ಬೆಂಗಳೂರು: ಭಾರತದ ಅಧಿಕೃತ ದಾಖಲೆಗಳಲ್ಲಿ ‘ಇಂಡಿಯಾ’ ಹೆಸರನ್ನು ಕೈಬಿಟ್ಟು ‘ಭಾರತ’ ಎಂದು ಬಳಸಿದ ಕಾರಣ ವಿವಾದ ಸೃಷ್ಟಿಯಾಗಿದೆ. ಇದೀಗ ಕಾಂಗ್ರೆಸ್ ನಾಯಕ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ‘ಭಾರತ’ ಹೆಸರನ್ನು ಬಳಸಿದಕ್ಕೆ ಕಿಡಿದಾರಿದ್ದಾರೆ.
‘ಎಕ್ಸ್’ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರವನ್ನು “ಗೇಮ್ ಚೇಂಜರ್ಸ್ ಅಲ್ಲ, ನೇಮ್ ಚೇಂಜರ್ಸ್” ಎಂದು ಟೀಕೆ ಮಾಡಿದ್ದಾರೆ. ತಮ್ಮ ಟ್ವೀಟ್ನಲ್ಲಿ “ಗೇಮ್ ಚೇಂಜರ್ಸ್” ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ್ರು. ಆದರೆ ಮೋದಿ ಸರ್ಕಾರ ಕೇವಲ “ನೇಮ್ ಚೇಂಜರ್ಸ್” ಆಗಿದೆ. 2014ರ ಮೊದಲು ಅಮೇರಿಕಾ, ಬ್ರಿಟನ್, ರಷ್ಯಾಗಳಂತಹ ಮುಂದುವರೆದ ದೇಶಗಳೊಂದಿಗೆ ಭಾರತದ ಸ್ಪರ್ಧೆ ಇತ್ತು. ಈಗ ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಹೆಸರಲ್ಲಿ ಜಾತಿ ಜನಾಂಗಗಳ ನಡುವೆ ದ್ವೇಷ ಬಿತ್ತಿ “ಮಣಿಪುರ್ ಮಾಡೆಲ್” ಸೃಷ್ಟಿಸಿದ್ದಾರೆ.
ಯಕಶ್ಚಿತ್ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳೊಂದಿಗೆ ಭಾರತವನ್ನು ತುಲನೆ ಮಾಡಿಕೊಂಡು ಬೆನ್ನುತಟ್ಟಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿರುವ ಬಿಜೆಪಿಯಿಂದ ಹೆಸರುಗಳ ಬದಲಾವಣೆಗಳನ್ನಲ್ಲದೆ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಸಮರ್ಥ ಆಡಳಿತಗಾರರು ಭಾರತದಲ್ಲಿ ಬದಲಾವಣೆ ತರುತ್ತಾರೆಯೇ ಹೊರತು ಭಾರತದ ಹೆಸರಿನ ಬದಲಾವಣೆಯನ್ನಲ್ಲ” ಎಂದು ಎಕ್ಸ್ ಪೋಸ್ಟ್ ಮೂಲಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಗೇಮ್ ಚೇಂಜರ್ಸ್" ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ "ನೇಮ್ ಚೇಂಜರ್ಸ್" ಆಗಿದೆ!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 6, 2023
2014ರ ಮೊದಲು ಅಮೇರಿಕಾ, ಬ್ರಿಟನ್, ರಷ್ಯಾಗಳಂತಹ ಮುಂದುವರೆದ ದೇಶಗಳೊಂದಿಗೆ ಭಾರತದ ಸ್ಪರ್ಧೆ ಇತ್ತು.
ಈಗ ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಹೆಸರಲ್ಲಿ ಜಾತಿ ಜನಾಂಗಗಳ ನಡುವೆ ದ್ವೇಷ ಬಿತ್ತಿ "ಮಣಿಪುರ್ ಮಾಡೆಲ್" ಸೃಷ್ಟಿಸಿದ್ದಾರೆ.…
ವಿವಾದಕ್ಕೆ ಕಾರಣವೇನು?
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಿ20 ಔತಣಕೂಟದ ಆಹ್ವಾನ ಪತ್ರ ವಿವಾದಕ್ಕೆ ಕಾರಣವಾದ ನಂತರ, ಮೋದಿ ಸರ್ಕಾರವು ಇಂಡಿಯಾ ಹೆಸರನ್ನು ಕೈಬಿಟ್ಟು ಕೇವಲ ‘ಭಾರತ’ವನ್ನು ದೇಶದ ಹೆಸರಾಗಿ ಉಳಿಸಲು ಯೋಜಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಸಂವಿಧಾನದಲ್ಲಿ ಏನಿದೆ?
ಆದರೆ, ಭಾರತೀಯ ಸಂವಿಧಾನದ ಅನುಚ್ಛೇದ 1ರಲ್ಲಿ “India, that is Bharath shall be a Union of Staes” ಎಂದು ಉಲ್ಲೇಖಿಸಲಾಗಿದೆ. ಭಾರತದ ಸಂವಿಧಾನವು ಪ್ರಸ್ತುತ ದೇಶವನ್ನು “ಇಂಡಿಯಾ, ಅಂದರೆ ಭಾರತ” ಎಂದು ಉಲ್ಲೇಖಿಸುತ್ತದೆ. ಇದೀಗ ವಿವಾದ ಮುನ್ನೆಲೆಗೆ ಬಂದಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಜನರು ದೇಶದ ಹೆಸರನ್ನು ಸರಳವಾಗಿ “ಭಾರತ” ಎಂದು ತಿದ್ದುಪಡಿ ಒತ್ತಾಯಿಸುತ್ತಿದ್ದಾರೆ.
ಸದ್ಯಕ್ಕೆ ಸೆಪ್ಟೆಂಬರ್ 18ರಿಂದ ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭವಾಗಲಿದ್ದು, ಈ ಬದಲಾವಣೆಯನ್ನು ಜಾರಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿಯನ್ನು ಪರಿಚಯಿಸಬಹುದು ಎಂಬ ಊಹಾಪೋಹಗಳಿವೆ.