ನವದೆಹಲಿ: ರಾಜಸ್ಥಾನದ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಪಕ್ಷದ ಶಾಸಕರು ಮಂಗಳವಾರ ಸಂಜೆ ಸಭೆ ಸೇರಲಿದ್ದಾರೆ. ಛತ್ತೀಸ್ಗಢ, ಮಧ್ಯಪ್ರದೇಶದಂತೆ ರಾಜಸ್ಥಾನದಲ್ಲೂ ಅಚ್ಚರಿ ಅಚ್ಚರಿಯನ್ನು ನಿರೀಕ್ಷಿಸಬಹುದು…
ಹೀಗೆಂದು ಬಿಜೆಪಿಯ ಹಿರಿಯ ನಾಯಕ ಕಿರೋಡಿ ಲಾಲ್ ಮೀನಾ ಹೇಳಿದ್ದಾರೆ.
ರಾಜಸ್ಥಾನದ ನೂತನ ಮುಖ್ಯಮಂತ್ರಿ ನೇಮಕದ ಬಗ್ಗೆ ಸಸ್ಪೆನ್ಸ್ ಮುಂದುವರೆದಿದ್ದು, ಬಿಜೆಪಿಯ ಮಾಜಿ ಸಂಸದ ಮತ್ತು ರಾಜಸ್ಥಾನದ ಶಾಸಕರಾಗಿ ಆಯ್ಕೆಯಾಗಿರುವ ಕಿರೋಡಿ ಲಾಲ್ ಮೀನಾ ಅವರು ಮಂಗಳವಾರ “ಅಚ್ಚರಿ” ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ. ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ನಿಮ್ಮ ವಿಶ್ಲೇಷಣೆ ತಪ್ಪಾಗಿದೆ… ನೀವು ಅಚ್ಚರಿಗೆ ಸಿದ್ಧರಾಗಿರಬೇಕು ಎಂದೂ ಅವರು ಹೇಳಿದರು.
ಶಾಸಕರ ಒಮ್ಮತದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಹೊಸದಾಗಿ ಚುನಾಯಿತರಾದ ಶಾಸಕರು ಮಂಗಳವಾರ ಸಂಜೆ ಜೈಪುರದ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ಸೇರಿ, ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡಲಿದ್ದಾರೆ. ಈ ಮಹತ್ವದ ಸಭೆಯಲ್ಲಿ ಕೇಂದ್ರ ವೀಕ್ಷಕರಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಹ ವೀಕ್ಷಕರಾಗಿ ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಭಾಗವಹಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅಶ್ವಿನಿ ವೈಷ್ಣವ್, ಬಾಬಾ ಬಾಲಕನಾಥ್ ಮೊದಲಾದವರು ಉನ್ನತ ಹುದ್ದೆಯ ರೇಸ್ನಲ್ಲಿದ್ದಾರೆ.
ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 199 ಸ್ಥಾನಗಳ ಪೈಕಿ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದೆ.
ಕಾಂಗ್ರೆಸ್ ದರೋಡೆ ಮುಂದುವರಿದಿರುವಾಗ ಯಾರಿಗೆ ಬೇಕು ‘ಮನಿ ಹೀಸ್ಟ್’ ಕಾಲ್ಪನಿಕ ಕಥೆ: ಪ್ರಧಾನಿ ಲೇವಡಿ