ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಿಜೆಪಿಯ ಟಿಕೆಟ್ ಕೈ ತಪ್ಪಿಸಿದ್ದೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಎಂದು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಆರೋಪಿಸಿದ್ದಾರೆ.
ನಗರದ ಮಂಚೇಗೌಡನಕೊಪ್ಪಲಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಯದುವೀರ್ ಹೆಸರೇ ಇರಲಿಲ್ಲ. ಯದುವೀರ್ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ವಿಚಾರ ನಮಗೇ ಗೊತ್ತಿರಲಿಲ್ಲ. ದಿಢೀರಾಗಿ ಅವರ ಹೆಸರು ಕೇಳಿಬಂತು. ದೇವೇಗೌಡರ ಕುಟುಂಬದಲ್ಲಿ ಆತ್ಮೀಯರಾಗಿರುವವರನ್ನು ವಿಚಾರಿಸಿದಾಗ ಸತ್ಯಾಂಶ ತಿಳಿದು ಬಂತು ಎಂದಿದ್ದಾರೆ.
ಇದನ್ನೂ ಓದಿ: ಫಾರ್ಚೂನರ್ ಕಾರು, 21 ಲಕ್ಷ ರೂ. ಹಣ ಕೊಡಲಿಲ್ಲವೆಂದು ಹೆಣ್ಣು ಮಗುವಿನ ತಾಯಿಯನ್ನು ಹೊಡೆದು ಕೊಂದ ಪತಿ ಮನೆಯವರು
ದೇವೇಗೌಡರ ಶಿಫಾರಸಿನ ಮೇರೆಗೆ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಟಿಕೆಟ್ ದೊರೆತ್ತಿದೆ. ನಮ್ಮ ಸಮಾಜದ (ಒಕ್ಕಲಿಗ) ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿ ಯದುವೀರ್ಗೆ ಟಿಕೆಟ್ ಕೊಡಿಸಿದ್ದಾರೆ. ಯದುವೀರ್ ವಂಶಸ್ಥರು ಕೆಆರ್ಎಸ್ ಅಣೆಕಟ್ಟೆ ನಿರ್ಮಾಣ ಮಾಡಿ ಮಂಡ್ಯ ಜನರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಗಾಗಿ ಯದುವೀರ್ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದರೆ ಮಂಡ್ಯದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಯದುವೀರ್ ಅವರನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಬಹುದು ಎಂಬುದು ದೇವೇಗೌಡರ ಲೆಕ್ಕಾಚಾರವಾಗಿದೆ. ದೇವೇಗೌಡರು ತಮ್ಮ ಸ್ವಾರ್ಥಕ್ಕಾಗಿ ಯದುವೀರ್ರನ್ನು ಚುನಾವಣೆಗೆ ನಿಲ್ಲಿಸಿದ್ದಾರೆಯೇ ಹೊರತು ಅವರನ್ನು ಗೆಲ್ಲಿಸಬೇಕು ಉದ್ದೇಶದಿಂದ ನಿಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಇರುವುದು ಕುಟುಂಬದ ಅಧಿಕಾರ ಉಳಿಸಿಕೊಳ್ಳಲು ಮಾತ್ರ. ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಜೆಡಿಎಸ್ನಲ್ಲೇ ಇದ್ದೆವು. ಅವರ ಸ್ವಾರ್ಥ ರಾಜಕಾರಣ ನೋಡಿ ನಾವು ಪಕ್ಷ ತೊರೆದೆವು. ಎಲ್ಲದಕ್ಕಿಂತ ಹೆಚ್ಚಾಗಿ ದೇವೇಗೌಡರ ಹತ್ತಿರದ ಸಂಬಂಧಿ ನಾನು. ಒಂದೇ ಕುಟುಂಬವನ್ನು ಎಲ್ಲಿ ತನಕ ಬೆಂಬಲಿಸುತ್ತೀರಾ, ಎಲ್ಲಿ ತನಕ ಸಾಕುತ್ತೀರಾ, ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಸಹ ನಮ್ಮ ಸಮುದಾಯದವರು, ಅವರನ್ನು ಬೆಂಬಲಿಸಿ. ದೇವೇಗೌಡರ ಕುಟುಂಬ ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪದೇ ಪದೇ ಆ ಕುಟುಂಬವನ್ನು ಬೆಂಬಲಿಸಬೇಡಿ ಎಂದು ಮನವಿ ಸಚಿವ ಕೆ. ವೆಂಕಟೇಶ್ ಮನವಿ ಮಾಡಿದ್ದಾರೆ.