ಬೆಂಗಳೂರು: ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರದ ಮುಹೂರ್ತವು ಕಳೆದ ಸೋಮವಾರ ರಾಜಾಜಿನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.
ಇದನ್ನೂ ಓದಿ: ವೇದಿಕೆ ಮೇಲೆ ಜಗ್ಗೇಶ್ ಕಣ್ಣೀರಿಟ್ಟಿದ್ದು ಏಕೆ?
ಖ್ಯಾತ ನಿರ್ದೇಶಕ ಹಾಗು ಸಾಹಿತಿ ಯೋಗರಾಜ್ ಭಟ್ಟರು ಕ್ಯಾಮೆರಾ ಚಾಲನೆ ಮಾಡಿದರೆ, ಚಿತ್ರದ ನಿರ್ಮಾಪಕರಾದ ರವಿ ಶಾಮನೂರು ಪುತ್ರಿ ಸೃಷ್ಠಿ ಶಾಮನೂರ್ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.
ಇನ್ನುಳಿದಂತೆ ಚಿತ್ರದ ನಾಯಕ ಪೃಥ್ವಿ ಶಾಮನೂರ್, ನಾಯಕಿಯರಾದ ಅಂಜಲಿ ಅನೀಶ್ ಹಾಗು ಯಶಾ ಶಿವಕುಮಾರ್ ಜೊತೆಗೆ ಚಿತ್ರದ ಪ್ರಮುಖ ಪಾತ್ರದಾರಿಗಳು ಹಾಗು ತಂತ್ರಜ್ಞರು ಉಪಸ್ಥಿತರಿದ್ದು ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ: ‘ತೋತಾಪುರಿ’ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ: ಜಗ್ಗೇಶ್
ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಬೆಂಗಳೂರಿನಲ್ಲಿ ಶುರುವಾಗಿದ್ದು, ಚಿತ್ರದ ಎರಡನೇ ಹಂತದ ಚಿತ್ರೀಕರಣವನ್ನು ಮಲೆನಾಡಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಚಿತ್ರಕ್ಕೆ ‘ಅರ್ಜುನ್ ಜನ್ಯ’ ಸಂಗೀತ, ‘ಮಧು ತುಂಬಕೆರೆ’ ಸಂಕಲನ ಹಾಗು ‘ಸಂತೋಷ್ ರೈ ಪತಾಜೆ’ ಅವರ ಛಾಯಾಗ್ರಹಣ ಇರಲಿದೆ.