ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಇನ್ನೂ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ಹಾಕಿದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ನಾಮಪತ್ರ ಸಲ್ಲಿಕೆ ವೇಳೆ ಮತದಾರರನ್ನು ಉದ್ಧೇಶಿಸಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಅಕ್ಕಂದಿರೇ, ನೀವು ಬಿಜೆಪಿಗೆ ಏನಾದರೂ ಓಟ್ ಹಾಕಿದರೆ ಅವರು ಗ್ಯಾರಂಟಿ ನಿಲ್ಲಿಸಿಬಿಡುತ್ತಾರೆ. ನನ್ನನ್ನು ಹೇಗೆ ಆಶೀರ್ವದಿಸಿದಿರೋ ಅದೇ ರೀತಿ ರಕ್ಷಾ ರಾಮಯ್ಯ ಅವರನ್ನೂ ಆಶೀರ್ವದಿಸಿ ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ: ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು ಮಾಜಿ ಪ್ರಧಾನಿ ದೇವೇಗೌಡರು: ಸಚಿವ ವೆಂಕಟೇಶ್
ಕಾಂಗ್ರೆಸ್ ಸರ್ಕಾರದ ವತಿಯಿಂದ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಮನೆಗೆ ಎರೆಡೆರಡು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆ ಅಡಿ ಐದು ಕೆಜಿ ಅಕ್ಕಿ, ಮಿಕ್ಕ ಐದು ಕೆಜಿ ಅಕ್ಕಿಯ ಬದಲಿಗೆ ಹಣ ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ದುಡ್ಡು ಕೊಡುತ್ತೇವೆ ಎಂದರೂ ಅವರು ಅಕ್ಕಿ ಕೊಡುತ್ತಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಕ್ಕಂದಿರೇ ನೀವು ಬಿಜೆಪಿಗೆ ಏನಾದರೂ ವೋಟ್ ಹಾಕಿದರೆ ಅವರು ಗ್ಯಾರಂಟಿ ನಿಲ್ಲಿಸಿಬಿಡುತ್ತಾರೆ. ಮತ್ತೆ ಬಸ್ಸಿನಲ್ಲಿ ನೀವು ಟಿಕೆಟ್ ತಗೊಂಡು ಓಡಾಡಬೇಕಾಗುತ್ತದೆ. ಹಾಗಾಗಿ ಬಿಜೆಪಿಗೆ ಮತ ನೀಡಬೇಡಿ ಎಂದು ಹೇಳಿದ್ದಾರೆ.
ಈ ಹಿಂದೆ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೆ ಗ್ಯಾರಂಟಿ ಯೋಜನಗೆಳು ಸ್ಥಗಿತವಾಗಬಹುದು ಎಂದು ಹೇಳಿದ್ದು ವ್ಯಾಪಕ ವಿವಾದಕ್ಕೆ ಗುರಿಯಾಗಿತ್ತು. ನಂತರ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ ಎಂದು ಬಳಿಕ ಸ್ಪಷ್ಟನೆ ನೀಡಿದ್ದರು.