ಮುಂಡಗೋಡ: ಅಧಿಕಾರಿಗಳು ಸರ್ಕಾರದ ಆದೇಶದಂತೆ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಆದೇಶ ಧಿಕ್ಕರಿಸಿದರೆ ಶಿಕ್ಷೆ ಅನುಭವಿಸುತ್ತೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಎಚ್ಚರಿಸಿದರು.
ಪಪಂನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫಣಿರಾಜ ಹದಳಗಿ ಮಾತನಾಡಿ, ದೇಶಪಾಂಡೆನಗರದಲ್ಲಿ ಸ್ಲಂ-ಬೋರ್ಡ್ನಿಂದ ಬೇಕಾಬಿಟ್ಟಿಯಾಗಿ ಅನರ್ಹರಿಗೆ ಮನೆ ನೀಡಲಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ ಆಕ್ಷೇಪಿಸಿದಾಗ ಪರಸ್ಪರರಲ್ಲಿ ವಾಗ್ವಾದ ನಡೆಯಿತು. ಆಗ ಸಚಿವರು ಮಧ್ಯೆಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪಟ್ಟಣ ವ್ಯಾಪ್ತಿಯಲ್ಲಿ ಸ್ಲಂ-ಬೋರ್ಡ್ನ ಜಿ+3 ಮಾದರಿಯ 906 ಮನೆಗಳು ಮಂಜೂರಾಗಿವೆ. ಒಟ್ಟು 1136 ಜನರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಫಲಾನುಭವಿಗಳು ಕೂಡ ಹಣ ನೀಡಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು. ಅದಕ್ಕೆ ಸದಸ್ಯರು ಫಲಾನುಭವಿಗಳಿಗೆ ಹಣ ನೀಡಲು ಕಷ್ಟವಾಗುತ್ತದೆ ಎಂದರು. ಪ್ರತಿಕ್ರಿಯಿಸಿದ ಸಚಿವರು, ಫಲಾನುಭವಿಗಳಿಗೂ ಜವಾಬ್ದಾರಿ ಬೇಕು. ಉಚಿತವಾಗಿ ನೀಡಲು ಆಗುವುದಿಲ್ಲ. ಎಷ್ಟು ಹಣ ನೀಡಬೇಕೆಂಬ ಬಗ್ಗೆ ಫಲಾನುಭವಿಗಳಿಂದ ಅಭಿಪ್ರಾಯ ಕೇಳಿ 10 ದಿನದೊಳಗೆ ತಿಳಿಸುವಂತೆ ಪಪಂ ಸದಸ್ಯರಿಗೆ ಸೂಚಿಸಿದರು. ಜಿ+3 ಮಾದರಿ ಮನೆ ವಿಚಾರ ಇನ್ನು 15 ದಿನಗಳೊಳಗಾಗಿ ನಿರ್ಣಯವಾಗಬೇಕು ಎಂದರು.
ಪಟ್ಟಣದಲ್ಲಿ 24ಗಿ7 ಕುಡಿಯುವ ನೀರು ಪೂರೈಕೆ ಕಾಮಗಾರಿ ಸಂಪೂರ್ಣ ವಿಫಲವಾಗಿದೆ ಎಂದು ಸದಸ್ಯರು ದೂರಿದರು. ಆಗ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಮುಖ್ಯಾಧಿಕಾರಿ ಸಂಗನಬಸಯ್ಯ ಅವರಿಂದ ಪ್ರಗತಿ ಕುರಿತು ಮಾಹಿತಿ ಪಡೆದರು. ಸಭೆಯ ನಂತರ ಸಚಿವರನ್ನು ಸನ್ಮಾನಿಸಲಾಯಿತು. ಜಿಪಂ ಸದಸ್ಯ ಎಲ್.ಟಿ. ಪಾಟೀಲ, ಪಪಂ ಅಧ್ಯಕ್ಷೆ ರೇಣುಕಾ ರವಿ ಹಾವೇರಿ, ಉಪಾಧ್ಯಕ್ಷ ಮಂಜುನಾಥ ಹರಮಲಕರ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ, ಸದಸ್ಯರು, ಸಿಬ್ಬಂದಿ ಇದ್ದರು
ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ
ದೇಶದಲ್ಲಿ ಕೋವಿಡ್ನ ಭಯ ದೂರವಾಗಿದೆ. ದೇಶದ ವಿಜ್ಞಾನಿಗಳು ಲಸಿಕೆ ಕಂಡುಹಿಡಿದಿದ್ದಾರೆ. ಅದನ್ನು ಭಾರತಕ್ಕಷ್ಟೇ ಅಲ್ಲದೆ, ವಿಶ್ವಕ್ಕೇ ಲಸಿಕೆ ಪೂರೈಸುವಂತಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮುಂಡಗೋಡ ಪಟ್ಟಣ ಪಂಚಾಯಿತಿ ಟೌನ್ಹಾಲ್ನಲ್ಲಿ ಏರ್ಪಡಿಸಿದ್ದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ತಾಲೂಕಿನಲ್ಲಿ ಈ ಹಿಂದೆ 6095 ಬಾಂಡ್ಗಳನ್ನು ವಿತರಿಸಲಾಗಿದೆ. ಈ ಬಾರಿ
ಕೋವಿಡ್ನಿಂದ ವಿಳಂಬವಾಗಿದೆ ಎಂದರು.
ವಾಕರಾರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ, 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಭಾಗ್ಯಲಕ್ಷ್ಮೀ ಯೊಜನೆಯಲ್ಲಿ ಮೊದಲನೇ ಹೆಣ್ಣು ಮಗುವಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡುವ ಜತೆಗೆ ಹಲವಾರು ಯೊಜನೆಗಳನ್ನು ತಂದಿದ್ದರು. ಪುರುಷರ ಹೆಸರಲ್ಲಿ ಮನೆಗಳ ಪಟ್ಟಾ ವಿತರಿಸಿದರೆ ದುರುಪಯೋಗ ಆಗುತ್ತದೆ ಎಂದು ತಾಯಂದಿರ ಹೆಸರಲ್ಲಿ ವಿತರಿಸಿದರು ಎಂದು ತಿಳಿಸಿದರು.
ಜಿಪಂ ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿದರು. ತಾಪಂ ಅಧ್ಯಕ್ಷೆ ರಾಧಾ ಶಿಂಗನಳ್ಳಿ, ಪಪಂ ಅಧ್ಯಕ್ಷೆ ರೇಣುಕಾ ರವಿ ಹಾವೇರಿ, ಉಪಾಧ್ಯಕ್ಷ ಮಂಜುನಾಥ ಹರಮಲಕರ್, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ಫಣಿರಾಜ ಹದಳಗಿ, ರವಿ ಹಾವೇರಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಇತರರಿದ್ದರು. ಮೀನಾಕ್ಷಿಗೌಡ, ಪ್ರಭಾರ ಸಿಡಿಪಿಒ ದೀಪಾ ಬಂಗೇರ, ಪೂರ್ಣಿಮಾ ದೊಡ್ಡಮನಿ ನಿರ್ವಹಿಸಿದರು.