ಆಲ್ದೂರು: ಸಂತೆ ದಿನವಾದ ಶನಿವಾರ ಅಂಗಡಿಗಳ ಮುಂದೆ ರಸ್ತೆ ಬದಿ ಬೇರೆ ವ್ಯಾಪಾರಿಗಳು ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಅಂಗಡಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣದ ವರ್ತಕರ ಸಂಘದಿಂದ ಆಲ್ದೂರು ಗ್ರಾಪಂ ಅಧ್ಯಕ್ಷೆ ರತ್ನಾ ಚಂದ್ರೇಗೌಡ ಹಾಗೂ ಪಿಡಿಒ ಸೋಮೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಶನಿವಾರ ಪಟ್ಟಣದಲ್ಲಿ ಸಂತೆ ನಡೆಯುತ್ತದೆ. ಹೊರಗಿನಿಂದ ಬಂದ ವ್ಯಾಪಾರಿಗಳು ಸಂತೆ ಸ್ಥಳ ಬಿಟ್ಟು ಮುಖ್ಯ ರಸ್ತೆಬದಿ ಅಂಗಡಿಗಳ ಮುಂದೆ ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ಅಂಗಡಿ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಚಪ್ಪಲಿಗಳು, ಪ್ಲಾಸ್ಟಿಕ್ ವಸ್ತುಗಳು, ಬಟ್ಟೆಗಳು, ತರಕಾರಿ, ಪಾತ್ರೆ ಅಂಗಡಿ ಹೀಗೆ ಹಲವು ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಗುಣಮಟ್ಟವಿಲ್ಲದ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಅಂಗಡಿ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ ಎಂದು ದೂರಿದರು.
ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ರಸ್ತೆ ಬದಿ ವ್ಯಾಪಾರ ಮಾಡುವವರು ಸಂತೆಗೆ ನಿಗದಿಯಾಗಿರುವ ಜಾಗದಲ್ಲಿ ವ್ಯಾಪಾರ ಮಾಡಲಿ. ರಸ್ತೆ ಬದಿ ವ್ಯಾಪಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಕಸ ವಿಲೇವಾರಿ ಟ್ರ್ಯಾಕ್ಟರ್ ವಾರದಲ್ಲಿ 2 ದಿನ ಮಾತ್ರ ಬರುತ್ತಿದೆ. ಕಸ ವಿಲೇವಾರಿ ಟ್ರ್ಯಾಕ್ಟರ್ಗೆ ಧ್ವನಿ ವರ್ಧಕ ಅಳವಡಿಸಬೇಕು. ಕಸದ ಬುಟ್ಟಿಗಳನ್ನು ಇಟ್ಟು ಸಮರ್ಪಕವಾಗಿ ಕಸ ವಿಲೇವಾರಿಗೆ ಕ್ರಮಕೈಗೊಳ್ಳಿ ಎಂದು ರಾಜು, ಮೂರ್ತಿ ಒತ್ತಾಯಿಸಿದರು.