ಭುವನೇಶ್ವರ್: ಒಡಿಶಾದಲ್ಲಿ ಭಾರೀ ಸುದ್ದಿಯಾಗಿದ್ದ ಸಾಫ್ಟ್ವೇರ್ ಇಂಜಿನಿಯರ್ ಶ್ವೇತಾ ಉತ್ಕಲ್ ಕುಮಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ತಿಂಗಳ ಬಳಿಕ ಆಕೆಯ ಬಾಯ್ಫ್ರೆಂಡ್ ಸೌಮ್ಯಜಿತ್ ಮೊಹಪಾತ್ರನನ್ನು ಇಂದು (ಫೆ.16) ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಭುವನೇಶ್ವರದ ಚಂದ್ರಶೇಖರ್ಪುರ್ ಠಾಣಾ ಪೊಲೀಸರು ಸೌಮ್ಯಜಿತ್ನನ್ನು ಬಂಧಿಸಿದ್ದಾರೆ. ಶ್ವೇತಾ ಬರೆದಿದ್ದ ಡೆತ್ ನೋಟ್ ಆಧರಿಸಿ ಬಾಯ್ಫ್ರೆಂಡ್ನನ್ನು ಬಂಧಿಸಲಾಗಿದೆ. ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ತಿರಸ್ಕರಿಸಿದ ಬಳಿಕ ಇಂದು ಬೆಳಗ್ಗೆ 4.30ರ ಸುಮಾರಿಗೆ ಸಂಬಲ್ಪುರ್ನ ಬನ್ಸಿಧಾರ್ ನಗರದಲ್ಲಿರುವ ಮನೆಯಲ್ಲಿ ಸೌಮ್ಯಜಿತ್ನನ್ನು ಬಂಧನ ಮಾಡಲಾಗಿದ್ದು, ಆತನ ಪ್ರಕರಣವನ್ನು ಭುವನೇಶ್ವರ್ಗೆ ವರ್ಗಾಯಿಸಲಾಗುತ್ತಿದೆ.
ಭದ್ರಕ್ ಜಿಲ್ಲೆಯ ನಿವಾಸಿಯಾಗಿರುವ ಶ್ವೇತಾ, ಭುವನೇಶ್ವರದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಭುವನೇಶ್ವರದ ಇನ್ಫೋಸಿಟಿ ಪ್ರದೇಶದ ಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದಳು. ಕಳೆದ ವರ್ಷ ಆಗಸ್ಟ್ 19ರ ಶುಕ್ರವಾರ ರಾತ್ರಿ ಶ್ವೇತಾಳ ಕುಟುಂಬಸ್ಥರು ಆಕೆಯನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ, ಸಾಧ್ಯವಾಗದ ನಂತರ, ಆಕೆಯ ಪಾಲಕರು ಚಂದ್ರಶೇಖರ್ಪುರ ಪೊಲೀಸರ ಸಹಾಯವನ್ನು ಕೋರಿದರು
ಶ್ವೇತಾಳ ಮಾಹಿತಿಯನ್ನು ಪಡೆದು ಆಕೆ ನೆಲೆಸಿದ್ದ ಅಪಾರ್ಟ್ಮೆಂಟ್ನ ಫ್ಲ್ಯಾಟ್ಗೆ ತೆರಳಿ, ಒಳಗಡೆಯಿಂದ ಲಾಕ್ ಆಗಿದ್ದ ಬಾಗಿಲನ್ನು ಮುರಿದು ಒಳಗಡೆ ಪ್ರವೇಶಿಸಿದಾಗ ಶ್ವೇತಾಳ ಮೃತದೇಹ ಸೀಲಿಂಗ್ ಫ್ಯಾನ್ನಲ್ಲಿ ನೇತಾಡುವುದನ್ನು ಪೊಲೀಸರು ನೋಡಿದರು.
ಶ್ವೇತಾಳ ಸಾವಿನ ಕುರಿತು ಮಾತನಾಡಿದ್ದ ಆಕೆಯ ತಂದೆ, ಸೌಮ್ಯಜಿತ್ ನನ್ನ ಮಗಳೊಂದಿಗೆ 2018ರಲ್ಲಿ ಸಾಫ್ಟ್ವೇರ್ ಕಂಪನಿಗೆ ಸೇರಿಕೊಂಡಿದ್ದನು. ಆದರೆ, ಆತ ಉದ್ಯೋಗವನ್ನು ಬಿಟ್ಟು ಭುವನೇಶ್ವರದ ಇನ್ಸ್ಟಿಟ್ಯೂಟ್ನಲ್ಲಿ ತನ್ನ ಮ್ಯಾನೇಜ್ಮೆಂಟ್ ಪದವಿಯನ್ನು ಓದುತ್ತಿದ್ದಾನೆ. ಅವನು ನನ್ನ ಮಗಳಿಗೆ ತುಂಬಾ ಕಿರುಕುಳ ನೀಡಿದ್ದಾನೆ. ಹೀಗಾಗಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು.
