ನವದೆಹಲಿ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಗೃಹಸಚಿವ ಅಮಿತ್ ಷಾ, ಪ್ರತಿಪಕ್ಷವು ಕರೊನಾ ವೈರಸ್ ವಿಚಾರದಲ್ಲಿ ಚಿಲ್ಲರೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಕಿಡಿಕಾರಿರುವ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಅಡಿಯಲ್ಲಿ ಕರೊನಾ ವೈರಸ್ ತಡೆಗಟ್ಟಲು ಇಡೀ ಭಾರತ ಹೋರಾಡುತ್ತಿದೆ. ಜಾಗತಿಕ ಹಾಗೂ ದೇಶೀಯವಾಗಿ ಇದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಕೋವಿಡ್ 19 ಮಣಿಸಲು 130 ಕೋಟಿ ಭಾರತೀಯರು ಒಗ್ಗೂಡಿದ್ದಾರೆ. ಆದರೆ, ಕಾಂಗ್ರೆಸ್ ಚಿಲ್ಲರೆ ರಾಜಕೀಯ ಮಾಡುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಅವರು ದೇಶದ ಹಿತಾಸಕ್ತಿ ಬಗ್ಗೆ ಚಿಂತಿಸಿ, ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದ್ದಾರೆ.
ಇದಕ್ಕೂ ಮುನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ 21 ದಿನಗಳ ಲಾಕ್ಡೌನ್ ಅನ್ನು ಟೀಕಿಸಲಾಯಿತು. ಯಾವುದೇ ಯೋಜನೆಯಿಲ್ಲದೇ ಪ್ರಧಾನಿ ಮೋದಿ ಸರ್ಕಾರ ಲಾಕ್ಡೌನ್ ಅನುಷ್ಠಾನಕ್ಕೆ ತಂದಿದೆ. ಹಳ್ಳಿಯಿಂದ ಬಂದು ದೊಡ್ಡ ದೊಡ್ಡ ನಗರಗಳಲ್ಲಿ ದಿನಗೂಲಿ ಮಾಡುತ್ತಿದ್ದವರ ಮೇಲೆ ತುಂಬಾ ಪರಿಣಾಮ ಬೀರಿದೆ ಎಂದು ಕಿಡಿಕಾರಿದ ಬೆನ್ನಲ್ಲೇ ಷಾ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಇಡೀ ರಾಷ್ಟ್ರ ಹಾಗೂ ಸರ್ಕಾರ ಬಡವರು ಮತ್ತು ವಲಸಿಗರ ಪರವಾಗಿ ಒಟ್ಟಿಗೆ ನಿಲ್ಲುವಂತೆ ಒತ್ತಾಯಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಂಬರುವ ಕಷ್ಟದ ದಿನಗಳಲ್ಲಿ ಅವರಿಗೆ ಸಂಪೂರ್ಣ ಬೆಂಬಲ ಕೊಡಬೇಕಿದೆ ಎಂದರು.
ಇದೇ ವೇಳೆ ವಲಸಿಗರ ಬಿಕ್ಕಟ್ಟಿನ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ, ನಿರ್ದಿಷ್ಟ ತಂತ್ರದೊಂದಿಗೆ ಭಾರತವನ್ನು ಅಭಿವೃದ್ಧಿ ಪಡಿಸಿ ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದರು. ಅಲ್ಲದೆ, ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಬಡವರಿಗೆ ನೆರವಾಗಲು ಕರೆ ನೀಡಿದರು. (ಏಜೆನ್ಸೀಸ್)
ನಿಮ್ಮ ಸಮೀಪದಲ್ಲಿರೋ ಕರೊನಾ ಸೋಂಕಿತನ ಬಗ್ಗೆ ಎಚ್ಚರಿಸಲಿದೆ ಕೇಂದ್ರ ಸರ್ಕಾರದ ನೂತನ ‘ಆರೋಗ್ಯ ಸೇತು’ ಆ್ಯಪ್!
ಲಾಕ್ಡೌನ್ನಿಂದ ಬಡವರಿಗೆ ತೀವ್ರ ಸಂಕಷ್ಟಕ್ಕೆ ಪ್ರಧಾನಿ ಮೋದಿ ಸ್ಪಂದನೆ, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