ಬೆಂಗಳೂರು: ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ (ಅ.29) ಒಂದು ವರ್ಷ. ಮೊದಲನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಪುಣ್ಯಭೂಮಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಭೇಟಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ‘ನೀವು ಒಂದ್ ಸಲ ಹೊಗಳಿದ್ರೆ …’; ರಜನಿಕಾಂತ್ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಭ್
ಕಳೆದ ವರ್ಷ ಅ. 29ರಂದು ತೀವ್ರ ಹೃದಯಾಘಾತದಿಂದ ಪುನೀತ್ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಗಿತ್ತು. ಈ ಪುಣ್ಯಭೂಮಿಗೆ ಅಲ್ಲಿಂದ ಇಲ್ಲಿಯವರೆಗೂ ಲಕ್ಷಾಂತರ ಜನ ಭೇಟಿ ನೀಡಿದ್ದು, ಇಂದು ಪುಣ್ಯ ಸ್ಮರಣೆ ಅಂಗವಾಗಿ ನಿನ್ನೆ ರಾತ್ರಿಯಿಂದಲೇ ಸಾವಿರಾರು ಜನರು ಬರುತ್ತಿದ್ದಾರೆ. ರಾತ್ರಿ ಇಡೀ ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ಇನ್ನು, ಇಂದು ಬೆಳಿಗ್ಗೆಯೇ ಪುನೀತ್ ಅವರ ಕುಟುಂಬಸ್ಥರು ಮತ್ತು ಆಪ್ತರು ಪುನೀತ್ ಪುಣ್ಯಭೂಮಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ, ಸಹೋದರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಧನ್ಯಾ ರಾಮ್ ಕುಮಾರ್, ಅಮೋಘವರ್ಷ, ಯುವ ರಾಜಕುಮಾರ್, ವಿನಯ್ ರಾಜಕುಮಾರ್ ಸೇರಿದಂತೆ ಹಲವರು ಇದ್ದರು.
ಪುನೀತ್ ಅವರ ಸಮಾಧಿಗೆ ಪ್ರದಕ್ಷಿಣೆ ಹಾಕುವ ವೇಳೆ ಅಶ್ವಿನಿ ಮತ್ತು ಕುಟುಂಬದವರು ಭಾವುಕರಾಗಿ ಕಣ್ಣೀರು ಹಾಕಿದರು. ಆ ನಂತರ ಸಾವಿರಾರು ಸಂಖ್ಯೆಯಲ್ಲಿ ಕಾದಿದ್ದ ಅಭಿಮಾನಿಗಳಿಗೆ ಅಶ್ವಿನಿ ಅವರಿಂದ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ: ‘ವರಾಹ ರೂಪಂ’ ಹಾಡನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಕೋರ್ಟ್ ಆದೇಶ
ಈ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಏರಿದ ರಾಘವೇಂದ್ರ ರಾಜಕುಮಾರ್, ಮನೋಜವಂ ಆತ್ರೇಯ ಹಾಡಿದ ‘ಎಲ್ಲಿ ಮರೆಯಾದೆ ವಿಠಲ …’ ಹಾಡನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಿನ್ನ ಧ್ವನಿಯಲ್ಲಿ ಸಲ ಕೇಳಿದರೂ ಬೇಸರವಾಗುವುದಿಲ್ಲ. ನಮ್ಮ ತಂದೆ ಇದ್ದಿದ್ದರೆ, ನಿನ್ನಂದಲೇ ಹಾಡಿಸುತ್ತಿದ್ದರು’ ಎಂದು ಹೇಳಿದ್ದರ ಜತೆಗೆ, ಪುನೀತ್ ನೆನಪಲ್ಲಿ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ … ಹಾಡನ್ನು ಹಾಡಿದರು. ಶಿವರಾಜಕುಮಾರ್ ಸಹ ಒಂದು ಹಾಡು ಹಾಡಿದರು. ಈ ಸಂದರ್ಭದಲ್ಲಿ ಸುನೀಲ್ ರಾವ್, ಸಾಧು ಕೋಕಿಲ ಸೇರಿದಂತೆ ಹಲವರು ಹಾಜರಿದ್ದರು.