ್ವಲ್ಪವೂ ಯತ್ನಿಸಿಲ್ಲ ಎಂದು ಒಡಿಶಾದ ಅಪರಾಧ ವಿಭಾಗದ ಎಡಿಜಿ ಸಂಜೀಬ್ ಪಾಂಡಾ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಂಶವನ್ನು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
ಈ ಘಟನೆ ಸೌಮ್ಯ ರಂಜನ್ ಅಧಿಕೃತ ನಿವಾಸದಲ್ಲಿ ನಡೆಯಿತು. ಇದೊಂದು ಹತ್ಯೆ ಅಥವಾ ಆತ್ಮಹತ್ಯೆ ಸಾವು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಇದೊಂದು ಆಕಸ್ಮಿಕ ಸಾವು. ಸೀಮೆಎಣ್ಣೆಯನ್ನು ಸುರಿದು ಪೇಪರ್ ಸುಡುವಾಗ ಕಾಲು ಜಾರಿ ಸೀಮೆಎಣ್ಣೆ ಮೇಲೆ ಬಿದ್ದಿದ್ದರಿಂದ ಸೀಮೆಎಣ್ಣೆ ಆತನ ಮೇಲೆ ಸುರಿದು ಬೆಂಕಿ ತಗುಲಿ ಮೃತಪಟ್ಟಿದ್ದಾನೆಂದು ಎಡಿಜಿ ಹೇಳಿದರು.
ಬಿದ್ಯಾ ಭಾರತಿ ಪಾಂಡಾ ಮತ್ತು ಪತಿ ಸೌಮ್ಯ ರಂಜನ್ ನಡುವೆ ವೈವಾಹಿಕ ಸಂಬಂಧ ಉತ್ತಮವಾಗಿರಲಿಲ್ಲ ಎಂದೆನಿಸುತ್ತದೆ. ಗಂಡನ ಮೇಲೆ ಸೀಮೆಎಣ್ಣೆ ಬಿದ್ದು ಬೆಂಕಿಯಲ್ಲಿ ಸುಡುತ್ತಿರುವಾಗ, ನೀರು ಚೆಲ್ಲುವುದಾಗಲಿ ಅಥವಾ ಆತನನ್ನು ಕಾಪಾಡುವ ಯಾವುದೇ ಪ್ರಯತ್ನವನ್ನು ಬಿದ್ಯಾ ಭಾರತಿ ಮಾಡಿಲ್ಲ ಎಂದು ಹೇಳಿದ್ದಾರೆ.
ಬಿದ್ಯಾ ಭಾರತಿ ವಿರುದ್ಧ 304 -ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮತ್ತು 285 (ಬೆಂಕಿ ಅಥವಾ ದಹಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷಿಸಿದ್ದು) ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ. ಬಿದ್ಯಾ ಭಾರತಿ ಎಸಗಿರುವುದು ಜಾಮೀನು ನೀಡಬಹುದಾದ ಅಪರಾಧವಾಗಿದ್ದು, ಅಪರಾಧ ಸಾಬೀತಾದಲ್ಲಿ ಗರಿಷ್ಠ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.
ಇನ್ನು ಒಡಿಶಾ ಅಪರಾಧ ವಿಭಾಗದ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ಗೆ ಮೃತ ಸೌಮ್ಯ ರಂಜನ್ ಕುಟುಂಬದ ಪರ ವಕೀಲ ಪಾರ್ಥಸಾರಥಿ ನಾಯಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಇದು ಆಕಸ್ಮಿಕವೇ ಆಗಿದ್ದರೆ, ಅದು ಯಾವ ಪರಿಸ್ಥಿತಿಯಲ್ಲಿ ನಡೆಯಿತು? ಆಕಸ್ಮಿಕವೇ ಆಗಿದ್ದರೆ, ಬೆಂಕಿ ಉರಿಯುತ್ತಿದ್ದರೂ ಬಿದ್ಯಾ ಭಾರತಿ ಸುಮ್ಮನೇ ನಿಂತಿದ್ಯಾಕೆ? ಇದೆಲ್ಲ ಕಣ್ಣೊರೆಸುವ ತಂತ್ರ. ಅಪರಾಧ ವಿಭಾಗದ ಪೊಲೀಸರು ಜನರನ್ನು ಭ್ರಮೆಗೆ ನೂಕುವ ಕೆಲಸ ಮಾಡುತ್ತಿದ್ದಾರೆಂದು ಪಾರ್ಥಸಾರಥಿ ಪೊಲೀಸರ ನಡೆಯನ್ನೇ ಅನುಮಾನಿಸಿದ್ದಾರೆ.
