ತಿರುಪತಿ: ಠಾಣೆಯಲ್ಲಿದ್ದ 75 ಲಕ್ಷ ಹಣದಲ್ಲಿ 15 ಲಕ್ಷ ರೂಪಾಯಿ ಹಣದ ಜತೆಗೆ ಪರಾರಿಯಾಗಿದ್ದ ಕರ್ನೂಲ್ ತಾಲೂಕು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ನನ್ನು ಅಮಾನತು ಮಾಡಿದ್ದು, ತನಿಖೆಯ ಬಳಿಕ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸರ್ಕಲ್ ಇನ್ಸ್ಪೆಕ್ಟರ್ ಕಂಬಗಿರಿ ರಾಮುಡು, ನಾಲ್ಕು ದಿನಗಳ ಹಿಂದೆ ನಗರದ ಹೊರವಲಯದ ಪಂಚಲಿಂಗಲ ಚೆಕ್ಪೋಸ್ಟ್ ಬಳಿ ತಮಿಳುನಾಡು ಮೂಲದ ಸತೀಶ್ ಬಾಲಕೃಷ್ಣನ್ ಎಂಬುವರಿಗೆ ಸೇರಿದ ವಾಹನವೊಂದರ ತಪಾಸಣೆ ಮಾಡುವಾಗ 75 ಲಕ್ಷ ರೂಪಾಯಿ ಹಣವನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದರು.
ವಶಕ್ಕೆ ಪಡೆದ ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಸರ್ಕಲ್ ಇನ್ಸ್ಪೆಕ್ಟರ್ ರಾಮುಡು, ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ 15 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಸತೀಶ್ ಬಾಲಕೃಷ್ಣನ್ ಗುರುವಾರ ತಡರಾತ್ರಿ ಕರ್ನೂಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿತ್ತು.
ಸತೀಶ್ ಬಾಲಕೃಷ್ಣನ್ ಅವರು ತಮಿಳುನಾಡಿನ ತಿರ್ಪ್ಪುರ್ ಮೂಲದವರು. ಭಾನುವಾರ ಖಾಸಗಿ ಬಸ್ ಒಂದರಲ್ಲಿ ಹೈದರಾಬಾದ್ನಿಂದ ಮದುರೈಗೆ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ಪಂಚಲಿಂಗಲ ಚೆಕ್ಪೋಸ್ಟ್ ಬಳಿ ಬಸ್ ತಡೆದು ತಪಾಸಣೆ ಮಾಡುವಾಗ ಸತೀಶ್ ಬಳಿ 75 ಲಕ್ಷ ರೂ. ಭಾರೀ ಮೊತ್ತ ಇದ್ದಿದ್ದರಿಂದ ನಗದು ಸಮೇತ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆಂದು ಕರ್ನೂಲ್ ತಾಲೂಕು ಪೊಲೀಸರಿಗೆ ಒಪ್ಪಿಸಲಾಯಿತು.
ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಸತೀಶ್ ಬಳಿಯಿತ್ತು. ಆದರೂ, ಸರ್ಕಲ್ ಇನ್ಸ್ಪೆಕ್ಟರ್ 15 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸತೀಶ್ ಕೊಡಲು ನಿರಾಕರಿಸಿದಾಗ, ತಮ್ಮ ಸರ್ಕಾರಿ ಸಿಮ್ ಅನ್ನು ಕಳಚಿ ಪೊಲೀಸ್ ಠಾಣೆಯಲ್ಲೇ ಇಟ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಅವರು ಕೆಲಸ ಮಾಡುವ ಅದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಸರ್ಕಲ್ ಇನ್ಸ್ಪೆಕ್ಟರ್ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು.
ಓರ್ವಕಲ್ಲುವಿನ ಗೌರಿಶಂಕರ್ ಮೂಲಕ ಸಿಐನಿಂದ ಮಾಮೂಲಿ ಅವ್ಯವಹಾರ ನಡೆದಿರುವುದು ಬಯಲಾಗಿದೆ. ಹೈದರಾಬಾದ್ನಿಂದ ಚಂದ್ರಶೇಖರ್ ರೆಡ್ಡಿ ಮತ್ತು ಕರ್ನೂಲ್ನಿಂದ ಭಾಸ್ಕರ್ ರೆಡ್ಡಿ ಸಿಐಗೆ ಬೆಂಬಲವನ್ನು ನೀಡಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರೂ ಪರಾರಿಯಾಗಿದ್ದಾರೆ. ಕಂಬಗಿರಿ ರಾಮುಡಿಗಾಗಿ ಪೊಲೀಸರು ವಿಶೇಷ ತಂಡಗಳ ಮೂಲಕ ಗಸ್ತು ತಿರುಗುತ್ತಿದ್ದಾರೆ
ಕರ್ನೂಲ್ ಎಸ್ಪಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರು ತನಿಖೆಗೆ ಆದೇಶಿಸಿದ್ದಾರೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಸರ್ಕಲ್ ಇನ್ಸ್ಪೆಕ್ಟರ್ನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿದ್ದು, ತನಿಖೆ ಮುಗಿದ ಬಳಿಕ ಕಠಿಣ ಶಿಕ್ಷೆಗೆ ಸಿಐ ಗುರಿಯಾಗುವ ಸಾಧ್ಯತೆ ದಟ್ಟವಾಗಿದೆ. (ಏಜೆನ್ಸೀಸ್)
ಪಬ್ಲಿಕ್ ಟಾಯ್ಲೆಟ್ ಅನ್ನೇ ಕದ್ದ ಆಟೋ ಚಾಲಕ! ಮಾರಾಟದ ಮೊತ್ತ ಕೇಳಿದ್ರೆ ಶಾಕ್ ಆಗ್ತೀರಾ
ನನ್ನ ಪತಿಯ ಸಿನಿಮಾ ಅಂತ ಹೊಗಳ್ತಿಲ್ಲ… ರಿಲೀಸ್ಗೂ ಮುನ್ನ ‘ಕೆಜಿಎಫ್ 2’ ನೋಡಿದ ರಾಧಿಕಾ ಹೇಳಿದ್ದೇನು?
1 ರೂ. ನಾಣ್ಯಗಳನ್ನೇ ನೀಡಿ ಡ್ರೀಮ್ ಬೈಕ್ ಖರೀದಿಸಿದ ಯುವಕ! ಹಣ ಎಣಿಸಲು ತೆಗೆದುಕೊಂಡ ಸಮಯವೆಷ್ಟು?