ನವದೆಹಲಿ: ಅಂಫಾನ್ ಚಂಡಮಾರುತಕ್ಕೆ ಭಾರತ ಮತ್ತು ಬಾಂಗ್ಲಾದೇಶ ತತ್ತರಿಸಿದೆ. ಈವರೆಗೆ 84 ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಮೇಲೆ ಅಂಫಾನ್ ಹೊಡೆತ ತೀವ್ರವಾಗಿದ್ದು, ನಿನ್ನೆ (ಗುರುವಾರ) ಸಂಜೆ ಅಲ್ಲಲ್ಲಿ ಭೂಕುಸಿತ ಸಂಭವಿಸಿರುವುದರ ಜತೆಗೆ ಮರಗಳು ಧರೆಗುರುಳಿವೆ.
ಬಂಗಾಳದಲ್ಲಿ ಕರೊನಾಗಿಂತ ಅಂಫಾನ್ ಭೀಕರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಲೆಕಾಪ್ಟರ್ ಮೂಲಕ ಬಸಿರ್ಹತ್ಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ನಂತರ ಒಡಿಶಾದ ಭುವನೇಶ್ವರ್ಗೂ ತೆರಳಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಇದನ್ನೂ ಓದಿ: ದೋಸೆ ತವಾದಿಂದ ಹೊಡೆದು ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾದ ಪ್ರಿಯಕರ
ಕೋಲ್ಕತ, ಹೌರಾ ಸೇರಿದಂತೆ ಅನೇಕ ಪಟ್ಟಣ, ನಗರಗಳು ಹಾಗೂ ಕರಾವಳಿ ತೀರ ಪ್ರದೇಶದ ಗ್ರಾಮಗಳಲ್ಲಿ ಅನೇಕ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ದಶಕಗಳ ನಂತರ ಪಶ್ಚಿಮ ಬಂಗಾಳಕ್ಕೆ ತಟ್ಟಿದ ಭೀಕರ ಚಂಡಮಾರುತ ಇದಾಗಿದ್ದು, ಅನೇಕ ಸೇತುವೆಗಳು, ಮರಗಳು ನೆಲಕಚ್ಚಿವೆ. ಗಂಟೆಗೆ 185 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು, ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತ ಮಾಡಿದೆ.
ಅಂಫಾನ್ ಹೊಡೆತಕ್ಕೆ ನಲುಗಿರುವ ಪ್ರದೇಶದ ಜನತೆಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ಮೋದಿ ನಿನ್ನೆಯೇ ಭರವಸೆ ನೀಡಿದ್ದಾರೆ. ಟ್ವೀಟ್ ಮಾಡಿದ್ದ ಅವರು ಪಶ್ಚಿಮ ಬಂಗಾಳ ಪರಿಸ್ಥಿತಿಯ ದೃಶ್ಯಗಳನ್ನು ನೋಡಿದ್ದೇನೆ. ಇಂತಹ ಸವಾಲಿನ ಸಮಯದಲ್ಲಿ ಇಡೀ ರಾಷ್ಟ್ರವೇ ಪಶ್ಚಿಮ ಬಂಗಾಳ ಜತೆ ಒಗ್ಗಟ್ಟು ಪ್ರದರ್ಶಿಸಲಿದೆ. ರಾಜ್ಯದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿಕೊಳ್ಳುತ್ತೇನೆ. ಪರಿಸ್ಥಿತಿಯನ್ನು ತಹಬದಿ ತರುವ ಕಾರ್ಯ ನಡೆಯುತ್ತಿದೆ ಎಂದು ಮೋದಿ ತಿಳಿಸಿದ್ದರು.
ಇದನ್ನೂ ಓದಿ: ಮದುವೆ ಆಗುವುದಾಗಿ ನಂಬಿಸಿ ಧೋಖಾ: ಇಬ್ಬರು ಮಹಿಳೆಯರಿಗೆ 63 ಲಕ್ಷ ರೂ. ವಂಚನೆ
ಪಶ್ಚಿಮ ಬಂಗಾಳವೊಂದರಲ್ಲೇ ಅಂಫಾನ್ಗೆ 72 ಮಂದಿ ಅಸುನೀಗಿದ್ದಾರೆ. ಒಡಿಶಾದಲ್ಲಿ ಇಬ್ಬರು ಮತ್ತು ಬಾಂಗ್ಲಾದೇಶದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಬಹುತೇಕ ಸಾವು ಗೋಡೆ ಕುಸಿತ, ನೀರುಪಾಲ ಮತ್ತು ಮರಗಳು ಧರೆಗುರುಳಿದ ಕಾರಣದಿಂದಾಗಿದೆ. (ಏಜೆನ್ಸೀಸ್)
ಅಂಫಾನ್ ಚಂಡಮಾರುತಕ್ಕೆ 12 ಬಲಿ: ಕರೊನಾಗಿಂತ ಭೀಕರ ಎಂದ ಸಿಎಂ ಮಮತಾ ಬ್ಯಾನರ್ಜಿ