ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್ ಕೆ. ಎಂಬುವರನ್ನು ಬಂಧಿಸಲಾಗಿದೆ.
ಹರೀಶ್, ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದದಿದೆ. 2019ನೇ ಬ್ಯಾಚ್ನ ಪಿಎಸ್ಐ ಆಗಿರುವ ಹರೀಶ್, ನೇಮಕಾತಿ ವಿಭಾಗದ ಎಫ್ಡಿಎ ಜೊತೆಗೆ ಸಂಪರ್ಕ ಹೊಂದಿದ್ದರು. ಹರೀಶ್, ನಿವೃತ್ತ ಎಎಸ್ಐ ಕೆಂಪಣ್ಣ ಅವರ ಹಿರಿಯ ಪುತ್ರ. ಅವರ ಸಹೋದರ ಪೊಲೀಸ್ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಹರೀಶ್ ಪಿಎಸ್ಐ ಆಗುವ ಮುನ್ನ ಎಫ್ಡಿಎ ಆಗಿ ಕೆಲಸ ನಿರ್ವಹಿಸಿದ್ದ. ಪಿಎಸ್ಐ ಆಗಿದ್ದುಕೊಂಡೇ ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿಎಸ್ಐ ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ನಡುವೆ ಮಧ್ಯವರ್ತಿಯಾಗಿ ಅಕ್ರಮ ಎಸಗುತ್ತಿದ್ದರು ಎಂಬ ಎಂಬ ಆರೋಪ ಹರೀಶ್ ಮೇಲಿದೆ.
ಕಳೆದ ಸೋಮವಾರವೇ ಹರೀಶ್ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದ ಬಳಿಕ ಕೋರ್ಟ್ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದು ಶಾಕಿಂಗ್ ಸಂಗತಿಯೆಂದರೆ, ಈಗ ಬಂಧನವಾಗಿರುವ ಹರೀಶ್ 2019ನೇ ಬ್ಯಾಚ್ ಪರೀಕ್ಷೆಯಲ್ಲಿ ಹಣ ಕೊಟ್ಟು ಆಯ್ಕೆಯಾಗಿರಬಹುದಾ ಎಂಬ ಅನುಮಾನವೂ ಮೂಡಿದೆ. ಆ ನಿಟ್ಟಿನಲ್ಲೂ ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹರೀಶ್ ಜತೆಗೆ ಎಷ್ಟು ಮಂದಿ ಅಭ್ಯರ್ಥಿಗಳು ಸಂಪರ್ಕವನ್ನು ಹೊಂದಿದ್ದರು ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಬೆಂಗಳೂರಿನಲ್ಲೇ 10ಕ್ಕೂ ಹೆಚ್ಚು ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದರಲ್ಲಿ ನೇಮಕಾತಿ ವಿಭಾಗದ ಸಿಬ್ಬಂದಿಯೂ ಇದ್ದಾರೆ ಹಾಗೂ ಪರೀಕ್ಷೆ ಬರೆದಂತಹ ಅಭ್ಯರ್ಥಿಗಳು ಸೇರಿದ್ದಾರೆ. ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯು ಇದೆ. (ದಿಗ್ವಿಜಯ ನ್ಯೂಸ್, ಬೆಂಗಳೂರು)
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೂರನೇ ದಿನದ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ
ಮತ್ತೊಂದು ದಾಖಲೆ ಬರೆದ ಚಿನ್ನದ ಹುಡುಗ ನೀರಜ್ ಜೋಪ್ರಾ: ಫಿನ್ಲ್ಯಾಂಡ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