ವಿಜಯಪುರ: ಕ್ರಿಪ್ಟೊ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದರೆ ಹೂಡಿದ ಹಣಕ್ಕೆ ಪ್ರತಿಶತ 200ರಷ್ಟು ಲಾಭಾಂಶ ನೀಡುವುದಾಗಿ ಉದ್ಯಮಿಯೊಬ್ಬರನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಉದ್ಯಮಿ ವಿಶಾಲಕುಮಾರ ಜೈನ್ ಎಂಬುವರನ್ನು ವಂಚಿಸಿ 59,12,765 ರೂಪಾಯಿ ಪಡೆದಿದ್ದ ಪ್ರಕರಣದಡಿ ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಇದೀಗ ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ನೈಜೇರಿಯಾದ ಒಸೆಮುದಿಯಾಮೆನ್ ಊರ್ಫ್ ಪೀಟರ್ ಇದೇಮುಸಿಯನ್ (38), ಎಮೆಕಾ ಊರ್ಫ್ ಹ್ಯಾಪಿ ನ್ವಾವೊಲಿಸಾ (40) ಹಾಗೂ ಒಬಿನ್ನಾ ಸ್ಟಾನ್ಲಿ ಇಹೆಕ್ವೇರೆನ್ (42) ಬಂಧಿತ ಆರೋಪಿಗಳು. ಬೆಂಗಳೂರಿನಲ್ಲಿಯೇ ಇವರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ ವಿವಿಧ ಕಂಪನಿಯ 21 ಮೊಬೈಲ್ಫೋನ್ಗಳು, 18 ಸಿಮ್ ಕಾರ್ಡ್, 1 ಲ್ಯಾಪ್ ಟಾಪ್, 2 ಪೆನ್ ಡ್ರೈವ್, 1 ಡೊಂಗಲ್, 2 ಎಟಿಎಂ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಂಕ್ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಋಷಿಕೇಶ ಸೋನಾವನೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
ಪ್ರಕರಣದಡಿ ಇನ್ನೂ ಹಲವರು ಇರುವ ಶಂಕೆ ಇದ್ದು ಎಸ್ಪಿ ಋಷಿಕೇಶ ಸೋನಾವನೆ ಹಾಗೂ ಎಎಸ್ಪಿ ಶಂಕರ ಮಾರಿಹಾಳ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಅವರ ನೇತೃತ್ವದ ತಂಡ ವ್ಯಾಪಕ ಜಾಲ ಬೀಸಿದೆ. ಅಗೆದಷ್ಟು ಆಳ ಎಂಬಂತೆ ಆರೋಪಿಗಳು ಪತ್ತೆಯಾಗುತ್ತಲೇ ಇದ್ದು ತಂಡ ಚುರುಕಿನ ಕಾರ್ಯಾಚರಣೆಗಿಳಿದಿದೆ.
ಪಿಎಸ್ಐ ಮಲ್ಲಿಕಾರ್ಜುನ ತಳವಾರ, ಪಿಎಸ್ಐ ಪಿ.ವೈ. ಅಂಬಿಗೇರ, ಸಿಬ್ಬಂದಿಯಾದ ಸಿದ್ದು ದಾನಪ್ಪಗೋಳ, ಪುಂಡಲೀಕ ಎಸ್.ಬಿರಾದಾರ, ದುಂಡು ಆರ್. ಪಾಟೀಲ, ಮಹಾಂತೇಶ ಬಿ. ಪಾಟೀಲ, ಎಸ್.ಆರ್. ಉಮನಾಬಾದಿ, ಎಂ.ಕೆ. ಹಾವಡಿ, ಎಂ.ಎಂ. ಕುರುವಿನಶೆಟ್ಟಿ, ಎ.ಎಲ್. ದೊಡಮನಿ, ಆರ್.ವಿ. ನಾಯಕ್, ಆರ್.ಬಿ. ಕೋಳಿ, ಡಿ.ಎಸ್. ಗಾಯಕವಾಡ, ಕುಮಾರ ರಾಠೋಡ, ಎ.ಆರ್. ಗದ್ಯಾಳ, ಎಸ್.ಆರ್. ಬಡಚಿ, ಎಂ.ಎಚ್. ಇಚ್ಚೂರ, ಎಸ್.ಐ. ಹೆಬ್ಬಾಳಟ್ಟಿ, ಎ.ಎಚ್. ಪಾಟೀಲ ಇದ್ದಾರೆ.
‘ಹ್ಯಾಪಿ ದಿವಾಳಿ..’ ಎಂದ ಅಭಿಮಾನಿಗೆ ಶಿವಣ್ಣ ಕೊಟ್ಟ ರಿಪ್ಲೈ ವೈರಲ್; ಅಂಥದ್ದೇನಂದ್ರು?