ಯುವರತ್ನ ಸಿನಿಮಾ ಮುಗಿಸಿ, ಜೇಮ್ಸ್ ಚಿತ್ರದ ಒಂದಷ್ಟು ಭಾಗದ ಶೂಟಿಂಗ್ನಲ್ಲಿ ಭಾಗವಹಿಸಿದ ಪುನೀತ್ ರಾಜ್ಕುಮಾರ್ ಸದ್ಯ ಪ್ರವಾಸದಲ್ಲಿದ್ದಾರೆ. ಉತ್ತರ ಕರ್ನಾಟಕದತ್ತ ಮುಖಮಾಡಿರುವ ಪುನೀತ್ ದಂಪತಿ, ಉತ್ತರ ಕನ್ನಡದ ದಾಂಡೇಲಿ, ಜೋಯಿಡಾಗೆ ತೆರಳಿ ಕಾಲ ಕಳೆದಿದ್ದಾರೆ. ಇದೀಗ ಧಾರವಾಡದ ಹೊರವಲಯದಲ್ಲಿರುವ ನುಗ್ಗಿಕೇರಿ ಹನುಪ್ಪನ ದರ್ಶನವನ್ನೂ ಪುನೀತ್ ಪಡೆದುಕೊಂಡಿದ್ದಾರೆ. ಇಂದು (ಮಂಗಳವಾರ) ಬೆಳಗ್ಗೆ ಪತ್ನಿ ಜತೆಗೆ ತೆರಳಿ ಅರ್ಚನೆ ಮಾಡಿಸಿ ಬಂದಿದ್ದಾರೆ. ಆ ಭೇಟಿಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇತ್ತೀಚೆಗಷ್ಟೇ ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನ ಪಡೆದಿದ್ದ ಪುನೀತ್, ಜೋಯಿಡಾದಲ್ಲಿ ಕಾಳಿ ನಡದಿಯ ಬಗ್ಗೆ ಸಾಕ್ಷ್ಯ ಚಿತ್ರದ ಶೂಟಿಂಗ್ ಸಲುವಾಗಿ ತೆರಳಿದ್ದರು. ಬಳಿಕ ಹಿರಿಯ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ಬಂದಿದ್ದರು. ಈಗ ಅಲ್ಲಿಂದ ನೇರವಾಗಿ ಧಾರವಾಡದ ನುಗ್ಗಿಕೇರಿಗೆ ಆಗಮಿಸಿ ಹನುಮನ ದರ್ಶನ ಪಡೆದಿದ್ದಾರೆ.