ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಸಂಬಂಧ ವಿವಿಧ ಸಮುದಾಯಗಳ ಹೋರಾಟ ನಡೆಯುತ್ತಿದ್ದು, ಇದೀಗ ಇದೇ ವಿಚಾರವಾಗಿ ಇನ್ನೊಂದು ಸಮುದಾಯ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಮಾತ್ರವಲ್ಲ, ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ.
ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರವರ್ಗ ‘2ಎ’ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬಲಿಜ ಸಂಘ ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತ್ತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಪ್ರತಿಭಟನಾಕಾರರು ನಮ್ಮಿಂದ ಕಸಿದುಕೊಂಡಿರುವ 2ಎ ಮೀಸಲಾತಿ ವಾಪಸ್ ನೀಡಬೇಕು. ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಹಾಗೂ ಹಾವನೂರು ಆಯೋಗದ ಶಿಫಾರಸ್ಸು ವರದಿಯಂತೆ ಮೀಸಲಾತಿ ಕಲ್ಪಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂಚೂಣಿಗೆ ಬರಬೇಕೆಂದರೆ ಸೂಕ್ತ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಮುದಾಯಕ್ಕೆ ಶೈಕ್ಷಣಿಕವಾಗಿ ‘2ಎ’ ಮೀಸಲಾತಿ ನೀಡಿದ್ದು, ಉದ್ಯೋಗ ಮತ್ತು ರಾಜಕೀಯದಲ್ಲಿ ಪ್ರವರ್ಗ ‘3ಎ’ ಮೀಸಲಾತಿ ಕಲ್ಪಿಸಲಾಗಿದೆ. ದೇಶದಲ್ಲೇ ಇಂಥ ಅರ್ಧಂಬರ್ಧ ಮೀಸಲಾತಿ ನೀಡಲಾಗಿದೆ. ರಾಜ್ಯ ಸರ್ಕಾರ ಬೇರೆ ಬೇರೆ ಸಮುದಾಯಗಳಿಗೆ ಮೀಸಲಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಅದರಂತೆ, ಹಿಂದುಳಿದಿರುವ ಬಲಿಜ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಬೇಕು. ಇದು ಹಲವು ವರ್ಷಗಳ ಪ್ರಮುಖ ಬೇಡಿಕೆ ಎಂದು ಸಮುದಾಯದವರು ಆಗ್ರಹಿಸಿದರು.
ಇದನ್ನೂ ಓದಿ: ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ
‘2ಎ‘ ಮೀಸಲಾತಿಗಾಗಿ ರಾಜ್ಯಾದ್ಯಂತ ಈಗಾಗಲೇ ಸಾಂಕೇತಿಕವಾಗಿ ಶಾಂತಿಯುತ ಉಪವಾಸ ಮತ್ತು ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆಯಾ ಜಿಲ್ಲೆಯ ಡಿಸಿಯವರಿಗೆ ಮತ್ತು ತಹಸೀಲ್ದಾರ್ಗಳಿಗೆ ಬಲಿಜ ಸಂಘ ಸಂಸ್ಥೆಗಳೂ ನಿರಂತರವಾಗಿ ಮನವಿ ಪತ್ರಗಳನ್ನು ಕೊಟ್ಟಿವೆ. ಆದರೂ, ಸರ್ಕಾರ ಉದಾಸೀನ ತೋರುತ್ತಿದೆ ಎಂದು ಸಂಘದ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು.
ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರವು ಪ್ರವರ್ಗ ‘2ಎ’ ಅಡಿ ಶಿಕ್ಷಣ ಮೀಸಲಾತಿಯನ್ನು ಉಳಿಸಿ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯನ್ನು ಪ್ರವರ್ಗ ‘3ಎ’ಅಡಿಯಿಂದ ಹೊಸದಾಗಿ ರಚಿಸಿರುವ ಪ್ರವರ್ಗ ‘2ಸಿ’ ನೀಡಿದ್ದಾರೆ. ಆದರೆ, ಇದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 28 ವರ್ಷಗಳಿಂದ ನಮ್ಮ ಸಮುದಾಯಕ್ಕೆ ಮೋಸವಾಗುತ್ತಿದೆ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಬಲಿಜ ಮತ್ತು ಇದರ ಉಪ ಜಾತಿಗಳ ಅಧ್ಯಯನ ನಡೆಸಿ ಅಗತ್ಯವಾದ ಮಾಹಿತಿ ಪಡೆದುಕೊಂಡಿದ್ದರೂ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿಲ್ಲ. ಹೈಕೋರ್ಟ್ನಲ್ಲಿ ನಮ್ಮ ಜನಾಂಗಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಕಾನೂನು ಹೋರಾಟ ನಡೆಸಲಾಗುತ್ತಿದೆ. ಜ.16ರಿಂದ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಂಖ್ಯಾಶಾಸಜ್ಞ ಜಯಶ್ರೀನಿವಾಸ್ ಗುರೂಜಿ ಹೇಳಿದ್ದಾರೆ.
6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು