ಕರ್ನೂಲ್: ಕೋವಿಡ್ನಿಂದಾಗಿ ನಿಮ್ಮ ತಂದೆ ಸಾವಿಗೀಡಾಗಿದ್ದಾರೆ ಎಂದು ಹೇಳಿ ಅಂಬ್ಯೂಲೆನ್ಸ್ ಸಿಬ್ಬಂದಿ ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ಭಾರತೀಯನೊಬ್ಬನಿಂದ ಶವ ಸಂಸ್ಕಾರ ವೆಚ್ಚಕ್ಕಾಗಿ 85,000ರೂ.ವಸೂಲಿ ಮಾಡಿದ್ದಾರೆ.
ಕ್ರಾಂತಿ ಕಿರಣ, ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಎನ್ಆರ್ಐ ಆಗಿದ್ದು, ತನಗೆ ಹೇಗೆ ಮೋಸಮಾಡಲಾಗಿದೆ ಎಂಬುದನ್ನು ಅವರು ಸೆಲ್ಫಿ ವಿಡಿಯೋ ಮೂಲಕ ದಾಖಲೆಯನ್ನಿಟ್ಟುಕೊಂಡಿದ್ದಾರೆ.
ಕರ್ನೂಲ್ನಲ್ಲಿರುವ ಕ್ರಾಂತಿ ಕಿರಣ್ ಅವರ ತಂದೆ ಕೆ. ಸಾಯಿನಾಥ್ ರಾವ್ (65)ಗೆ ಅನಾರೋಗ್ಯ ಉಂಟಾದಾಗ ಅವರನ್ನು ಕರೆದೊಯ್ಯಲು ಆಗಸ್ಟ್ 14 ರಂದು ಅಂಬ್ಯುಲೆನ್ಸ್ ಬಂದಿದೆ. ಆಸ್ಪತ್ರೆಗೆ ಸಾಗಿಸುವಾಗಲೇ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಆಗ ಖಾಸಗಿ ಅಂಬ್ಯುಲೆನ್ಸ್ ಸಿಬ್ಬಂದಿ ಹೊಸ ನಾಟಕ ಶುರು ಮಾಡಿ, ಕೋವಿಡ್ 19 ನಿಂದಾಗಿಯೇ ಈ ಸಾವು ಸಂಭವಿಸಿದೆ. ದೇಹ ಸೋಂಕಿಗೊಳಗಾಗಿದ್ದು, ಅಂಬ್ಯುಲೆನ್ಸ್ ಸಿಬ್ಬಂದಿ ಜಯರಾಜ್ ನೃತೃತ್ವದಲ್ಲಿ ಶವ ಸಂಸ್ಕಾರಕ್ಕೆ ನಿಗದಿಪಡಿಸಿದ 85 ಸಾವಿರ ರೂ. ನೀಡದ ಹೊರತು ಶವವನ್ನು ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ಅಂತ್ಯಕ್ರಿಯೆಗೆ ಅಂಬ್ಯುಲೆನ್ಸ್ ಸಿಬ್ಬಂದಿಗೆ ಆಸ್ಟ್ರೇಲಿಯಾದಿಂದ ಪಟ್ಣಮ್ ಸುರೇಶ್ ಬಾಬು ಎಂಬಾತನಿಗೆ ಕ್ರಾಂತಿ ಕಿರಣ್ 50 ಸಾವಿರ ರೂ. ಹಾಗೂ ಅವರ ಸಂಬಂಧಿಕರು 35 ಸಾವಿರ ರೂ.. ನೀಡಿದರು.
ನಂತರ ಕ್ರಾಂತಿ ಕಿರಣ್ ಕರ್ನೂಲ್ಗೆ ಬಂದಾಗ ಅಂಬ್ಯುಲೆನ್ಸ್ ಸಿಬ್ಬಂದಿ ತಮಗೆ ಹೇಗೆ ಮೋಸಮಾಡಿದ್ದಾರೆ ಎಂಬುದನ್ನು ಅರಿತರು. ಆಂಧ್ರ ಪ್ರದೇಶ ಸರ್ಕಾರ ಕೋವಿಡ್-19 ನಿಂದಾಗಿ ಮೃತಪಟ್ಟವರ ಅಂತ್ಯಕ್ರಿಯೆಗೆ 5000 ರೂ. ಭರಿಸುತ್ತದೆ ಎಂಬುದು ತಿಳಿದುಬಂತು.
ಟಿಡಿಪಿ ನಾಯಕರು ಆಂಧ್ರ ಸರ್ಕಾರದ ನಡೆಯನ್ನು ಟೀಕಿಸಿದ್ದು, ಕರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ 15 ಸಾವಿರ ರೂ.ನೀಡುವ ಭರವಸೆಗೆ ಏನಾಯಿತು ಎಂದು ಅವರು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.
ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕರ್ನೂಲ್ ಜಿಲ್ಲಾಧಿಕಾರಿ ವೀರಪಾಂಡಿಯನ್, ಕೋವಿಡ್ -19 ನಿಂದಾಗಿ ಅವರ ತಂದೆ ಮೃತಪಟ್ಟಿಲ್ಲ. ಖಾಸಗಿ ಆಂಬ್ಯುಲೆನ್ಸ್ ಸಿಬ್ಬಂದಿ ಅವರ ಕುಟುಂಬವನ್ನು ಸುಲಿಗೆಗಾಗಿ ದಾರಿ ತಪ್ಪಿಸಿದೆ ಎಂದು ಹೇಳಿದರು. ಪೊಲೀಸರು ಆಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಜಯರಾಜ್ನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ಬಂಧಿಸಲು ತನಿಖೆ ನಡೆಯುತ್ತಿದೆ. ಅಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
https://www.vijayavani.net/former-ips-officer-k-annamalai-joined-bjp-today/