ಯಲಬುರ್ಗಾ: ಸರ್ಕಾರದಿಂದ ಮಂಜೂರಾಗಿರುವ ಮನೆಗಳನ್ನು ಅರ್ಹರಿಗೆ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ಗೆದಗೇರಿ ಗ್ರಾಪಂ ವ್ಯಾಪ್ತಿಯ ದಲಿತ ಮುಖಂಡರು ಗುರುವಾರ ತಾಪಂ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ ಸಹಾಯಕ ನಿರ್ದೇಶಕ ನಿಂಗನಗೌಡಗೆ ಮನವಿ ಸಲ್ಲಿಸಿದರು.
ಮುಖಂಡರಾದ ನಾಗರಾಜ ತಲ್ಲೂರು, ಬಸವರಾಜ ನಡುಲಕೇರಿ ಮಾತನಾಡಿ, ಗೆದಗೇರಿ ಗ್ರಾಪಂಗೆ ಸರ್ಕಾರದಿಂದ ಮಂಜೂರಾಗಿರುವ ವಸತಿ ಯೋಜನೆಯ ಮನೆಗಳನ್ನು ನ್ಯಾಯಸಮ್ಮತವಾಗಿ ಗ್ರಾಪಂ ವ್ಯಾಪ್ತಿಯ ಎಲ್ಲ ಬಡ ದಲಿತರಿಗೆ ಹಂಚಿಕೆ ಮಾಡುವುದು ಬಿಟ್ಟು ಗೆದಗೇರಿ, ತಲ್ಲೂರು ತಾಂಡಾಗಳಿಗೆ ಆದ್ಯತೆ ನೀಡಿದ್ದು ಖಂಡನೀಯ. ಮೂಲ ಪರಿಶಿಷ್ಟ ಜಾತಿಯ ಫಲಾನುಭವಿಗಳನ್ನು ಆಯ್ಕೆ ಮಾಡದೇ ನಿರ್ಲಕ್ಷೃವಹಿಸಿದ್ದಾರೆ. ಕೂಡಲೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಈಗಾಗಲೇ ಆಯ್ಕೆಯಾದವನ್ನು ಕೈಬಿಡುವಂತೆ ತಕರಾರು ಅರ್ಜಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿ ಪರಿಹಾರ ನೀಡದಿದ್ದರೆ ಮತ್ತೆ ತಾಪಂ, ಗ್ರಾಪಂ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಮುಖಂಡರಾದ ನಾಗರಾಜ ಹಾದಿಮನಿ, ಮಹಾಂತೇಶ ಹರಿಜನ್, ಹನುಮಪ್ಪ ಹರಿಜನ, ಶಂಕರಪ್ಪ, ಚಿದಾನಂದ, ಪರಸಪ್ಪ, ಬಾಲಪ್ಪ, ವೆಂಕಟೇಶ ಹಿರೇಮನಿ, ಮಲ್ಲಪ್ಪ, ರಮೇಶ, ವಿರುಪಾಕ್ಷಪ್ಪ, ಈರಪ್ಪ, ದೇವಪ್ಪ ಇತರರಿದ್ದರು.