ನವದೆಹಲಿ: ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮನೆಯಿಂದ ಆದಾಯ ತೆರಿಗೆ ಇಲಾಖೆಯು 350 ಕೋಟಿ ರೂಪಾಯಿ ಕಪ್ಪು ಹಣ ಮತ್ತು ಅಂದಾಜು 3 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜನಪ್ರಿಯ ‘ಮನಿ ಹೀಸ್ಟ್’ (ಹಣದ ದರೋಡೆ) ನಾಟಕವನ್ನು ಉಲ್ಲೇಖಿಸಿದ ಪ್ರಧಾನಿ, ಕಾಂಗ್ರೆಸ್ 70 ವರ್ಷಗಳಿಂದ ದೇಶವನ್ನು ಲೂಟಿ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
“ನೀವು ಕಾಂಗ್ರೆಸ್ ಪಕ್ಷವನ್ನು ಹೊಂದಿರುವಾಗ ಭಾರತದಲ್ಲಿ ಯಾರಿಗೆ ಬೇಕು ‘ಮನಿ ಹೀಸ್ಟ್’ ಕಾಲ್ಪನಿಕ ಕಥೆ. ಅವರ ದರೋಡೆಗಳು 70 ವರ್ಷಗಳಿಂದಲೂ ಮುಂದುವರಿದಿವೆ!” ಎಂದು ಎಕ್ಸ್ ಪೋಸ್ಟ್ನಲ್ಲಿ ಪಿಎಂ ಮೋದಿ ಹರಿಹಾಯ್ದಿದ್ದಾರೆ. “ಕಾಂಗ್ರೆಸ್ ಪ್ರೆಸೆಂಟ್ಸ್ ದಿ ಮನಿ ಹೀಸ್ಟ್!” ಎಂದ ತಲೆಬರಹದೊಂದಿಗೆ ಬಿಜೆಪಿ ಹಂಚಿಕೊಂಡಿರುವ ವೀಡಿಯೊವನ್ನು ಸಹ ಅವರು ಲಗತ್ತಿಸಿದ್ದಾರೆ.
In India, who needs 'Money Heist' fiction, when you have the Congress Party, whose heists are legendary for 70 years and counting! https://t.co/J70MCA5lcG
— Narendra Modi (@narendramodi) December 12, 2023
ಒಡಿಶಾದಲ್ಲಿ ಅಕ್ರಮ ನಗದು ಹಣ:
ಒಡಿಶಾ ಮತ್ತು ಜಾರ್ಖಂಡ್ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯು ದಾಖಲೆ ಪ್ರಮಾಣದ 353 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದೆ.
ದೇಶದ ಯಾವುದೇ ತನಿಖಾ ಸಂಸ್ಥೆಯು ಒಂದೇ ಬಾರಿಗೆ ವಶಪಡಿಸಿಕೊಂಡು “ಅತಿ ಹೆಚ್ಚು” ನಗದು ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
350 ಕೋಟಿ ರೂಪಾಯಿಗೂ ಹೆಚ್ಚು ನಗದು ವಸೂಲಿಯಾದ ನಂತರ, ಒಡಿಶಾದಲ್ಲಿ ಆಡಳಿತ ಪಕ್ಷ ಬಿಜು ಜನತಾ ದಳ (ಬಿಜೆಡಿ), ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿವೆ.
ಕಳೆದ ಎರಡು ದಶಕಗಳಲ್ಲಿ ಒಡಿಶಾದಲ್ಲಿ ದೇಶದ ಮದ್ಯದ ವ್ಯಾಪಾರವನ್ನು ಕೈಗೊಳ್ಳಲು ಬಿಜೆಡಿ ಸರ್ಕಾರವು ಸಾಹು ಸಹೋದರರಿಗೆ ಮುಕ್ತ ಹಸ್ತ ನೀಡಿದೆ ಎಂದು ಒಡಿಶಾದ ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಈ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಡಿಯು, ಕೇಸರಿ ಪಕ್ಷದ ರಾಷ್ಟ್ರೀಯ ನಾಯಕತ್ವವು ಈ ವಿಷಯದಲ್ಲಿ ಕಾಂಗ್ರೆಸ್ ಅನ್ನು ಪ್ರಶ್ನಿಸಿದರೆ, ರಾಜ್ಯದ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. “ಒಡಿಶಾ ಬಿಜೆಪಿ ನಾಯಕರು ಇಲ್ಲಿ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಈ ಮೂಲಕ ಒಡಿಶಾ ಬಿಜೆಪಿ ನಾಯಕರು ಈ ವಿಷಯದಲ್ಲಿ ಕಾಂಗ್ರೆಸ್ ಅನ್ನು ಉಳಿಸಲು ಪಣ ತೊಟ್ಟಿದ್ದಾರೆ” ಎಂದು ಬಿಜೆಡಿ ವಕ್ತಾರರು ಆಪಾದಿಸಿದ್ದಾರೆ.
ಬಿಜೆಡಿ ಮತ್ತು ಬಿಜೆಪಿಯು ಅನಗತ್ಯವಾಗಿ ವಿವಾದದಲ್ಲಿ ತನ್ನನ್ನು ಎಳೆದಿದೆ. ಈ ಎರಡೂ ಪಕ್ಷಗಳು ಒಂದು ನಾಣ್ಯದ ಎರಡೂ ಮುಖಗಳು ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.