ಹಾಸನ: ಜೆಡಿಎಸ್ ಸಂಪೂರ್ಣ ಕುಟುಂಬ ಪಕ್ಷ. ಕಾಂಗ್ರೆಸ್ ಹಾಗೂ ಜೆಡಿಎಸ್ ಕುಟುಂಬ ರಾಜಕಾರಣ ಮಾಡಿಕೊಂಡು ಬರುತ್ತಿದೆ. ಕಾಂಗ್ರೆಸ್ ಕೂಡ ಪರಿವಾರವಾದಿ ಪಕ್ಷವಾಗಿದ್ದು, ಏನೇ ಅಭಿವೃದ್ಧಿ ಕಾರ್ಯ ಮಾಡಬೇಕೆಂದಾದರೂ ದೆಹಲಿ ಕುಟುಂಬವನ್ನು ಕೇಳಬೇಕಾದ ಪರಿಸ್ಥಿತಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಬಿಜೆಪಿ ಸಮಾವೇಶದಲ್ಲಿ ಮೋದಿ ಮಾತನಾಡುತ್ತಾ ಕಾಂಗ್ರೆಸ್ ಹಾಗೂ ಜೆಡಿಎಸ್ನ ಕುಟುಂಬ ರಾಜಕಾರಾಣದ ವಿರುದ್ಧ ಗುಡುಗಿದರು. ಕಾಂಗ್ರೆಸ್ನವರು ಒಂದು ಕುಟುಂಬದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವ ರಾಜಸ್ಥಾನ, ಛತ್ತೀಸ್ಗಢ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿವೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಕಿಡಿಕಾರಿದರು.
ಜೆಡಿಎಸ್ ಪ್ರೈವೇಟ್ ಲಿಮಿಟೆಡ್ ಪಾರ್ಟಿ
ಪ್ರಧಾನಿ ಮೋದಿ ಮಾತನಾಡುತ್ತಾ ಜೆಡಿಎಸ್ ಪ್ರೈವೇಟ್ ಲಿಮಿಟೆಡ್ ಪಾರ್ಟಿ ಎಂದು ವ್ಯಂಗ್ಯವಾಡಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಬೈಯ್ಯುತ್ತಿದ್ದ ಜೆಡಿಎಸ್, ಕಾಂಗ್ರೆಸ್ನವರು ಚುನಾವಣೆ ನಂತರ ಮೈತ್ರಿ ಮಾಡಿಕೊಂಡರು. ಹೀಗಾಗಿ ಜೆಡಿಎಸ್ಗೆ ನೀಡುವ ಪ್ರತಿಯೊಂದ ಮತವೂ ಕಾಂಗ್ರೆಸ್ ತೆಕ್ಕೆಗೆ ಹೋಗುತ್ತದೆ. ಕಾಂಗ್ರೆಸ್, ಜೆಡಿಎಸ್ನಿಂದ ರಾಜ್ಯ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ನಿಂದ ಸಮಾಜ ವಿಭಜನೆ
ಕಾಂಗ್ರೆಸ್ ಸಮಾಜವನ್ನು ವಿಭಜನೆ ಮಾಡುತ್ತಾ ಬರುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಜನರನ್ನು ಬಳಕೆ ಮಾಡುತ್ತಿವೆ. ಆದರೆ ಬಿಜೆಪಿ ಸಂತುಷ್ಟೀಕರಣ ರಾಜಕಾರಣ ಮಾಡುತ್ತಾ ಬರುತ್ತಿದೆ. ಮೂಲಸೌಕರ್ಯದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಕಾಂಗ್ರೆಸ್ ರಸಗೊಬ್ಬರ ಪೂರೈಕೆಯಲ್ಲೂ ಭ್ರಷ್ಟಾಚಾರ ಮಾಡಿ ರೈತರಿಗೆ ಮೋಸ ಮಾಡಿತು. ಆದರೆ ನಾವು ರೈತರ ಹಿತಾಸಕ್ತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯೂರಿಯಾ ಗೊಬ್ಬರ ಕೇವಲ 5-6 ರೂ.ಗೆ ಸಿಗುವಂತೆ ಮಾಡಿದ್ದೇವೆ. ನ್ಯಾನೋ ಯೂರಿಯಾ ಸದ್ಭಳಕೆಯಿಂದ ಹಣ ಉಳಿತಾಯ ಆಗುತ್ತಿದೆ. ರೈತರ ಖಾತೆಗೆ ನೇರವಾಗಿ ಇಂದು ಹಣ ಜಮಾವಣೆಯಾಗುತ್ತಿದೆ. ರೈತರ ಬದುಕು ಹಸನಾಗುತ್ತಿದೆ ಎಂದರು.