ಸೌಮ್ಯಜಿತ್ ಮೊಹಪಾತ್ರ ವಿರುದ್ಧ ಶ್ವೇತಾ ಕುಟುಂಬ ದೂರು ದಾಖಲಿಸಿತ್ತು. ಶ್ವೇತಾ ಜೊತೆಗಿನ ತನ್ನ ಸಂಬಂಧವನ್ನು ಕಡಿದುಕೊಂಡ ಬಳಿಕ ಆಕೆಯ ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಕ್ಕೆ ಹೆದರಿ, ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬ ದೂರಿನಲ್ಲಿ ಉಲ್ಲೇಖಿಸಿತ್ತು.
ಡೈರಿಯಲ್ಲಿ ಸೌಮ್ಯಜಿತ್ ನಿಜ ಬಣ್ಣ
ಫ್ಲ್ಯಾಟ್ನಲ್ಲಿ ದೊರೆತ ಶ್ವೇತಾಳ ಮೊಬೈಲ್ ಮತ್ತು ಡೈರಿಯಿಂದ ಸೌಮ್ಯಜಿತ್ ಜೊತೆಗಿನ ಆಕೆಯ ಸಂಬಂಧದ ಬಗ್ಗೆ ಪೊಲೀಸರಿಗೆ ತಿಳಿದಿತ್ತು. ಸಾವಿಗೂ ಮುನ್ನ ಶ್ವೇತಾ 15 ಬಾರಿ ಸೌಮ್ಯಜಿತ್ಗೆ ಕರೆ ಮಾಡಿದ್ದಾಳೆ. ಆದರೆ, ಆತ ಕರೆ ಸ್ವೀಕರಿಸಿಲ್ಲ. ಇಬ್ಬರ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ತುಣುಕು ಸಹ ತದನಂತರದಲ್ಲಿ ಬೆಳಕಿಗೆ ಬಂದಿದೆ. ನನ್ನ ಜೀವನದಿಂದ ಆಚೆ ಹೋಗುವಂತೆ ಸೌಮ್ಯಜಿತ್ ಕೇಳಿರುವುದು ಆಡಿಯೋದಲ್ಲಿದೆ. ಇನ್ನು ಇಬ್ಬರ ಮದುವೆಗೆ ಮಾತುಕತೆಯು ನಡೆದಿತ್ತಂತೆ. ಸೌಮ್ಯಜಿತ್ ಕುಟುಂಬದ ಜೊತೆ ಮದುವೆ ಬಗ್ಗೆ ಮಾತನಾಡಿದಾಗ ಸೌಮ್ಯಜಿತ್ ತಾಯಿ 30 ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದರು ಎಂದು ಶ್ವೇತಾಳ ಕುಟುಂಬ ಆರೋಪ ಮಾಡಿದೆ. (ಏಜೆನ್ಸೀಸ್)
ದುರಂತ ಅಂತ್ಯ ಕಂಡ ಟೆಕ್ಕಿ: ಸುಂದರಿಯ ಡೈರಿ-ಮೊಬೈಲ್ನಲ್ಲಿರೋ ಬಾಯ್ಫ್ರೆಂಡ್ ರಹಸ್ಯದ ಹಿಂದೆ ಬಿದ್ದ ಪೊಲೀಸರು!
ಅಪಘಾತದಲ್ಲಿ ಎಸ್ಐ, ಪೇದೆ ಸಾವು ಪ್ರಕರಣ: ಹುತಾತ್ಮ ಖಾಕಿ ಕುಟುಂಬಕ್ಕಿಲ್ಲ ಬಿಡಿಗಾಸು, ಫಲ ಕೊಡದ ಸಿಎಂ ಭರವಸೆ
ಟ್ರಾಫಿಕ್ ಜಾಮ್: ವಿಶ್ವದಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ 2ನೇ ಸ್ಥಾನ! ಲಂಡನ್ ಮೊದಲು