ಇನ್ನು ಸೌಮ್ಯ ರಂಜನ್ ಕುಟುಂಬದ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಇತ್ತಿಚೆಗಷ್ಟೇ ಒಡಿಶಾ ಹೈಕೋರ್ಟ್ ಮೆಟ್ಟಿಲೇರಿದೆ. ಸೌಮ್ಯ ರಂಜನ್ ಕುಟುಂಬ ಬಿದ್ಯಾಭಾರತಿಯ ಹೆಸರನ್ನು ಉಲ್ಲೇಖಿಸಿದ್ದು, ಮಗನ ಸಾವಿನ ಹಿಂದೆ ಪತ್ನಿ ಬಿದ್ಯಾಭಾರತಿ ಕೈವಾಡ ಇದೆ. ಮಗನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬಿದ್ಯಾಭಾರತಿಗು ಮತ್ತು ಡಿಎಫ್ಒ ಸಂಗ್ರಾಮ್ ಕೇಸರಿಗೂ ಅನೈತಿಕ ಸಂಬಂಧ ಇತ್ತೆಂದು ಸೌಮ್ಯ ರಂಜನ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೀಗಾಗಿ ಪೊಲೀಸ್ ಎಫ್ಐಆರ್ನಲ್ಲಿ ಬಿದ್ಯಾಭಾರತಿ ಹೆಸರನ್ನು ಸಹ ಸೇರಿಸಲಾಗಿದೆ.
ಈ ಪ್ರಕರಣದಲ್ಲಿ ಸೌಮ್ಯ ರಂಜನ್ ಪತ್ನಿ ಬಿದ್ಯಾಭಾರತಿ, ಗಜಪತಿ ಡಿಎಫ್ಒ ಸಂಗ್ರಾಮ್ ಕೇಸರಿ ಮತ್ತು ಅಡುಗೆಭಟ್ಟ ಸೇರಿದಂತೆ ಒಟ್ಟು 6 ಮಂದಿಯನ್ನು ಈಗಾಗಲೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದುವರೆಗೂ 25 ಮಂದಿ ಹೇಳಿಕೆಯನ್ನು ದಾಖಲಿಸಲಾಗಿದೆ. ಆದರೆ, ಇದುವರೆಗೂ ಸೌಮ್ಯ ರಂಜನ್ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಇನ್ನು ವಿಚಾರಣೆ ನಡುವೆಯೇ ಪರಲಖೆಮುಂಡಿಯ ಪೊಲೀಸ್ ಗಜಪತಿ ಡಿಎಫ್ಒ ಸಂಗ್ರಾಮ್ ಕೇಸರಿಗೆ ಈ ಪ್ರಕರಣದಲ್ಲಿ ಕ್ಲೀನ್ಚಿಟ್ ನೀಡಿದ್ದಾರೆ. ಕರೆ ವಿವರಣೆಯನ್ನು ವಿಶ್ಲೇಷಿಸಿದರೆ ಈ ಪ್ರಕರಣಕ್ಕೂಮ ಡಿಎಫ್ಒಗೂ ಸಂಬಂಧ ಇಲ್ಲ ಎಂಬುದು ತಿಳಿದುಬರುತ್ತದೆ ಎಂದು ಗಜಪತಿ ಎಸ್ಪಿ ತಪಾನ್ ಕುಮಾರ್ ಪಾಟ್ನಾಯಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೂ, ಪೊಲೀಸರು ಕ್ಲೀನ್ ಚಿಟ್ ನೀಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಸೌಮ್ಯ ರಂಜನ್ ಕುಟುಂಬ ಬಲವಾದ ಆರೋಪ ಮಾಡಿದ್ದು, ಡಿಎಫ್ಒ ಮತ್ತು ಬಿದ್ಯಾಭಾರತಿ ನಡುವೆ ಅನೈತಿಕ ಸಂಬಂಧ ಇತ್ತು. ಇದರಿಂದಲೇ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿತ್ತು. ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದು, ಎಫ್ಐಆರ್ನಲ್ಲಿ ಡಿಎಫ್ಒ ಮತ್ತು ಬಿದ್ಯಾಭಾರತಿಯನ್ನು ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.
ಅಂದಹಾಗೆ ಎಸಿಎಫ್ ಸೌಮ್ಯ ರಂಜನ್ ಅವರು ಜುಲೈ 11ರಂದು ಪರಲಖೆಮುಂಡಿಯ ತಮ್ಮ ಕ್ವಾಟ್ರಸ್ನಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಕೂಡ ಆಸ್ಪತ್ರೆಗೆ ದಾಖಲಿಸಿದ ದಿನದ ಬೆನ್ನಲ್ಲೇ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. (ಏಜೆನ್ಸೀಸ್)
ಅರಣ್ಯಾಧಿಕಾರಿ ಸಾವು ಪ್ರಕರಣ: ಪತ್ನಿಯ ಅಕ್ರಮ ಸಂಬಂಧದ ಮುಖವಾಡ ಕಳಚಲು ಪೊಲೀಸರ ಮೆಗಾ ಪ್ಲಾನ್..!
ಅರಣ್ಯಾಧಿಕಾರಿ ಸಾವಿನ ಕೇಸ್: ಪತ್ನಿಯ ಅಕ್ರಮ ಬಯಲಿಗೆಳೆಯಲು ಮಾಡಿದ್ದ ಸುಳ್ಳು ಪತ್ತೆ ಪರೀಕ್ಷೆಯ ವರದಿ ಔಟ್
ಸೊಸೆಯನ್ನೇಕೆ ಇನ್ನು ಬಂಧಿಸಿಲ್ಲ? ನಿಗೂಢ ಸಾವಿಗೀಡಾದ ಅರಣ್ಯಾಧಿಕಾರಿ ತಂದೆಯ ಕಣ್ಣೀರು..!