ಬೆಂಗಳೂರು: ರಾಜಭವನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಕುರಿತು ಶೋಧ ನಡೆಸಿ ಸ್ಪಷ್ಟನೆ ನೀಡಿರುವ ಪೊಲೀಸ್ ಅಧಿಕಾರಿಗಳು ಇದೊಂದು ಹುಸಿ ಕರೆ ಎಂದು ಹೇಳಿದ್ದಾರೆ.
ಸೋಮವಾರ ತಡರಾತ್ರಿ ದೊಮ್ಮಲೂರಿನಲ್ಲಿರುವ ರಾಷ್ಟ್ರೀಯ ತನಿಖಾ ದಳ (NIA) ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೋರ್ವ ರಾಜಭಾವನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಸಿದ್ದ. ಕೂಡಲೇ ಮಾಹಿತಿ ಪಡೆದ ಅಧಿಕಾರಿಗಳು ರಾಜಭವನ್ಕಕೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಇದನ್ನೂ ಓದಿ: ಬಿಗ್ಬಾಸ್ ಸ್ಪರ್ಧಿ ವಿನಯ್ ಅವರಿಂದ ಅನುಭವಿಸಿರೋ ನೋವು ಅಷ್ಟಿಷ್ಟಲ್ಲಾ; ಗಂಭೀರ ಆರೋಪ ಮಾಡಿದ ಕಿರುತೆರೆ ನಟಿ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ರಾಜಭವನದಲ್ಲಿ ಯಾವುದೇ ರೀತಿಯ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಪರಿಶೀಲನೆ ನಂತರ ಇದೊಂದು ಹುಸಿ ಕರೆ ಎಂದು ತಿಳಿದು ಬಂದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕರೆ ಮಾಡಿರುವ ಅಪರಿಚಿತ ವ್ಯಕ್ತಿ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಇದೇ ರೀತಿಯ ಬಾಂಬ್ ಬೆದರಿಕೆ ಕರೆ ಬೆಂಗಳೂರಿನಾದ್ಯಂತ ಸುಮಾರು 44 ಶಾಲೆಗಳಿಗೆ ಅನಾಮಧೇಯ ಇಮೇಲ್ಗಳ ಮೂಲಕ ಬಂದಿತ್ತು. ಈ ಘಟನೆ ನಡೆದು 10 ದಿನಗಳು ಕೂಡ ಕಳೆದಿಲ್ಲ, ಅಷ್ಟರೊಳಗೆ ಇದೇ ರೀತಿಯ ಮತ್ತೊಂದು ಬೆದರಿಕೆ ಕರೆ ಮುನ್ನೆಲೆಗೆ ಬಂದಿದೆ.