ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಲೇಹ್ ಭೇಟಿ ಅಗಾಧ ಪರಿಣಾಮವನ್ನುಂಟು ಮಾಡಿದೆ. ಒಂದೆಡೆ ಭಾರತದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂಬ ಸೂಚನೆ ಚೀನಾಕ್ಕೆ ರವಾನೆಯಾಗಿದ್ದರೆ, ಇನ್ನೊಂದೆಡೆ ಸ್ಥಳೀಯ ನಿವಾಸಿಗಳಿಗೆ ಸರ್ಕಾರ ತಮ್ಮೊಂದಿಗೆ ಇದೆ. ತಮ್ಮ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆ ಮೂಡಿದೆ.
ಅಷ್ಟೇ ಅಲ್ಲ, ಗಡಿಯಲ್ಲಿ ಹವಾಮಾನ ವೈಪರೀತ್ಯಗಳ ನಡುವೆಯೂ ಗಡಿ ಕಾಯುವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಯೋಧರಿಗೆ ಪ್ರಧಾನಿ ಭೇಟಿ ಸಂಜೀವಿನಿಯಂತೆ ಕೆಲಸ ಮಾಡಿದೆ. ಅವರಲ್ಲಿನ ಹುಮ್ಮಸ್ಸನ್ನು ನೂರಾರು ಪಟ್ಟು ಹೆಚ್ಚಿಸಿದೆ ಎಂದು ಹೇಳಲಾಗಿದೆ.
ದಾಳಿಗೆ ಸ್ಪಂದಿಸಿ, ಪ್ರಚೋದಿಸಬೇಡಿ: ಲೇಹ್ನಲ್ಲಿ ಸೇನಾಧಿಕಾರಿಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯಾವುದೇ ಕಾರಣಕ್ಕೂ ದಾಳಿ ಮಾಡುವಂತೆ ಶತ್ರು ಪಾಳೆಯವನ್ನು ಪ್ರಚೋದಿಸಬೇಡಿ. ಆದರೆ, ದಾಳಿ ಮಾಡಿದರೆ ಸುಮ್ಮನೆ ಕೂರಬೇಡಿ ಎಂಬ ಸಂದೇಶವನ್ನೂ ರವಾನಿಸಿದರು ಎನ್ನಲಾಗಿದೆ.
ಇದನ್ನೂ ಓದಿ: ಕರೊನಾ ಕುರಿತು ಚೀನಾ ಮಾಹಿತಿ ನೀಡಿಲ್ಲ – ಬದಲಾಯಿತು ಡಬ್ಲ್ಯುಎಚ್ಒ ವರಸೆ
ದೋವಲ್ ಮಿದುಳು: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಸ್ವತಃ ತಾವೇ ಸ್ವಪ್ರೇರಣೆಯಿಂದ ಎರಡು ವಾರಗಳ ಕ್ವಾರಂಟೈನ್ಗೆ ಒಳಗಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಲೇಹ್ ಭೇಟಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಯಶಸ್ವಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಲೇಹ್ನ ಕುಶೌಕ್ ಬಾಕುಲಾ ರಿಂಪೋಚಿ ವಿಮಾನ ನಿಲ್ದಾಣದಲ್ಲಿ ಇಳಿಯುವವರೆಗೂ ಅವರ ಲೇಹ್ ಭೇಟಿಯ ಸುಳಿವು ದೋವಲ್ ಮತ್ತು ಬೆರಳೆಣಿಕೆಯ ಅಧಿಕಾರಿಗಳಿಗೆ ಹೊರತುಪಡಿಸಿ ಬೇರಾರಿಗೂ ಗೊತ್ತಿರಲಿಲ್ಲ. ಅಷ್ಟು ಗುಟ್ಟಾಗಿ ಪ್ರಧಾನಿ ಭೇಟಿಯನ್ನು ದೋವಲ್ ರೂಪಿಸಿದ್ದರು.
ಪ್ರಧಾನಿ ವಿಮಾನದಿಂದ ಹೊರಬಂದಾಗ ಅಲ್ಲಿದ್ದವರೆಲ್ಲರೂ ಒಂದು ಕ್ಷಣ ಗಲಿಬಿಲಿಗೊಂಡರು. ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಬರಲಿದ್ದಾರೆ ಎಂಬುದು ಮಾತ್ರವೇ ಅವರಿಗೆ ಗೊತ್ತಿದ್ದದ್ದು ಇದಕ್ಕೆ ಕಾರಣ. ತಕ್ಷಣ ಸುಧಾರಿಸಿಕೊಂಡ ಅವರು, ಪ್ರಧಾನಿ ಅವರನ್ನು ಸೂಕ್ತ ಗೌರವಾದರಗಳೊಂದಿಗೆ ಬರಮಾಡಿಕೊಂಡರು. ಲಡಾಖ್ನ ಪೂರ್ವಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರ ಆಕ್ರಮಣಕಾರಿ ನಿಲುವನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನಾಪಡೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸೇನಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾಪಡೆ ಮುಖ್ಯಸ್ಥ ಎಂ.ಎಂ. ನರವಾನೆ ಜತೆಗೂಡಿ ಪ್ರಧಾನಿ ಮೋದಿ ಮೊದಲು ನೀಮುವಿನಲ್ಲಿರುವ 14 ಕೋರ್ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಉತ್ತರ ಭಾಗ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಷಿ ಉಪಸ್ಥಿತಿಯಲ್ಲಿ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಪ್ರಧಾನಿಗೆ ಗಡಿಯಲ್ಲಿನ ವಾಸ್ತವ ಸ್ಥಿತಿಯನ್ನು ವಿವರಿಸಿದರು.