ಬೆಂಗಳೂರು: ದೂರು ನೀಡಲು ಹೋದ ದೂರುದಾರನ ಮೇಲೆಯೇ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣಾ ಪೊಲೀಸರ ವಿರುದ್ಧ ಕೇಳಿಬಂದಿದೆ.
ದುದ್ದನಹಳ್ಳಿ ಗ್ರಾಮದ ಯುವಕನೊರ್ವನ ಬಗ್ಗೆ ಗ್ರಾಮದ ಸಮುದಾಯದ ಭವನದ ಗೋಡೆಗಳ ಮೇಲೆ ಅನಾಮಿಕರಿಂದ ಅಸಭ್ಯ ಬರಹಗಳನ್ನು ಬರೆಯಲಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಸಂತ್ರಸ್ತ ನಿಖಿಲ್, ತಮ್ಮ ಆಪ್ತರ ಜೊತೆಯಲ್ಲಿ ಹೋಗಿದ್ದ. ಈ ವೇಳೆ ವಿಶ್ವನಾಥಪುರ ಪೊಲೀಸ್ ಠಾಣೆಯ ಮುಖ್ಯಪೇದೆ ಪುಟ್ಟರಾಜು ಎಂಬುವರು ದೂರುದಾರನ ಮೇಲೆಯೇ ಅವಾಜ್ ಹಾಕಿದ್ದಾರೆಂದು ಹೇಳಲಾಗಿದೆ.
ನಾನು ದೂರು ತೆಗೆದುಕೊಳ್ಳುವುದಿಲ್ಲ, ಅದೇನು ಮಾಡ್ಕೋತೀಯಾ ಮಾಡ್ಕೊ ಹೋಗು ಎಂದು ಪೊಲೀಸಪ್ಪ ಅವಾಜ್ ಹಾಕಿದ್ದು, ಈ ವೇಳೆ ದೂರುದಾರರು ತಕ್ಷಣ ವಿಡಿಯೋ ಚಿತ್ರೀಕರಣಕ್ಕೆ ಮುಂದಾದಾಗ ಠಾಣೆಯ ಪೊಲೀಸರು ದೂರುದಾರರ ಮೇಲೆ ದೌರ್ಜನ್ಯ ಮಾಡಿ ಬೆದರಿಕೆ ಹಾಕಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ಚನಾಥಪುರ ಪೊಲೀಸ್ ಠಾಣೆಯಲ್ಲಿ ಸೊಂಬೇರಿ ಪೊಲೀಸರಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ದೂರು ತೆಗೆದುಕೊಳ್ಳುವ ಬದಲು, ದೂರು ಕೊಡಲು ಬಂದವರನ್ನೇ ಗದರಿಸಿ, ವಾಪಸ್ ಕಳುಹಿಸುವ ಕೆಟ್ಟ ಪ್ರವೃತ್ತಿಯನ್ನು ವಿಶ್ವನಾಥಪುರ ಠಾಣಾ ಪೊಲೀಸರು ಬೆಳೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಎಲ್ಲ ಪೌರಕಾರ್ವಿುಕರ ಸೇವೆ ಕಾಯಂ: ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅನ್ವಯ; ಸಿಎಂ ಭರವಸೆ